ಹಸಿವಿಗೆ ಮುಷ್ಠಿ ಅನ್ನ, ಮಗುವಿನ ಅಳುವಿಗೆ ತಾಯಿ ಹಾಲೇ ಸಾಂತ್ವನ
ಅಮ್ಮ ಕ್ಯಾಂಟೀನ್ ಉದ್ಘಾಟನೆ
ಬಡ ವಿದ್ಯಾರ್ಥಿಗಳಿಗೆ ಕ್ಯಾಂಟೀನ್ ಉಪಯೋಗವಾಗಲಿಃ ದರ್ಶನಾಪುರ
ಯಾದಗಿರಿ, ಶಹಾಪುರಃ ಪ್ರಸ್ತುತ ಕಾಲದಲ್ಲಿ ಸಾಕಷ್ಟು ಜನ ಹಸಿವಿನಿಂದ ನರಳುತ್ತಿದ್ದಾರೆ. ಎಷ್ಟೋ ಜನರು ಒಪ್ಪತ್ತಿನ ಗಂಜಿಗೂ ಗತಿ ಇಲ್ಲದೆ ಮೃತಪಟ್ಟವರಿದ್ದಾರೆ. ಶೈಕ್ಷಣಿಕವಾಗಿ ಪಟ್ಟಣಕ್ಕೆ ಬರುವ ಗ್ರಾಮೀಣ ಭಾಗದ ಹಲವಾರು ವಿದ್ಯಾರ್ಥಿಗಳು ಹಸಿವು ಹಿಂಗಿಸಿಕೊಂಡು ನಿತ್ಯ ಅಲೆದಾಡುವ ಸ್ಥಿತಿ ಕಣ್ಣೆದುರಿದೆ. ಅಂತಹ ಹಸಿವು ನೀಗಿಸುವ ಹಿನ್ನೆಲೆಯಲ್ಲಿ ಅಮ್ಮ ಕ್ಯಾಂಟೀನ್ ರೂಪ ಪಡೆದಿರುವುದು ನಿಜಕ್ಕೂ ಶ್ಲಾಘನೀಯ ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.
ನಗರದ ಚರಬಸವೇಶ್ವರ ಕಮಾನ ಸಮೀಪದ ರಾಜ್ಯ ಹೆದ್ದಾರಿ ಬದಿಯಲ್ಲಿ ಅಮ್ಮ ಕ್ಯಾಂಟೀನ್ಗೆ ವಿದ್ಯುಕ್ತವಾಗಿ ಚಾಲನೆ ನೀಡಿ ನಂತರ ನಡೆದ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಮಣಿಕಂಠಾಸ್ ಅಮ್ಮ ಚಾರಿಟೇಬಲ್ ಟ್ರಸ್ಟ್ ಉತ್ತಮ ಕಾರ್ಯ ಮಾಡಿದೆ. ಬಡವರಿಗಾಗಿ ಕ್ಯಾಂಟೀನ್ ನಿರ್ಮಿಸಿದ್ದು, ಉಪಹಾರ, ಊಟ ಸುಲಭ ದರದಲ್ಲಿ ದೊರೆಯುವ ಕೆಲಸ ಮಾಡಿದೆ. ಅರ್ಹರು ಇದರ ಸದುಪಯೋಗ ಪಡೆದುಕೊಳ್ಳಲಿ. ಉಳ್ಳವರು ಕ್ಯಾಂಟೀನ್ ಲಾಭ ಪಡೆಯುವುದು ಸರಿಯಲ್ಲ.
ಹಸಿದವರಿಗಾಗಿ, ಬಡವರಿಗೆ ಅದರಲ್ಲೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂಬ ಸದುದ್ದೇಶದಿಂದ ಕ್ಯಾಂಟೀನ್ ಮೂಲಕ ಒಂದಿಷ್ಟು ಹೊಟ್ಟೆ ತುಂಬಿಸುವ ಕೆಲಸವನ್ನು ಯುವಕರು ಮಾಡಿರುವುದು ನಿಜಕ್ಕೂ ಮಾದರಿಯಾಗಿದೆ.
ಪ್ರಸ್ತುತ ಕಾಲದಲ್ಲಿ ಯುವ ಸಮುದಾಯ ದಾರಿ ತಪ್ಪುವ ಕೆಲಸ ಮಾಡುವುದೇ ಹಚ್ಚು ಕಾಣುತ್ತೇವೆ. ಆದರೆ ತಾಯಿ ಹೆಸರಲಿ ಇಂತಹ ಉತ್ತಮ ಕಾರ್ಯ ಕೈಗೊಂಡಿರುವುದು ಪ್ರತಿಯೊಬ್ಬರಿಗೂ ಮಾದರಿಯಾಗಿದೆ.
ಅಲ್ಲದೆ ಉತ್ತಮ ಕಾರ್ಯದಿಂದ ಟ್ರಸ್ಟ್ನ ಯುವ ಸಮುದಾಯಕ್ಕೆ ಸಮಾಜದಲ್ಲಿ ಉತ್ತಮ ಗೌರವವು ದೊರೆಯಲಿದೆ. ಇದೇ ರೀತಿ ಸಮಾಜ ಸೇವೆಯಲ್ಲಿ ಇನ್ನಷ್ಟು ಹೆಚ್ಚಿನ ಸಹಾಯ ಸಹಕಾರ ನೀಡುವ ಶಕ್ತಿ ಟ್ರಸ್ಟ್ನ ಸದಸ್ಯರಿಗೆ ದೇವರು ಕರುಣಿಸಲಿ ಎಂದು ಹಾರೈಸಿದರು.
