ಅಸಂಖ್ಯಾತ ಭಕ್ತರ ಮಧ್ಯೆ ವಿಶ್ವರಾಧ್ಯರ ಸಂಭ್ರಮದ ರಥೋತ್ಸವ
ಯಾದಗಿರಿ: ತಾಲೂಕಿನ ಸುಕ್ಷೇತ್ರ ಅಬ್ಬೆತುಮಕೂರಿನ ಸಿದ್ಧಿ ಪುರುಷ ಶ್ರೀ ವಿಶ್ವಾರಾಧ್ಯರ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಮಹಾ ರಥೋತ್ಸವ ಅಸಂಖ್ಯಾತ ಭಕ್ತರ ಮಧ್ಯೆ ಶುಕ್ರವಾರ ಸಂಜೆ ಸಡಗರ, ಸಂಭ್ರಮದಿಂದ ಜರುಗಿತು.
ರಥೋತ್ಸವ ಅಂಗವಾಗಿ ಭಕ್ತ ಸಮೂಹ ತಂಡೋಪ ತಂಡವಾಗಿ ಅಬ್ಬೆತುಮಕೂರ ಸುಕ್ಷೇತ್ರದತ್ತ ಧಾವಿಸಿ ಬರುತ್ತಿದ್ದರು. ಬಸ್ಸು, ಕಾರು, ಜೀಪು ಮತ್ತು ಆಟೋಗಳಲ್ಲಿ ಬರುವವರು ಒಂದೆಡೆಯಾದರೆ, ಪಾದಯಾತ್ರೆಯ ಮೂಲಕ ಬರುವ ಭಕ್ತರು ಅಸಂಖ್ಯಾತರಾಗಿದ್ದರು. ದಾರಿಯುದ್ದಕ್ಕೂ ಭಕ್ತರಿಂದ ಸಿದ್ಧಿ ಪುರುಷ ಶ್ರೀವಿಶ್ವರಾಧ್ಯ ಮಹಾರಾಜ ಕೀ ಜೈ ಎಂಬ ಘೋಷಣೆಗಳು ಮೊಳಗುತ್ತಿದ್ದವು.
ಪ್ರತಿ ವರ್ಷದಂತೆ ಸಂಜೆ ನಿಗದಿ ಪಡಿಸಿದ್ದ 6ಃ30 ಸುಮಾರಿಗೆ ಶ್ರೀಮಠದ ಪೀಠಾಧಿಪತಿ ಡಾ.ಗಂಗಾಧರ ಮಹಾಸ್ವಾಮಿಗಳು ರಥವನ್ನೇರಿ ಚಾಲನೆ ನೀಡುವುದೇ ತಡ, ಅಸಂಖ್ಯಾತ ಭಕ್ತ ವೃಂದ ಶ್ರೀ ವಿಶ್ವಾರಾಧ್ಯ ಮಹಾರಾಜ ಕೀ ಜೈ.. “ಗಂಗಾಧರ ಮಹಾರಾಜ ಕೀ ಜೈ” ಎಂಬ ಮುಗಿಲು ಮುಟ್ಟವ ಜಯಘೋಷಗಳೊಂದಿಗೆ ಮಹಾ ರಥವನ್ನು ಎಳೆದು ಸಂಭ್ರಮಿಸಿದರು.
ದಾರಿಯುದ್ದಕ್ಕೂ ಭಕ್ತಾಧಿಗಳು ಉತ್ತುತ್ತಿ, ಬಾಳೆಹಣ್ಣು ಎಸೆದು ಇಷ್ಠಾರ್ಥಸಿದ್ಧಿಗೆ ಪ್ರಾರ್ಥನೆ ಸಲ್ಲಿಸಿದರು. ರಥೋತ್ಸವ ಎಳೆಯುವ ಮುನ್ನ ವಿಶೇಷ ಹೋಮ ಪೂಜೆ ನೆರವೇರಿಸಲಾಗಿತ್ತು.