ಬತ್ತಿ ಹೋದ ಕೃಷ್ಣೆ ತುಂಬಿ ಹರಿಯುತ್ತಿದೆ..ನದಿ ಪಾತ್ರದ ಜನತೆ ಎಚ್ಚರ..!
ಬತ್ತಿ ಹೋದ ಕೃಷ್ಣೆ ತುಂಬಿ ಹರಿಯುತ್ತಿದೆ..ನದಿ ಪಾತ್ರದ ಜನತೆ ಎಚ್ಚರ..!
ಯಾದಗಿರಿಃ ಜಿಲ್ಲೆಯ ಸುರಪುರ ತಾಲೂಕಿನ ನಾರಾಯಣಪುರ ಗ್ರಾಮದ ಬಸವಸಾಗರ ಜಲಾಶಯ ಸಂಪೂರ್ಣ ತುಂಬಿದ್ದು, ಸುಮಾರು 6 ಗೇಟ್ ಗಳ ಮೂಲಕ 45 ಸಾವಿರ ಕ್ಯೂಸೆಕ್ ನೀರು ನದಿಗೆ ಬಿಡಲಾಗಿದೆ ಎಂದು ಕೃಷ್ಣಾ ಭಾಗ್ಯ ಜಲನಿಗನದ ಅಧಿಕಾರಿಗಳು ತಿಳಿಸಿದ್ದಾರೆ.
ಹೀಗಾಗಿ ಬತ್ತಿ ಹೋಗಿದ್ದ ಕೃಷ್ಣೆ ತುಂಬಿ ಹರಿಯುವ ಸಾಧ್ಯತೆ ಹೆಚ್ಚಿದ್ದು, ಈಗಾಗಲೇ ನೀರು ನದಿಗೆ ಜಾಸ್ತಿ ಪ್ರಮಾಣದಲ್ಲಿ ಹರಿದು ಬರುತ್ತಿದ್ದು, ನದಿ ಪಾತ್ರದ ಜನತೆ ಎಚ್ಚರವಹಿಸಬೇಕಿದೆ. ಶಹಾಪುರ ತಾಲೂಕಿನ ಕೊಳ್ಳೂರ ಸೇತುವೆಗೆ ಕೇವಲ 10 ಫೀಟ್ ಅಂತರ ಉಳಿದಿದೆ. ಬೆಳಗ್ಗೆವರೆಗೆ ಕೊಳ್ಳೂರ ಸೇತುವೆ ತುಂಬಿ ಸೇತುವೆ ಮೇಲೆ ಬಂದರೂ ಅಚ್ಚರಿ ಪಡುವಂತಿಲ್ಲ. ಕಾರಣ ಕೃಷ್ಣನದಿ ಪಾತ್ರದ ಜನತೆ ಎಚ್ಚರದಿಂದರಬೇಕು. ಪ್ರವಾಹ ಹೆಚ್ಚಾಗುವ ಸಾಧ್ಯತೆ ಇದೆ. ರೈತರು, ಜನ ಜಾನುವಾರು ಸಮೇತ ಸುರಕ್ಷಿತ ಸ್ಥಳಕ್ಕೆ ಹೋಗುವುದು ಒಳಿತು.
ಮಹಾರಾಷ್ಟ್ರದಲ್ಲಿ ಮಳೆ ಮುಂದುವರೆದಿದ್ದು, ಬಸವಸಾಗರ ಜಲಾಶಯದ ಒಳ ಹರಿವು ಜಾಸ್ತಿಯಾಗುತ್ತಿದೆ, ಇನ್ನೂ ಮೂರು ನಾಲ್ಕುದಿನಗಳವರೆಗೆ ವರ್ಷಧಾರೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿರುವ ಕಾರಣ, ಬಸವ ಸಾಗರ ಜಲಾಶಯದ ಒಳ ಹರಿವು ಜಾಸ್ತಿಯಾಗಲಿದೆ. ಹೀಗಾಗಿ ಹೆಚ್ಚಾದ ನೀರನ್ನು ನಿರಂತರವಾಗಿ ಹೊರಬಿಡಬೇಕಾಗುತ್ತದೆ. ಕಾರಣ ನದಿ ತೀರದ ಜನರು ಎಚ್ಚರವಹಿಸಿ ಸುರಕ್ಷಿತ ಸ್ಥಳಕ್ಕೆ ತೆರಳಬೇಕು ಎಂದು ಕೃಷ್ಣಾಭಾಗ್ಯ ಜಲ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.
ಬತ್ತಿ ಹೋದ ಕೃಷ್ಣೆಗೆ ವರುಣನ ಕೃಪೆಯಿಂದ ನದಿಗೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವ ಕಾರಣ ಯಾವುದೇ ಕ್ಷಣದಲ್ಲಿ ನೀರಿನ ಮಟ್ಟ ಹೆಚ್ಚಾಗುವ ಸಾಧ್ಯತೆ ಇದೆ. ಕಾರಣ ನದಿ ದಡಕ್ಕೆ ಜನರು ತೆರಳದಂತೆ ಕೃಷ್ಣ ಭಾಗ್ಯ ಜಲ ನಿಗಮದ ಅಧಿಕಾರಿಗಳು ಸಾರ್ವಜನಿಕರಿಗೆ ಸೂಚನೆ ನೀಡಿದ್ದಾರೆ.