ವಿಶ್ವ ಜಲಕ್ಷಾಮದ ಟಾಪ್ ಲಿಸ್ಟ್ ನಲ್ಲಿದೆ ನಮ್ಮ ಬೆಂಗಳೂರು
ಬೆಂಗಳೂರು : ವಿಶ್ವ ಜಲ ಸಂಪನ್ಮೂಲ ಅಭಿವೃದ್ಧಿ ವರದಿ ಪ್ರಕಾರ ಬೆಂಗಳೂರು ವಿಶ್ವದ ಜಲಕ್ಷಾಮದ ಟಾಪ್ ಲೀಸ್ಟ್ ನಲ್ಲಿದೆ. ಜಲಕ್ಷಾಮ ಎದುರಿಸಲಿರುವ ವಿಶ್ವದ ಎರಡನೇ ನಗರ ಬೆಂಗಳೂರು ಎಂದು ವರದಿಯಲ್ಲಿ ತಿಳಿಸಲಾಗಿದೆ. ಪರಿಣಾಮ ಮುಂದಿನ ದಿನಗಳು ಬೆಂಗಳೂರಿಗರಿಗೆ ಕಠಿಣ ಆಗಲಿವೆ ಎನ್ನಲಾಗಿದೆ.
ಈವರೆಗೆ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ತಲೆದೋರುತ್ತಿದ್ದ ಜಲಕ್ಷಾಮ ಈಗ ಸಿಲಿಕಾನ್ ಸಿಟಿಯನ್ನು ಕಾಡಲಿದೆ. ಪರಿಣಾಮ ಈವರೆಗೆ ಕಸದ ಸಮಸ್ಯೆ, ಟ್ರಾಫಿಕ್ ಸಮಸ್ಯೆಗಳಿಂದ ಸುದ್ದಿ ಆಗುತ್ತಿದ್ದ ಬೆಂಗಳೂರು ಇನ್ನು ನೀರಿನ ಸಮಸ್ಯೆಗೆ ತೆರೆದುಕೊಳ್ಳಲಿದೆ. ಹೀಗಾಗಿ, ಬರುವ ಬೇಸಿಗೆ ನೀರಿನ ದಾಹದ ರೂಪದಲ್ಲಿ ಪೆಡಂಭೂತದಂತರ ಬೆಂಗಳೂರಿನ ಜನರನ್ನು ಕಾಡಲಿದೆ ಎನ್ನಲಾಗಿದೆ.
ಕೆರೆಗಳ ನಾಶ, ಪರಿಸರ ನಾಶ, ಅನಗತ್ಯ, ಅತಿಯಾದ ನೀರಿನ ಬಳಕೆ ಹಾಗೂ ಹೆಚ್ಚಿನ ಜನಸಂಖ್ಯೆಯ ಪರಿಣಾಮ ಜಲಕ್ಷಾಮದ ಭೀತಿ ಎದುರಾಗಿದೆ. ಹೀಗಾಗಿ, ಸರ್ಕಾರ ಜಲಕ್ಷಾಮವನ್ನು ಎದುರಿಸಿ ನಗರದ ಜನರಿಗೆ ನೀರು ಪೂರೈಸಲು ಯಾವ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ. ಇಲ್ಲವಾದಲ್ಲಿ ಮತ್ತೊಮ್ಮೆ ಬೆಂಗಳೂರಿನ ಮಾನ ವಿಶ್ವ ಮಟ್ಟದಲ್ಲಿ ಹರಾಜಾಗಲಿದೆ. ಅಲ್ಲದೆ ಜನರ ಪ್ರಾಣಕ್ಕೂ ಕಂಟಕವಾಗಲಿದೆ. ಹೀಗಾಗಿ, ಸರ್ಕಾರ ಹಾಗೂ ಅಧಿಕಾರಿಗಳು ಶೀಘ್ರ ಎಚ್ಚೆತ್ತುಕೊಂಡು ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಿದೆ.