ಅಂಕಣಕಥೆ

ದಾನ ಹೇಗಿರಬೇಕು ಗೊತ್ತಾ.? ಡಾ.ಈಶ್ವರಾನಂದರ ಕಥೆ ಬರಹ ಓದಿ

ದಿನಕ್ಕೊಂದು ಕಥೆ

ದಾನ ಹೇಗಿರಬೇಕು?

ಈ ಪ್ರಪಂಚದಲ್ಲಿ ಪ್ರತಿಯೊಬ್ಬನೂ ಮಾಡಲೇಬೇಕಾದ ಕರ್ತವ್ಯಗಳು ಅನೇಕ ಇವೆ. ಶಾಸ್ತ್ರಕಾರರು ಧಾರ್ಮಿಕ ದೃಷ್ಟಿಯಿಂದ ಮಾಡಲೇಬೇಕಾದ ಆರು ಕರ್ತವ್ಯಗಳನ್ನು ನಿರೂಪಿಸಿದ್ದಾರೆ. ಪ್ರತಿನಿತ್ಯವೂ ದೇವಪೂಜೆ, ಗುರುಸೇವೆ, ಸ್ವಾಧ್ಯಾಯ, ಸಂಯಮ, ತಪಸ್ಸು ಮತ್ತು ದಾನ- ಈ ಆರು ಕರ್ತವ್ಯಗಳನ್ನು ನಿರ್ವಹಿಸಬೇಕೆಂದು ಹೇಳಿದ್ದಾರೆ. ಗೃಹಸ್ಥರೂ, ಗೃಹಿಣಿಯರೂ ಈ ಆರು ಬಗೆಯ ಕರ್ತವ್ಯಗಳನ್ನು ಮಾಡುವುದರಿಂದ ಇಹಲೋಕ ಮತ್ತು ಪರಲೋಕಗಳೆರಡನ್ನೂ ಸುಧಾರಿಸಿಕೊಳ್ಳಬಹುದು ಎನ್ನಲಾಗಿದೆ.

ಈ ಆರು ಕರ್ತವ್ಯಗಳ ಪೈಕಿ ಮೊದಲನೆಯ ಐದು ಅಂದರೆ, ದೇವಪೂಜೆ, ಗುರುಪೂಜೆ, ಸ್ವಾಧ್ಯಾಯ, ಸಂಯಮ, ತಪಸ್ಸು- ವ್ಯಕ್ತಿಯ ಉನ್ನತಿಗೆ ಇಲ್ಲವೇ ಆತ್ಮೋದ್ಧಾರಕ್ಕೆ ಪೂರಕವಾಗಿದ್ದರೆ, ಆರನೇ ಕರ್ತವ್ಯವಾದ ದಾನವು ವ್ಯಕ್ತಿ ಮತ್ತು ಸಮಾಜಗಳೆರಡರ ಉನ್ನತಿಗೂ ಪೂರಕವಾಗಿರುತ್ತದೆ.

ಆದರೆ ದಾನವೆಂಬುದು ಹೇಗಿರಬೇಕೆಂಬುದನ್ನು ನಿರೂಪಿಸುವ ಬುದ್ಧ -ಜಾತಕ ಕಥೆಯ ಒಂದು ಪ್ರಸಂಗ ಅತ್ಯಂತ ರೋಚಕವಾಗಿದೆ. ಎರಡೂವರೆ ಸಾವಿರ ವರ್ಷಗಳ ಹಿಂದಿನ ಕತೆ. ಭಗವಾನ್ ಬುದ್ಧರು ಅನೇಕ ದಿನಗಳ ವಿಹಾರದ ಬಳಿಕ ಮಗಧ ದೇಶದ ರಾಜಧಾನಿಯತ್ತ ಹೊರಟರು.

ಆಗ ಗ್ರಾಮೀಣ ಪ್ರದೇಶದ ಜನರು ಓಡೋಡಿ ಬಂದು ಬಗೆಬಗೆಯ ಕಾಣಿಕೆಗಳನ್ನು ತಂದರು. ಸಾಮ್ರಾಟ್ ಬಿಂಬಸಾರನಾದರೋ ಅತ್ಯಮೂಲ್ಯ ಉಡುಗೊರೆಗಳನ್ನು ತಂದೊಪ್ಪಿಸಿದ. ಆಗ ಭಗವಾನ್ ಬುದ್ಧರು ದಾನ ಸ್ವೀಕಾರ ಮಾಡಲೆಂದು ಬಲಗೈಯನ್ನೆತ್ತುತ್ತಿದ್ದರು.

ಇಷ್ಟರಲ್ಲಿ ಸಾವಿರಾರು ಮಂದಿಯ ಜನಸಂದಣಿಯ ನಡುವೆ ನುಗ್ಗಿ, ಒಬ್ಬ ಮುದುಕಿ ತನ್ನ ಕಾಣಿಕೆಯನ್ನು ಕೊಡಲೆಂದು ಬಂದವಳೇ ಕೈ ಮುಗಿದು ನುಡಿದಳು- ‘ಹೇ ಮಹಾಪ್ರಭು, ನಾನೋ ಬಡವಿ. ನಿಮಗೊಪ್ಪಿಸಲು ಅರ್ಹವಾದ ವಸ್ತು ನನ್ನ ಬಳಿ ಇಲ್ಲವೇ ಇಲ್ಲ. ನನಗೆ ಮರದಿಂದ ಬಿದ್ದ ಒಂದು ಮಾವಿನ ಹಣ್ಣು ಸಿಕ್ಕಿತು. ಅದನ್ನೇ ನಿಮಗೆ ಅರ್ಪಿಸುತ್ತಿದ್ದೇನೆ ಎಂದು ಅರ್ಧ ತಿಂದ ಮಾವಿನ ಹಣ್ಣನ್ನು ಮುಂದಕ್ಕೆ ಚಾಚಿದಳು.

