ಅರಿಕೇರಾವನ್ನು “ಅರವಿನ ಕೆರೆ” ಯಾಗಿಸಲು ಶ್ರಮಿಸಿದ್ದ ಶ್ರೀ ಶಿವೈಕ್ಯ.!
ಅರಕೇರಾ ಸಿದ್ಧಲಿಂಗ ಸ್ವಾಮೀಜಿ ಶಿವೈಕ್ಯ
ಯಾದಗಿರಿ : ತಾಲೂಕಿನ ಅರಕೇರಾ (ಕೆ) ಗ್ರಾಮದ
ಸಿದ್ಧಾರೂಢ ಬ್ರಹ್ಮವಿದ್ಯಾಶ್ರಮದ ಪೂಜ್ಯ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ಶಿವೈಕ್ಯಯಾಗಿರುವ ಸಂಗತಿ ತಿಳಿದ ಅಪಾರ ಭಕ್ತರು ಶೋಕದಲ್ಲಿ ಮುಳುಗಿದ್ದಾರೆ
2 ಅಕ್ಟೋಬರ್ 1972ರಲ್ಲಿ ಯಾದಗಿರಿ ತಾಲೂಕಿನ ಬಾಚವಾರದಲ್ಲಿ ಮಾತೋಶ್ರೀ ಅನಂತಮ್ಮ ಶರಣಪ್ಪರ ಉದರದಲ್ಲಿ ಜನ್ಮಿಸಿದ ಪೂಜ್ಯರು, ಬಾಲ ಬ್ರಹ್ಮಚಾರಿಯಾಗಿ ತನ್ನ 14 ನೇ ವಯಸ್ಸಿನಲ್ಲಿ 2-10-1986 ರಲ್ಲಿ ಬಸವಾನಂದ ಮಹಾಸ್ವಾಮಿಗಳಿಂದ ದೀಕ್ಷೆ ಪಡೆದರು.
ಈ ಭಾಗದ ಭಕ್ತರು ದೂರದ ಹುಬ್ಬಳ್ಳಿಗೆ ತೆರಳಿ ಸಿದ್ಧಾರೂಢರ ದರ್ಶನ ಪಡೆಯಲು ಕಷ್ಟಸಾಧ್ಯ ಎನ್ನುವುದು ಅರಿತ ಶ್ರೀಗಳು, ಸಿದ್ಧಾರೂಢರ ದರ್ಶನ ಭಾಗ್ಯ ಇಲ್ಲಿಯೇ ಸಿಗಲು ಮಠದ ನಿರ್ಮಾಣಕ್ಕೆ ಸಂಕಲ್ಪ ಮಾಡಿದ್ದರು ಎನ್ನಲಾಗಿದೆ.
ಮೊದಲಿಗೆ ಹುಟ್ಟೂರು ಬಾಚವಾರದಲ್ಲಿಯೇ ಮಠವೊಂದನ್ನು ಆರಂಭಿಸಿದ್ದ ಶ್ರೀ, 2000-2001ರಲ್ಲಿ ಅರಕೇರಾವನ್ನು “ಅರಿವಿನ ಕೆರೆ “ಯಾಗಿ ಪರಿವರ್ತಿಸಲು ಸತತ ನೇರ ನಡೆ, ನುಡಿಯ ಅಕ್ಷರ ಕ್ರಾಂತಿಯ ಮೂಲಕ ಭಕ್ತರಲ್ಲಿ ಅಂಧಕಾರ, ಮೌಢ್ಯ ಹೋಗಲಾಡಿಸಲು ಈವರೆಗೆ ಶ್ರಮಿಸಿರುವುದು ಅವಿಸ್ಮರಣೀಯ.
ಆರೂಢರ ಸ್ಮರಿಸಿ ಸಾವಿರಾರು ವಚನ, ಆಧ್ಯಾತ್ಮಿಕ ಗ್ರಂಥಗಳನ್ನು ಬರೆದಿದ್ದು ಜ್ಞಾನ ಭಾಸ್ಕರ, ಆರೂಢರ ವಚನಾಮೃತ, ಸಹಸ್ರ ಸಹಸ್ರ ನುಡಿಮುತ್ತುಗಳು, ಸಂತರ ಸಂದೇಶ, ಮರಣದಿಂ(ದ) ಮುನ್ನೇನು, ಕಥಾಮೃತಧಾರೆ, ಸುಖದ ಸೂತ್ರ, ಸ್ತೋತ್ರಮಾಲೆ ಹಾಗೂ ಶ್ರೀ ಆರೂಢರ ಸಾಕ್ಷಾತ್ಕಾರ ಹೀಗೆ ಸಾಕಷ್ಟು ಜ್ಞಾನ ಭಂಡಾರವನ್ನೇ ಭಕ್ತರಿಗೆ ಉಣಬಡಿಸಿದ್ದಾರೆ.
ಹುಟ್ಟು ಸಾವಿಗೆ ಬೇಸತ್ತವನಿಗೆ ಕೆಟ್ಟ ಹೋಗುವ ದೇಹ ಕಂಡು ಸಂಶಯಪಟ್ಟವಗೆ, ನಿಷ್ಠೆ ಗುರುದೈವದಲ್ಲಿ ಸದಾ ಇಟ್ಟವನಿಗೆ ಗಟ್ಟಿಯಾಗಿ ಮೋಕ್ಷ ಕಟ್ಟಿಟ್ಟ ಬುತ್ತಿ ನೋಡೆಂದ ಆರೂಢ…! ಎನ್ನುವ ಅರ್ಥ ಗರ್ಭಿತವಾದ ವಚನದ ಮೂಲಕ ಭಕ್ತರಿಗೆ ಮೋಕ್ಷದ ದಾರಿಯನ್ನು ತೋರಿದ್ದಾರೆ.