ಕೋಟೆನಾಡಿನಲಿ ಬೀಡುಬಿಟ್ಟಿರುವ ಆನೆಗಳು ‘ಅಣ್ತಮ್ಮಾಸ್’ ಅಂತೆ!
ಚಿತ್ರದುರ್ಗ: ಕಳೆದ ಮೂರು ದಿನಗಳಿಂದ ಚಿತ್ರದುರ್ಗ ಜಿಲ್ಲೆಯಲ್ಲಿ ಬೀಡು ಬಿಟ್ಟಿರುವ ಎರಡು ಮದಗಜಗಳು ಮೂವರ ಮೇಲೆ ದಾಳಿ ಮಾಡಿವೆ. ಮೂರು ದಿನಗಳ ಹಿಂದೆ ಆಂಧ್ರಪ್ರದೇಶದ ಗಡಿಯಲ್ಲಿ ಇಬ್ಬರು ರೈತರನ್ನು ಬಲಿ ಪಡೆದಿವೆ. ನಿನ್ನೆ ಚಳ್ಳಕೆರೆ ತಾಲೂಕಿನ ಕೆರೆಯಾಗಳಹಳ್ಳಿಯ ಕೆರೆಯಲ್ಲಿ ಆನೆಗಳು ಬೀಡುಬಿಟ್ಟಿದ್ದವು. ಈ ಸಂದರ್ಭದಲ್ಲಿ ಆನೆಯೊಂದು ಓರ್ವ ಯುವಕನ ಮೇಲೆ ದಾಳಿ ಮಾಡಿತ್ತು. ಇಂದು ಚಿತ್ರದುರ್ಗ ತಾಲೂಕಿನ ಆಯಿತೋಳು ಬಳಿಯ ಜಮೀನೊಂದರಲ್ಲಿ ಕಾಣಿಸಿಕೊಂಡ ಅದೇ ಆನೆಗಳು ಇಬ್ಬರ ಮೇಲೆ ದಾಳಿ ಇಟ್ಟಿವೆ.
ಬಯಲುಸೀಮೆಯಲ್ಲಿ ಸಮರ್ಪಕ ಆಹಾರ, ನೀರು ಸಿಗದೆ ಕಂಗೆಟ್ಟಿರುವ ಆನೆಗಳು ಮಣ್ಣನ್ನು ಮೈಮೇಲೆ ಹಾಕಿಕೊಂಡು ಘರ್ಜಿಸುತ್ತಿವೆ. ಬಿಸಿಲಿನ ತಾಪದಿಂದ ತಪ್ಪಿಸಿಕೊಳ್ಳಲು ಮರದ ನೆರಳಿಗೆ ನಿಲ್ಲಲು ಸಹ ಆಗದೆ ಆನೆಗಳು ಅತ್ತಿಂದಿತ್ತ ಓಡಾಡುತ್ತಿವೆ. ಈ ಸಂದರ್ಭದಲ್ಲಿ ದಾಂಧಲೆ ಮಾಡಿದ ಜನರತ್ತ ಓಡಿ ಬಂದು ದಾಳಿ ಮಾಡುತ್ತಿವೆ.
ಆನೆಗಳ ಹಾವಳಿ ಕಂಡ ಜನ ಜೋಡಾನೆಗಳು ಕಾಡಿನಿಂದ ಹೊರಬಂದರೆ ಗಂಡು-ಹೆಣ್ಣು ಜೋಡಿಯಾಗಿರುತ್ತವೆ. ಇವೆರಡೂ ಮದಗಜಗಳು ಗಂಡಾಗಿವೆ. ಹೀಗಾಗಿ, ಒಂದೊಂದೇ ಆನೆ ಬಂದು ದಾಳಿ ಮಾಡುತ್ತಿವೆ. ಹೆಣ್ಣಾನೆ ಜೊತೆಗಿದ್ದರೆ ಜನ ಎಷ್ಟೇ ಕೂಗಾಡಿದರೂ ಸಂಜವರೆಗೂ ಗಂಡಾನೆ ಜಾಗಬಿಟ್ಟು ಕದಲುತ್ತಿರಲಿಲ್ಲ. ಇವರೆಡೂ ಆನೆಗಳು ಅಣ್ಣ-ತಮ್ಮಂದಿರೇ ಆಗಿರಬೇಕು. ಹುಟ್ಟುತ್ತ ಜೊತೆಯಾದ ಆನೆಗಳು ಈಗಲೂ ಜೊತಗಿವೆ. ಜನರ ದಾಂಧಲೆಯಿಂದಾಗಿ ಒಂದರ ರಕ್ಷಣೆಗೆ ಮತ್ತೊಂದು ಆನೆ ಓಡೋಡಿ ಬರುತ್ತಿದೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲದೆ ಯುವಕರು ‘ಅಣ್ತಮ್ಮಾಸ್’ ಎಂದೇ ಆನೆಗಳನ್ನು ಕೂಗುತ್ತಿದ್ದಾರೆ.