ನಮ್ಮೂರಲ್ಲೇ ಉಳಿದಳು, ನಮ್ಮ ಶಾಲೆಗೇ ಸೇರಿದಳು ಚಂದ್ರಮುಖಿ!
‘ಹಿಂದಿರುಗಿದಾಗ’ ಪಾಟೀಲರ ಕಾದಂಬರಿ ಸರಣಿ-4 (ಮುಂದುವರೆದ ಭಾಗ)
ಮಳೆಯು ಬಂದು ನಿಂತಿತ್ತು. ದೇಸಾಯಿಯವರ ಧರ್ಮ ಪತ್ನಿ ನಮಗೆ ಕಿರಾಣಿ ಅಂಗಡಿಗೆ ಹೋಗಿ ಬರಲು ಕರೆದರು. ನಾವೆಲ್ಲ ಅವರ ಬಳಿ ಓಡಿ ಹೋದೆವು. ಅಂಗಡಿಯಿಂದ ಕಿರಾಣಿ ಸಾಮಾಗ್ರಿ ತಂದುಕೊಟ್ಟು, ದೇವಸ್ಥಾನದತ್ತ ಹೊರಟಿದ್ದಾಗ ಏಯ್ ಹುಡುಗ್ರಾ ನೀವು ಎಷ್ಟನೆತ್ಯಾ ಓದ್ತಾಯಿದ್ರಿ ಎಂದರು. ಐದನೇ ಕ್ಲಾಸ್ ಓದತ್ತಿವಿರ್ರಿ..ಎಂದೆವು. ನಾಳೆಯಿಂದ ನಮ್ಮ ಹುಡುಗೀನೂ ಸಾಲಿಗಿ ಬರ್ತಾಳ, ಕರ್ಕೊಂಡು ಓಗ್ರೀ.. ಎಲ್ಲರೂ ಒಟ್ಟಾಗಿ ಹುಂ… ಓದ್ರಿ..ಸರಿಯಾಗಿ..ಎಂದರು ಆಯಿತ್ರೀ ಎಂದೆವು. ದಂತದ ಬೊಂಬೆ ದೇಸಾಯಿಯವರ ಮಗಳು, ಇಷ್ಟು ದಿನಗಳು ಅವರ ಅಜ್ಜಿ ಮನೆಯಲ್ಲಿದ್ದು ಓದುತ್ತಿದ್ದಳು. ಕಾರಣಾಂತರದಿಂದ ನಮ್ಮ ಗ್ರಾಮಕ್ಕೆ ಬಂದಿದ್ದಳು ಎಂಬುದಾಗಿ ಉನ್ನತ ಮೂಲದಿಂದ ತಿಳಿದು ಬಂದಿತು. ಅಂದರೆ ಪಕ್ಕದ ಮನೆಯ ಪಾರ್ವತಿಯಿಂದ ತಿಳಿದುಕೊಂಡೆವು.
ನಾಳೆ ಸೋಮವಾರದಿಂದ ನುಣುಪು ಕೆನ್ನೆಗಳಲ್ಲಿ ಹೊಳಪು, ಸೂಸುವ ಚೆಲುವೆ, ನಮ್ಮ ಶಾಲೆಗೆ ಬರುವಳೆಂದು ತಿಳಿದು, ವಾರದಲ್ಲಿ ಮೂರು ದಿನಗಳು ಶಾಲೆಗೆ ಹೋಗುವ ಹವ್ಯಾಸಿಗಳೆಲ್ಲ ದಿನವೂ ತಪ್ಪದೆ ಶಾಲೆಗೆ ಹೋಗುವ ನಿರ್ಧಾರ ಮಾಡಿದೇವು. ನಾನು ರಾತ್ರಿಯಲ್ಲ ಅವಳ ಸುಂದರ ಹೆಸರು ಏನಿರಬೇಕೆಂದು ಆಲೋಚಿಸುತ್ತ, ನಿದ್ದೆಗೆ ಜಾರಿದೆ.
