ಭೀಮಾತೀರದಲ್ಲಿ ಮತ್ತೆ ಗುಂಡಿನ ಸದ್ದು!
ಮಹಿಳೆಯ ಮೇಲೆ ಎರಡು ಸುತ್ತು ಗುಂಡು ಹಾರಿಸಿದ್ದೇಕೆ?
ವಿಜಯಪುರ: ನಗರದ ಶಾಸ್ತ್ರೀ ಕಾಲೋನಿಯಲ್ಲಿ ಸಮೀರ್ ಪಠಾಣ್ ಎಂಬ ವ್ಯಕ್ತಿ ಎರಡು ಸುತ್ತಿನ ಗುಂಡು ಹಾರಿಸಿದ ಘಟನೆ ನಡೆದಿದೆ. ಗುಂಡಿನ ಸದ್ದು ಕೇಳಿದ ನಗರದ ಜನ ಬೆಚ್ಚಿ ಬಿದ್ದಿದ್ದಾರೆ. ಕ್ಷಣ ಕಾಲ ಮನೆಯಿಂದ ಹೊರಬರಲು ಸಹ ಹಿಂದೇಟು ಹಾಕಿದ್ದಾರೆ.
ಶಾಸ್ತ್ರೀ ಕಾಲೋನಿಯ ನಿವಾಸಿ ಮುಮತಾಜ್ ಎಂಬ ಮಹಿಳೆಯ ಮನೆ ಬಳಿಗೆ ಬಂದಿದ್ದ ಸಮೀರ್ ಪಠಾಣ್ , ಮಮತಾಜ್ ಮೇಲೆ ಗುಂಡು ಹಾರಿಸಿದ್ದಾನೆ. ಸದ್ಯ ಅದೃಷ್ಟವಶಾತ್ ಮುಮತಾಜ್ ಗುಂಡಿನ ದಾಳಿಯಿಂದ ತಪ್ಪಿಸಿಕೊಂಡಿದ್ದು ಅಪಾಯದಿಂದ ಪಾರಾಗಿದ್ದಾರೆಂದು ತಿಳಿದು ಬಂದಿದೆ.
ಗುಂಡಿನ ದಾಳಿ ಬಳಿಕ ಸಮೀರ್ ಪಠಾಣ್ ಎಸ್ಕೇಪ್ ಆಗಿದ್ದಾನೆ. ಮುಮತಾಜ್ ಅವರ ಪುತ್ರ ಸಲ್ಮಾನ್ ಖಾನ್ ಹಾಗೂ ಸಮೀರ್ ಪಠಾಣ್ ಮದ್ಯೆ ವೈಷಮ್ಯವಿತ್ತು. ಅನೇಕ ಸಲ ಇಬ್ಬರು ಜಗಳವಾಡಿಕೊಂಡಿದ್ದರು. ಪರಿಣಾಮ ಹಳೇದ್ವೇಷ ಹಿನ್ನೆಲೆಯಲ್ಲಿ ಸಲ್ಮಾನ್ ಖಾನ್ ಹತ್ಯೆಗೈಯಲು ಬಂದಿದ್ದ ಎನ್ನಲಾಗಿದೆ. ಸಲ್ಮಾನ್ ಖಾನ್ ಬದಲಾಗಿ ಮನೆಯಲ್ಲಿದ್ದ ಮುಮತಾಜ್ ಅವರತ್ತ ಗುಂಡು ಹಾರಿಸುವ ಮೂಲಕ ಸಮೀರ್ ಪಠಾಣ್ , ಸಲ್ಮಾನ್ ಖಾನ್ ಗೆ ಎಚ್ಚರಿಕೆ ನೀಡಿದ್ದಾನೆ ಎನ್ನಲಾಗುತ್ತಿದೆ.
ವಿಷಯ ತಿಳಿಯುತ್ತಲೇ ಗಾಂಧಿಚೌಕ್ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಗುಂಡಿನ ದಾಳಿಗೆ ನಿಖರವಾದ ಕಾರಣವೇನು ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಆರೋಪಿ ಸಮೀರ ಪಠಾಣ್ ಪತ್ತೆಗಾಗಿ ಜಾಲ ಬೀಸಿದ್ದಾರೆ.