ಕೋಟೆನಾಡು ಚಿತ್ರದುರ್ಗ ಮತಕ್ಷೇತ್ರದಿಂದ ಸ್ಪರ್ದಿಸಲು ನಟಿ ಭಾವನಾ ಸಿದ್ಧತೆ?
ಬೆಂಗಳೂರು: ಖ್ಯಾತ ಸಿನಿ ತಾರೆ, ಅಭಿನಯದ ಮೂಲಕವೇ ಜನರ ಮನ ಸೆಳೆದ ನಟಿ ಭಾವನಾ ಚುನಾವಣ ರಾಜಕೀಯಕ್ಕೆ ಪಾದಾರ್ಪಣೆ ಮಾಡಲು ಸಿದ್ಧರಾಗಿದ್ದಾರೆ. ಮೂಲತಃ ಚಿತ್ರದುರ್ಗದವರಾದ ನಟಿ ಭಾವನಾ ಕೋಟೆನಾಡಿನಿಂದಲೇ ರಾಜಕೀಯ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ. ಕೆಪಿಸಿಸಿ ಅದ್ಯಕ್ಷ ಡಾ.ಜಿ.ಪರಮೇಶ್ವರ, ಸಚಿವ ಹೆಚ್.ಆಂಜನೇಯ, ಡಿ.ಕೆ.ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ಸಿನ ದಿಗ್ಗಜರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವುದನ್ನೇ ಬಳಸಿಕೊಂಡು ಚಿತ್ರದುರ್ಗ ಮತಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಪಡೆಯುವ ಭರವಸೆಯಲ್ಲಿದ್ದಾರೆ ಎನ್ನಲಾಗಿದೆ.
ಚುನಾವಣೆಗೆ ಆರು ತಿಂಗಳು ಮಾತ್ರ ಬಾಕಿ ಉಳಿದಿರುವ ಹಿನ್ನೆಲೆಯಲ್ಲಿ ನಟಿ ಭಾವನಾ ಈಗಿನಿಂದಲೇ ಅಖಾಡಕ್ಕಿಳಿಯುವ ಭರದ ಸಿದ್ಧತೆ ನಡೆಸಿದ್ದಾರೆ. ಹೀಗಾಗಿ, ಚಿತ್ರದುರ್ಗ ನಗರದಲ್ಲೇ ಮನೆ ಮಾಡಲು ನಿರ್ಧರಿಸಿದ್ದು ಭಾವನಾ ಬೆಂಬಲಿಗರು ಈಗಾಗಲೇ ಅನೇಕ ಕಡೆ ಮನೆಗಳನ್ನು ನೋಡುತ್ತಿದ್ದಾರೆ. ನಗರದ ಚಳ್ಳಕೆರೆ ಗೇಟ್ ಬಳಿಯಿರುವ ಮನೆಯೊಂದನ್ನು ಮಾಸಿಕ ಇಪ್ಪತ್ತು ಸಾವಿರ ರೂಪಾಯಿಗೆ ಬಾಡಿಗೆ ಪಡೆದಿದ್ದಾರೆ ಎನ್ನಲಾಗುತ್ತಿದೆ. ಇದೇ ವಾರದಲ್ಲಿ ನಟಿ ಭಾವನಾ ಗೃಹಪ್ರವೇಶ ಮಾಡಲಿದ್ದಾರೆ. ಬಳಿಕ ಕೋಟೆನಾಡಿನ ಪ್ರವಾಸ ಆರಂಭಿಸಲಿದ್ದು ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.
ಈಗಾಗಲೇ ಚಿತ್ರದುರ್ಗದಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಹನುಮಂತನ ಬಾಲದಂತೆ ಬೆಳೆದಿದೆ. ಮಾಜಿ ಶಾಸಕ ಎಸ್.ಕೆ.ಬಸವರಾಜನ್, ಜಿ.ಪಂ ಅದ್ಯಕ್ಷೆ ಸೌಭಾಗ್ಯ ಬಸವರಾಜನ್, ವಿಧಾನ ಪರಿಷತ್ ಸದಸ್ಯ ರಘು ಆಚಾರ್, ಪ್ರಭಾವಿ ಮುಖಂಡರಾದ ಹನುಮಲಿ ಷಣ್ಮುಖಪ್ಪ, ಜಿ.ಎಸ್.ಮಂಜುನಾಥ ಹೀಗೆ ಅನೇಕರು ಈಗಾಗಲೇ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡುತ್ತಿದ್ದಾರೆ. ಇವರೆಲ್ಲರನ್ನು ಓವರ್ ಟೇಕ್ ಮಾಡಿ ನಟಿ ಭಾವನಾ ಕಾಂಗ್ರೆಸ್ ಟಿಕೆಟ್ ತರುತ್ತಾರಾ ಎಂಬುದೇ ಪ್ರಶ್ನೆಯಾಗಿದೆ.
ಇನ್ನು ಕಾಂಗ್ರೆಸ್ ಟಿಕೆಟ್ ತಂದರೂ ಸಹ ಕೋಟೆನಾಡಿನ ರಾಜಕೀಯ ಚಾಣಕ್ಯ ಎಂದೇ ಕರೆಯಲ್ಪಡುವ ಹಿರಿಯ ಬಿಜೆಪಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ವಿರುದ್ಧ ನಟಿ ಭಾವನಾ ಸೆಡ್ಡು ಹೊಡೆಯಬಲ್ಲರೇ ಎಂಬ ಪ್ರಶ್ನೆ ಮೂಡಿದೆ. ಸ್ಥಳೀಯ ನಾಯಕರೇ ಶಾಸಕ ತಿಪ್ಪಾರೆಡ್ಡಿ ವಿರುದ್ಧ ಸೆಣೆಸಾಡಲು ಒಂದು ಕ್ಷಣ ಯೋಚಿಸುವ ಸ್ಥಿತಿಯಿದೆ. ಇನ್ನು ಚುನಾವಣೆ ಸಂದರ್ಭದಲ್ಲಿ ದುರ್ಗಕ್ಕೆ ಬಂದು ನಟಿ ಭಾವನಾ ಗೆಲ್ಲಲು ಸಾಧ್ಯವೇ. ಸೋಲು ಗೆಲುವಿನ ಲೆಕ್ಕಾಚಾರವಿಲ್ಲದೆ ಕಾಂಗ್ರೆಸ್ ಪಕ್ಷ ನಟಿ ಭಾವನಾಗೆ ಟಿಕೆಟ್ ನೀಡುವುದೇ ಎಂದು ಕಾಂಗ್ರೆಸ್ ಮುಖಂಡರೇ ಚರ್ಚೆಯಲ್ಲಿ ತೊಡಗಿದ್ದಾರೆ.