ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನ ಮುಖಂಡ ಗುರು ಕಾಮಾಗೆ ನೀಡಲು ಮನವಿ
ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನ ಯುವ ಮುಖಂಡ ಕಾಮಾ ಅವರಿಗೆ ನೀಡಲು ಆಗ್ರಹ
ಶಹಾಪುರಃ ಯಾದಗಿರಿ ಜಿಲ್ಲೆಯ ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಪಕ್ಷದ ಹಲವು ಮುಖಂಡರ ಪೈಪೋಟಿ ನಡೆದಿದೆ. ಆದರೆ ಈಗಾಗಲೇ ಯಾದಗಿರಿ ಮತ್ತು ಸುರಪುರ ಕ್ಷೇತ್ರದವರಿಗೆ ಅಧ್ಯಕ್ಷ ಪಟ್ಟ ನೀಡಲಾಗಿದೆ. ಕಾರಣ ಈ ಬಾರಿ ಶಹಾಪುರ ಮತಕ್ಷೇತ್ರದವರಿಗೆ ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನ ನೀಡಬೇಕೆಂದು ತಾಲೂಕು ಬಿಜೆಪಿ ಯುವ ಕಾರ್ಯಕರ್ತರು ಮತ್ತು ಹಿಂದೂಪರ ಸಂಘಟನೆಗಳ ಮುಖಂಡರು ಆಗ್ರಹಿಸಿದ್ದಾರೆ.
ಈಗಾಗಲೇ ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಶಹಾಪುರ ಬಿಜೆಪಿ ಯುವ ನಾಯಕ ಗುರು ಕಾಮಾ ಅವರು ಆಕಾಂಕ್ಷಿಯಾಗಿದ್ದು, ರಾಜ್ಯ ನಾಯಕರು, ಪಕ್ಷದ ಜಿಲ್ಲಾ ಮುಖಂಡರು ಶಾಸಕರು, ಮಾಜಿ ಶಾಸಕರು ಶಹಾಪುರ ಕ್ಷೇತ್ರಕ್ಕೆ ಅವಕಾಶ ಕಲ್ಪಿಸಬೇಕೆಂದು ಬಿಜೆಪಿ ಸಾಮಾಜಿಕ ಜಾಲತಾಣದ ಸಂಚಾಲಕ ಬಸವರಾಜ ಗುತ್ತೇದಾರ ರಾಜ್ಯಧ್ಯಕ್ಷ ನಳೀನಕುಮಾರ ಕಟೀಲು ಸೇರಿದಂತೆ ಜಿಲ್ಲಾ ಪ್ರಮುಖರಿಗೆ ಮನವಿ ಮಾಡಿದ್ದಾರೆ.
ಅಲ್ಲದೆ ಯಾದಗಿರಿ ಮತ್ತು ಸುರಪುರ ಕ್ಷೇತ್ರಕ್ಕೆ ಬಿಜೆಪಿಯ ಶಾಸಕರಿದ್ದಾರೆ. ಈ ಮೊದಲು ಎರಡು ತಾಲೂಕಿನವರು ಜಿಲ್ಲಾಧ್ಯಕ್ಷ ಜವಬ್ದಾರಿಯನ್ನು ನಿಭಾಯಿಸಿದ್ದಾರೆ. ಕಾರಣ ಈ ಬಾರಿ ಶಹಾಪುರಕ್ಕೆ ಜಿಲ್ಲಾಧ್ಯಕ್ಷ ಜವಬ್ದಾರಿ ನೀಡಿದ್ದಲ್ಲಿ ಪಕ್ಷದ ಸಂಘಟನೆಗೆ ಅನುಕೂಲವಾಗಲಿದೆ. ಮತ್ತು ಸಾಮಾಜಿಕ ನ್ಯಾಯ ದೊರಕಿಸಿಕೊಟ್ಟಂತಾಗಲಿದೆ ಎಂದಿದ್ದಾರೆ.
ಆಕಾಂಕ್ಷಿ ಗುರು ಕಾಮಾ ಅವರು ಸಹ ಯುವ ಸಮೂಹ ನಾಯಕರಾಗಿದ್ದು, ಸದಾ ಪಕ್ಷದ ಕಾರ್ಯಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರಸ್ತುತ ಪಕ್ಷದ ಸಂಘಟನೆಗೆ ಯುವಕರಿಗೆ ಜವಬ್ದಾರಿ ನೀಡಿದ್ದಲ್ಲಿ ಅನುಕೂಲವಾಗಲಿದೆ ಎಂದು ಬಿಜೆಪಿ ಯುವ ಪ್ರಮುಖರಾದ ಕರಿಬಸವ ಬಿರಾಳ, ಅಬ್ದುಲ್ ಹಾದಿಮನಿ, ಉಮೇಶ ಮಹಾಮನಿ, ರಾಜು ಬಾಣತಿಹಾಳ, ಮಲ್ಲಿಕಾರ್ಜುನ ಜಾಕಾ, ಮಂಜುನಾಥ ಗಣಾಚಾರಿ, ರಾಜು ರಬ್ಬನಹಳ್ಳಿ, ಕರಣ ಶಿರವಾಳ, ಲಿಂಗರಾಜ ಉಂಗುರ ಇನ್ನಿತರರು ಮನವಿ ಮಾಡಿದ್ದಾರೆ.