ವಾರದಲ್ಲಿ ತೊಗರಿ ಹಣ ಪಾವತಿಗೆ ಜಿಲ್ಲಾಧಿಕಾರಿ ಖಡಕ್ ಸೂಚನೆ
ಬ್ಯಾಂಕ್ ಖಾತೆ ಸಮಸ್ಯೆ; 600 ರೈತರಿಗೆ ತೊಗರಿ ಹಣ ಪಾವತಿಗೆ ತೊಂದರೆ
ಯಾದಗಿರಿಃ 2017-18ನೇ ಸಾಲಿನಲ್ಲಿ 32 ಕೇಂದ್ರಗಳಲ್ಲಿ 21,962 ರೈತರಿಂದ ಎಫ್ಎಕ್ಯೂ ಗುಣಮಟ್ಟದ ತೊಗರಿ ಖರೀದಿಸಲಾಗಿದ್ದು, ಈ ಪೈಕಿ ಸುಮಾರು 600 ರೈತರಿಗೆ ಬ್ಯಾಂಕ್ ಖಾತೆಯ ಸಮಸ್ಯೆಯಿಂದ ಹಣ ಪಾವತಿಯಾಗಿಲ್ಲ. ಒಂದು ವಾರದಲ್ಲಿ ಬಾಕಿ ಇರುವ ರೈತರನ್ನು ಸಂಪರ್ಕಿಸಿ, ಹಣ ವರ್ಗಾವಣೆ ಮಾಡುವಂತೆ ಜಿಲ್ಲಾಧಿಕಾರಿಗಳಾದ ಶ್ರೀ ಜೆ.ಮಂಜುನಾಥ್ ಅವರು ಸೂಚಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಕರೆದಿದ್ದ 32 ತೊಗರಿ ಖರೀದಿ ಕೇಂದ್ರಗಳ ಏಜೆನ್ಸಿಯವರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
21,962 ರೈತರಿಂದ 3,01,407 ಕ್ವಿಂಟಲ್ ತೊಗರಿ ಖರೀದಿಸಲಾಗಿದ್ದು, ಇದುವರೆಗೆ 19,064 ರೈತರಿಗೆ ಹಣ ಪಾವತಿಯಾಗಿದೆ. ಬಾಕಿ ರೈತರಿಗೆ ಹಣ ಪಾವತಿಯಾಗಿಲ್ಲ. ಈ ರೈತರು ಜನಧನ ಮತ್ತು ನರೇಗಾ (ಉದ್ಯೋಗ ಖಾತ್ರಿ) ಯೋಜನೆಗಳ ಬ್ಯಾಂಕ್ ಖಾತೆಗಳನ್ನು ನೀಡಿರುವುದರಿಂದ ಈ ಖಾತೆಗಳಿಗೆ ಹಣ ವರ್ಗಾವಣೆ ಮಾಡಲು ಕಷ್ಟವಾಗಿದೆ ಎಂದು ತೊಗರಿ ಖರೀದಿ ಕೇಂದ್ರಗಳ ಏಜೆನ್ಸಿಯವರು ಸಭೆಯ ಗಮನಕ್ಕೆ ತಂದರು.
ಮಳೆಗಾಲ ಪ್ರಾರಂಭವಾಗಿರುವುದರಿಂದ ರೈತರಿಗೆ ಬಿತ್ತನೆ ಕಾರ್ಯಕ್ಕೆ ಹಣದ ಅವಶ್ಯಕವಿದೆ. ಇದರಿಂದ ಆಯಾ ಬಾಕಿ ರೈತರನ್ನು ಸಂಪರ್ಕಿಸಿ, ಅವರ ಬೇರೆ ಬ್ಯಾಂಕ್ ಖಾತೆಗಳನ್ನು ತೆರೆದು ಆದಷ್ಟು ಶೀಘ್ರವಾಗಿ ಹಣ ವರ್ಗಾವಣೆ ಪ್ರಕ್ರಿಯೆ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ಖರೀದಿ ಏಜೆನ್ಸಿಯವರಿಗೆ ಸೂಚನೆ ನೀಡಿದರು.
ಈ ಕುರಿತಂತೆ ಸಹಕಾರ ಸಂಘದ ಉಪ ನಿಬಂಧಕರು ಸೂಕ್ತ ನಿಗಾವಹಿಸಬೇಕು. ಶಹಾಪೂರದ ಕರ್ನಾಟಕ ಸಹಕಾರ ಮಾರಾಟ ಮಹಾಮಂಡಳದ ವ್ಯವಸ್ಥಾಪಕರು ತೊಗರಿ, ಕಡಲೆ ಹಾಗೂ ಹೆಸರು ಕಾಳಿಗೆ ಸಂಬಂಧಿಸಿದಂತೆ ಒಂದು ವಾರದಲ್ಲಿ ರೈತರ ಖಾತೆಗೆ ಹಣ ಜಮಾ ಮಾಡುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು ಅವರು ಸೂಚಿಸಿದರು.
ಸಭೆಯಲ್ಲಿ ತೊಗರಿ ಅಭಿವೃದ್ಧಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕರಾದ ಕೆ.ರಾಮಪ್ಪ, ಸಹಕಾರ ಸಂಘದ ಉಪನಿಬಂಧಕರಾದ ಕಲ್ಲಪ್ಪ ಓಬಣ್ಣಗೋಳ್, ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಎಸ್.ಟಿ. ಖಾದ್ರಿ, ಕೃಷಿ ಮಾರಾಟ ಇಲಾಖೆಯ ಸಹಾಯಕ ನಿರ್ದೇಶಕರಾದ ಪ್ರಕಾಶ ಅಯ್ಯಾಳಕರ್, ಶಹಾಪೂರ ಎಪಿಎಂಸಿ ಕಾರ್ಯದರ್ಶಿ ರಂಗನಾಥ, ಮಾರಾಟ ಮಹಾಮಂಡಳಿಯ ಶಾಖಾ ವ್ಯವಸ್ಥಾಪಕರಾದ ಮಾರೆಣ್ಣ ಅವರು ಉಪಸ್ಥಿತರಿದ್ದರು.