ಟ್ರಸ್ಟ್ನ ಕಾರ್ಯದರ್ಶಿ ಗುರು ಮಣಿಕಂಠ ಪ್ರಾಸ್ತವಿಕವಾಗಿ ಮಾತನಾಡುತ್ತಾ, ಹೆತ್ತ ತಿಂಗಳಲ್ಲೇ ನನ್ನ ತಾಯಿ ನನ್ನನ್ನು ಅಗಲಿದ್ದಳು. ಆ ಸ್ಥಾನವನ್ನು ಮತ್ತೊಬ್ಬ ತಾಯಿ ತುಂಬಿ ಅಷ್ಟೆ ಮಮತೆ ಪ್ರೀತಿಯಿಂದ ಸಾಕಿ ಸಲುಹಿ ಉತ್ತಮ ಸಂಸ್ಕಾರ ನೀಡುವ ಮೂಲಕ ಮಹಾ ತಾಯಿಯಾಗಿದ್ದಾಳೆ.
ತಂದೆ ತಾಯಿಗಿಂತ ದೇವರಿಲ್ಲ. ಅವರ ಸ್ಮರಣೆ ಅಗತ್ಯ. ಎಲ್ಲರಿಗೂ ತಾಯಿಯೊಂದಿಗೆ ಭಾವನಾತ್ಮಕ ಸಂಬಂಧವಿರುತ್ತದೆ. ಮಗುವಿನ ಅಳುವಿಗೆ ತಾಯಿ ಹಾಲೇ ಸಾಂತ್ವನ. ನನ್ನ ತಾಯಿಯ 36ನೇ ವರ್ಷದ ಪುಣ್ಯ ಸ್ಮರಣೆ ದಿನ ಇಂದು. ಆ ನೆನಪಿನಲ್ಲಿ ಕ್ಯಾಂಟೀನ್ ಯೋಜನೆ ರೂಪಗೊಂಡಿದೆ. ಅಮ್ಮಳಿಗೆ ಅಮ್ಮಳೇ ಸಾಟಿ ಬೇರಾರು ಆಗಲುಸಾಧ್ಯವಿಲ್ಲ. ಆ ಕಾರಣಕ್ಕೆ ಅಮ್ಮ ಹೆಸರಿನಲ್ಲಿ ಇರುವ ಬಂಧ ಹಸಿದವರಿಗೆ ತುತ್ತು ಅನ್ನ ನೀಡಿ ಎನ್ನುವ ಘೋಷ ವಾಕ್ಯದಂತೆ ಅಮ್ಮ ಕ್ಯಾಂಟೀನ್ ತಾಯಿ ರೂಪದಲ್ಲಿ ಆ ಕೆಲಸ ಮಾಡಲಿದೆ.
ಇದರಲ್ಲಿ ಯಾವುದೇ ದುರ್ಲಾಭವಿಲ್ಲ. ಕೇವಲ 10 ರೂ.ಉಪಹಾರ, 10 ರೂ.ಊಟ ನೀಡುತ್ತಿದ್ದೇವೆ. ಸೇವಾ ಮನೋಭಾವದಿಂದ ಈ ಕಾರ್ಯಕ್ಕೆ ಮುಂದಾಗಿದ್ದೇವೆ. ತಮ್ಮೆಲ್ಲರ ಸಹಾಯ ಸಹಕಾರವಿರಲಿ ಎಂದರು.
ಫಕೀರೇಶ್ವರ ಮಠದ ಗುರುಪಾದ ಮಹಾಸ್ವಾಮೀಜಿ, ಏಕದಂಡಿಗಿ ಮಠದ ಕಾಳಹಸ್ತೇಂದ್ರ ಶ್ರೀ, ಬಸವಯ್ಯ ಶರಣರು ಆಶೀರ್ವಚನ ನೀಡಿದರು. ಮುಖಂಡರಾದ ಮಲ್ಲಣ್ಣ ಮಡ್ಡಿ, ಶರಣಪ್ಪ ಸಲಾದಪುರ, ಶರಣು ಗದ್ದುಗೆ ಸೇರಿದಂತೆ ಇತರರು ಮಾತನಾಡಿದರು
ಟ್ರಸ್ಟ್ನ ಅಧ್ಯಕ್ಷ ಬಸವರಾಜ ಮಣಿಕಂಠ ಅಧ್ಯಕ್ಷತೆವಹಿಸಿದ್ದರು. ಮುಖಂಡರಾದ ಚಂದ್ರಶೇಖರ ಆರಬೋಳ, ಮರಿಗೌಡ ಹುಲಕಲ್, ಸಿದ್ಲಿಂಗಪ್ಪ ಆನೇಗುಂದಿ, ಸುರೇಂದ್ರ ಪಾಟೀಲ್ ಮಡ್ನಾಳ, ಡಾ.ಚಂದ್ರಶೇಖರ ಸುಬೇದಾರ ಉಪಸ್ಥಿತರಿದ್ದರು.
ರವಿಕಿರಣ ಮಣಿಕಂಠ, ರಾಜೂ ಆನೇಗುಂದಿ, ಮಲ್ಲಿಕಾರ್ಜುನ ಆಲೂರ, ಅರವಿಂದ ಉಪ್ಪಿನ್, ಅರವಿಂದ ಗುತ್ತೇದಾರ, ಬಸವರಾಜ ಯಶ್, ವೀರೇಶ ರಸ್ತಾಪುರ, ಪ್ರಕಾಶ ಸಾಹು, ಮಲ್ಲಿಕಾರ್ಜುನ ಜಾಕಾ ಸೇರಿದಂತೆ ಇತರರು ಭಾಗವಹಿಸಿದ್ದರು.