ಅರ್ಧ ಮಾವಿನ ಹಣ್ಣನ್ನು ಕಂಡು ಬುದ್ಧರು ಪ್ರಶ್ನಿಸಿದರು-‘ ಅಮ್ಮ, ಇದರ ಉಳಿದರ್ಧ ಎಲ್ಲಿ ಹೋಯ್ತು?’ ಎಂದಾಗ ಮುದುಕಿ ಉತ್ತರಿಸಿದಳು. ‘ನಾನು ಮಾವಿನ ಹಣ್ಣು ತಿನ್ನುತ್ತಿರುವಾಗಲೇ ನೀವು ತೆರಳುವ ಸಮಾಚಾರ ಸಿಕ್ಕಿತು. ನನ್ನ ಬಳಿ ಬೇರೇನೂ ಇಲ್ಲದ್ದರಿಂದ ಇದನ್ನೇ ಅರ್ಪಿಸಲೆಂದು ಬಂದೆ’. ಈ ಮಾತನ್ನು ಕೇಳಿದ ಬುದ್ಧರು ತಮ್ಮ ಆಸನದಿಂದ ಇಳಿದು ಬಂದು, ಹಣ್ಣು ಸ್ವೀಕಾರ ಮಾಡಿದರು.

ಆಗ ಬಿಂಬಸಾರ ಕೇಳಿದ ‘ಹೇ ಭಗವಾನ್, ನೀವು ಬಹುಮೂಲ್ಯ ಕಾಣಿಕೆಗಳನ್ನು ಕೇವಲ ಕೈಯಾಡಿಸಿ ಸ್ವೀಕಾರ ಮಾಡಿದಿರಿ. ಆದರೆ ಮುದುಕಿಯ ಅರ್ಧ ಎಂಜಲು ಹಣ್ಣನ್ನು ಸ್ವೀಕರಿಸಲು ಕೆಳಗಿಳಿದು ಬಂದಿರಿ. ಇದೇಕೆ ಹೀಗೆ?’ ಮುಗುಳ್ನಗುತ್ತಾ ಬುದ್ಧ ನುಡಿದರು-

‘ನೀವುಗಳೆಲ್ಲ ಕೊಟ್ಟದ್ದು ನಿಮ್ಮ ಸಂಪತ್ತಿನ ಒಂದು ಸಣ್ಣ ಅಂಶ ಮಾತ್ರ! ಅದಲ್ಲದೆ ಅಹಂಕಾರದಿಂದ ದಾನ ನೀಡುತ್ತೀರಿ. ಆದರೆ ಈ ಅಜ್ಜಿ ತನ್ನ ಬಳಿ ಇದ್ದುದೆಲ್ಲವನ್ನೂ ಪ್ರೀತಿ ಪೂರ್ವಕವಾಗಿ ಒಪ್ಪಿಸಿದ್ದಾರೆ. ಇಂತಹ ನಿರ್ಮಲ ಅಂತಃಕರಣದ ಪ್ರೀತಿ ಮುಖ್ಯ. ಕಾಣಿಕೆಯ ಮೌಲ್ಯವಲ್ಲ’ ಎಂದರು.

ಈ ಮಾತನ್ನು ಕೇಳಿ ಬಿಂಬಸಾರ ತಲೆದೂಗಿ ಬಾಗಿದ. ಇಲ್ಲೆಂತಹ ಉನ್ನತ ಆದರ್ಶ ಹುದುಗಿದೆ. ಇತರರಿಗೆ, ವಿಶೇಷವಾಗಿ ಗಣ್ಯರಿಗೆ ನಾವು ಒಪ್ಪಿಸುವ ವಸ್ತುವಿಗಿಂತಲೂ, ಅದರ ಹಿನ್ನೆಲೆಯಲ್ಲಿರುವ ಭಾವನೆಗಳು ಮುಖ್ಯ. ಶುದ್ಧ ಅಂತಃಕರಣದಿಂದ ಪ್ರೀತಿ- ಸ್ನೇಹ- ಭಕ್ತಿ ಭಾವದಿಂದ ಅರ್ಪಿಸಿದ ಸಣ್ಣ ವಸ್ತುವೂ ಮಹತ್ವದ್ದಾಗಬಲ್ಲುದು. ವಸ್ತುವಲ್ಲ ಮನಸ್ಸು ಮುಖ್ಯ.

ಸಂಗ್ರಹ
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882

Related Articles

One Comment

  1. ತುಂಬಾ ಉತ್ತಮ ಲೇಖನ ಗುರುಗಳೇ ದಾನದ ಅಹಂಕಾರ ಇರಬಾರದು ಹಾಗೂ ದಾನದ ಹೆಸರು ಕೂಡಾ ಯಾರಿಗೂ ಹೇಳಬಾರದು ಎಂಬ ನಿಮ್ಮ ಈ ಲೇಖನ, ಬರಹ ಬಹಳ ಉತ್ತಮವಾಗಿ ಮೂಡಿ ಬಂದಿದೆ… ಧನ್ಯವಾದಗಳು ಗುರುಗಳೇ

Leave a Reply

Your email address will not be published. Required fields are marked *

Back to top button