ಅಪಘಾತ ಸ್ಥಳದಲ್ಲಿ ದೊರೆತ ವಾಹನದ ನಂಬರ್ ಪ್ಲೇಟ್
ಶಹಾಪುರಃ ಬೈಕ್ ಮೇಲೆ ಭೀಮರಾಯನ ಗುಡಿ ಮಾರ್ಗದಲ್ಲಿ ಹೊರಟಿದ್ದಾಗ ಎದುರಿಗೆ ಬಂದ ದೊಡ್ಡವಾಹನವೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಹಾಗೂ ಹಿಂಬದಿ ಕುಳಿತ ವ್ಯಕ್ತಿ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಗರದ ಭೀ.ಗುಡಿ ರಸ್ತೆಯ ಮೋಟಗಿ ಹೊಟೇಲ್ ಬಳಿ ಶುಕ್ರವಾರ ರಾತ್ರಿ 12 ಗಂಟೆ ಸುಮಾರಿಗೆ ನಡೆದಿದೆ.
ಡಿಕ್ಕಿ ಹೊಡೆದ ವಾಹನ ಸಮೇತ ಚಾಲಕ ಪರಾರಿಯಾಗಿದ್ದು, ನಿರ್ದಿಷ್ಟವಾಗಿ ವಾಹನದ ಗುರುತು ದೊರೆತಿಲ್ಲ.
ಮೋಹನ್ ತಂದೆ ಯಂಕಣ್ಣ(38) ಮತ್ತು ಗಂಗಾಧರಯ್ಯ ತಂದೆ ವೀರಭದ್ರಯ್ಯ (35) ಅಪಘಾತದಲ್ಲಿ ಮೃತಪಟ್ಟ ದುರ್ದೈವಿಗಳಾಗಿದ್ದಾರೆ.
ಇಬ್ಬರು ಸುರಪುರ ವಾಸಿಗಳಾಗಿದ್ದು, ಮೋಹನ ಸುರಪುರ ತಹಸೀಲ್ ಕಚೇರಿ ಪಹಾಣಿ ವಿಭಾಗದಲ್ಲಿ ಅರೆ ಸರ್ಕಾರಿ ನೌಕರನಾಗಿ ಕಾರ್ಯನಿರ್ವಹಿಸುತ್ತಿದ್ದ ಎನ್ನಲಾಗಿದೆ.
ಗಂಗಾಧರಯ್ಯ ವಾಹನದ ಚಾಲಕನಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದ್ದು,
ಮೋಹನ್ ಎಂಬುವರು.ಶಹಾಪುರ ತಾಲೂಕಿನ ಹುಂಡೆಕಲ್ ದವರಾಗಿದ್ದು, ಅವರ ಸಂಬಂಧಿಕರ ಮದುವೆ ಶನಿವಾರ ಇಲ್ಲಿನ ಆರಬೋಳ ಕಲ್ಯಾಣ ಮಂಟಪದಲ್ಲಿರುವ ಕಾರಣ ಶುಕ್ರವಾರ ರಾತ್ರಿಯೇ ಆಗಮಿಸಿದ್ದು, ಮದುವೆ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು.
ಈ ಸಂದರ್ಭದಲ್ಲಿ ದುರ್ಘಡನೆ ನಡೆದಿದೆ.
ಅಪಘಾತದಲ್ಲಿ ಸ್ನೇಹಿತರಿಬ್ಬರು ಜೀವ ಕಳೆದುಕೊಂಡಿದ್ದು, ಎರಡು ಕುಟುಂಬಸ್ಥರ ರೋದನ ಮುಗಿಲು ಮುಟ್ಟಿದೆ.
ಘಟನೆ ಕುರಿತು ಭೀಮರಾಯನ ಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಪಿಎಸ್ ಐ ರಾಠೋಡ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಮುಂದೆವರೆಸಿದ್ದಾರೆ.
ಡಿಕ್ಕಿ ಹೊಡೆದ ವಾಹನದ ನಂಬರ್ ಪ್ಲೇಟ್.!
ಘಟನೆ ನಡೆದ ಸ್ಥಳದಲ್ಲಿ ವಾಹನ ನಂಬರ್ ಪ್ಲೇಟ್ ಬಿದ್ದಿದ್ದು, ಪೊಲೀಸರು ವಶಕ್ಕೆ ಪಡೆದುಕೊಂಡು ತನಿಖೆ ಕೈಗೊಂಡಿದ್ದಾರೆ.
ಶೀಘ್ರದಲ್ಲಿ ವಾಹನದ ಮಾಲೀಕರನ್ನು ಪತ್ತೆ ಮಾಡಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.