ಸೋಮವಾರ ಬೆಳಗ್ಗೆ ಸೂರ್ಯನೇಳುವ ಮುನ್ನ ನವೆಲ್ಲ ಎದ್ದು ಶಾಲೆಗೆ ಹೋಗುವ ತಯಾರಿ ನಡೆಸಿದೇವು. ಮನೆಯಲ್ಲಿ ಹೆತ್ತವರಿಗೆ ನಾವು ಬೇಗ ಎದ್ದಿರುವುದು ಕಂಡು “ ಇವತ್ತು ಸಲ್ಯಾಗ ಝಂಡಾ ಆದೇನು” ಎಂದು ಕೇಳಿದರು. ಅವರು ಕೇಳಿದ್ದಕ್ಕೂ ಒಂದು ಅರ್ಥವಿತ್ತು. ಏಕೆಂದರೆ ನಾವುಗಳು ವರ್ಷದಲ್ಲಿ ಎರಡು ಬಾರಿ ಬೇಗ ಏಳುತ್ತಿದ್ದೆವು. ಒಂದು ಆಗಸ್ಟ್ 15, ಸ್ವಾತಂತ್ರ್ಯ ದಿನಾಚರಣೆ ಇನ್ನೊಂದು ಗಣರಾಜ್ಯೋತ್ಸವ ಜ.26 ರಂದು. ಆದ್ದರಿಂದ ಹೆತ್ತವರು ಕೇಳಿದ್ದು ಸರಿಯಾಗಿತ್ತು. ಇಂದು ಶಾಲೆಯಲ್ಲಿ ಯಾವ ಕಾರ್ಯಕ್ರಮ ಇಲ್ಲದೆ, ಮಕ್ಕಳು ಇಷ್ಟು ಹರುಷದಿಂದ ಶಾಲೆಗೆ ಹೋಗುವ ತಯಾರಿ ಕಂಡು ಹೆತ್ತವರು ಆಶ್ಚರ್ಯಪಟ್ಟಿದ್ದರು.
ನಾನು ಅಮ್ಮನಿಂದ ಹರಿದ ಅಂಗಿಯ ಗುಂಡಿಗಳನ್ನು ಹಾಕಿಸಿಕೊಂಡು, ಹರಿದು ಮೂಲೆ ಸೇರಿದ್ದ ಹಳೆಯ ಹವಾಯಿ ಪಾದರಕ್ಷೆಗಳನ್ನು ದುರದ್ಥಿ ಮಾಡಿದೆ. ನೀಟಾಗಿ ಬೈತಲೆ ತೆಗೆದು ತಲೆಯನ್ನು ಬಾಚಿಕೊಂಡು, ಕನ್ನಡಿಯಲ್ಲಿ ಐದಾರು ಬಾರಿ ನೋಡಿಕೊಂಡು, ಬೇಕು ಬೇಡವೆನ್ನುವಂತೆ ಊಟ ಮುಗಿಸಿ ಪುಸ್ತಕದ ಚೀಳ ಹೆಗಲೇರಿಸಿಕೊಂಡು ಮನೆಯಿಂದ ಹೊರಬಿದ್ದೆ, ನನ್ನ ಸ್ನೇಹಿತರೆಲ್ಲ ನನಗಾಗಿ ಕಾಯುತ್ತಿದ್ದರು. ಎಲ್ಲರೂ ಕೂಡಿಕೊಂಡು ಶಾಲೆಗೆ ಹೋದೇವು. ಶಾಲೆ ಹತ್ತುವರೆ ಗಂಟೆಗೆ ಪ್ರಾರಂಭವಾಗುತಿತ್ತು. ನಾವು ಎಂಡು ಗಂಟೆಗೆ ಬಂದು ಕುಳಿತಿದ್ದೇವು. ಶಾಲೆಯ ಬಾಗಿಲು ತೆಗೆಯುವದಕ್ಕೆ ಇನ್ನೂ ತುಂಬಾ ಸಮಯವಿತ್ತು. ಗೌಡಪ್ಪ..ಸರ್ ಶಾಲೆಗೆ ಫಸ್ಟ್ ಬರ್ರಿ ಅಂತಿದ್ದರು ಇವತ್ತು ನಾವು ಫಸ್ಟ್ ಬಂದೀವಿ ನೋಡು ಎಂದ. ಎಲ್ಲರೂ ನಕ್ಕೆವು. ಕಾಮಣ್ಣ “ಸಾಲಾಗಿ ಎಲ್ಲರಿಗಿಂತ ಮುಂಚೆ ಬರೋದು ಅಲ್ಲಲೇ ಸರ್ ಏಳಿದ್ದು, ಓದೋದ್ರಾಗ ಫಸ್ಟ್ ಬರ್ರಿ ಅಂತ ಎಂದ. ಓದಿನಲ್ಲಿ ಕೊನೆಯವರಾಗಿದ್ದರೂ ದೇಸಾಯಿಯವರ ಮಗಳ ಕೃಪೆಗಾಗಿ ಶಾಲೆಗೆ ಬರುವವರಲ್ಲಿ ಪ್ರಥಮರಾದೆವು. ಇನ್ನೂಯಾವ ವಿದ್ಯಾರ್ಥಿಗಳು ಬಂದಿರಲಿಲ್ಲ. ಯಾವ ವಿದ್ಯಾರ್ಥಿ ಗೊಡವೇ ನಮಗೇನು, ಬಂದರೆಷ್ಟು ಬಿಟ್ಟರೆಷ್ಟು.. ಆದರೆ ಚಲುವೆ ಬರುವುದು ನಮಗೆ ಮುಖ್ಯವಾಗಿತ್ತು. ಕಾಯುತ್ತಾ ಕುಳಿತೇವು. ನನ್ನ ಮನ ಅವಳನ್ನು ನೆನೆದು ಕವನ ಕಟ್ಟುತಿತ್ತು.
“ನಕ್ಕು ನಗಿಸಲು ಬಾ ನನ್ನ
ಚುಕ್ಕಿ ಬೊಟ್ಟಿನ ಚೆಲುವೆ
ಜಕ್ಕವ್ವಗ ಹರಕೆ ಹೊರುವೆ ನಾ
ದಿಕ್ಕು ದಿಕ್ಕಿಗೆ ಹೂವು ಸುರಿಯುವೇ ನಾ”
ಶಾಲೆಯ ಸಮಯದಕ್ಕೆ ಸರಿಯಾಗಿ ಬಂದಳು ಚಂದ್ರಮುಖಿ ಹಾಲು ಬೆಳದಿಂಗಳು ಚಲ್ಲುತ್ತಾ. ಮುಂಗುರುಳಿನ ಕಪ್ಪು ಗೊಂಚಲುಗಳು ಚಂದ್ರನಿಗೆ ಮುಸುಕುವ ಮೋಡಗಳಂತೆ ರನ್ನೆಯ ಕೆನ್ನೆಗಳಿಗೆ ಮುತ್ತಿಕ್ಕುತ್ತಿದ್ದವು.
ಆಗಾಗ ಚಿಗುರು ಬೆರಳುಗಳಿಂದ ಮುಂಗುರುಳನ್ನು ಹಿಂದಕ್ಕೆ ಸರಿಸುತ್ತಿದ್ದಳು. ಹೆಜ್ಜೆಯ ಮೇಲೆ ಹಜ್ಜೆ ಇಕ್ಕುತ್ತ ನಾಟ್ಯ ಸರಸ್ವತಿಯಂತೆ ನಡೆದು ಬರುವುದು ನೋಡಿದರೆ, ಶಾರದೆಯೇ ನಾಚಬೇಕು. ಸ್ನೇಹಿತರೆಲ್ಲ ರಾತ್ರಿ ಮಳೆ ಬಂದು ನಿಂತ ನೀರಲ್ಲಿ ಬಗ್ಗಿ ನೋಡಿ, ಕೈಯಿಂದ ಬೈತಲೆಯನ್ನು ಸರಿಪಡಿಸಿಕೊಂಡೆವು. ನಾನು ಅವಳ ಕಾಲ್ಗೆಜ್ಜೆ ನಾದಕ್ಕೆ…
ಮುಂದುವರೆಯುವುದು…
ಲೇಖಕರು
Kavana tumba channagide patil re