ಪ್ರಮುಖ ಸುದ್ದಿ
ರೈತರ ಸರ್ಕಾರ : ನೂತನ ಸಿಎಂ ಬಿ.ಎಸ್.ಯಡಿಯೂರಪ್ಪ ಪ್ರಥಮ ಘೋಷಣೆ!
ಬೆಂಗಳೂರು: ರಾಜ್ಯ ಸರ್ಕಾರದಿಂದ ರೈತರಿಗೆ ಎರಡು ಕಂತುಗಳಲ್ಲಿ ತಲಾ ಎರಡು ಸಾವಿರ ರೂಪಾಯಿಯಂತೆ ವರ್ಷಕ್ಕೆ ನಾಲ್ಕು ಸಾವಿರ ರೂಪಾಯಿ ಕೊಡಲಾಗುವುದು. ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರಿಗೆ ನೀಡುವ ₹6 ಸಾವಿರ ರೂಪಾಯಿ ಜತೆ ಸೇರಿಸಿ ₹10 ಸಾವಿರ ನೀಡುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಿಸಿದ್ದಾರೆ. ಆ ಮೂಲಕ ಹಸಿರುಶಾಲು ಹೊದ್ದು ಅಧಿಕಾರ ಸ್ವೀಕರಿಸಿದ ಯಡಿಯೂರಪ್ಪ ಸರ್ಕಾರ ರೈತರ ಸರ್ಕಾರ ಎಂಬ ಸಂದೇಶ ರವಾನಿಸಿದ್ದಾರೆ.
ನೇಕಾರರ ₹100 ಕೋಟಿ ಸಾಲ ಮನ್ನಾ ಮಾಡುವುದಾಗಿಯೂ ಘೊಷಿಸಿದ್ದಾರೆ. ಮುಖ್ಯಮಂತ್ರಿ ಸ್ಥಾನ ಸಿಕ್ಕಿದ್ದು ರಾಜ್ಯದ ಜನತೆಗೆ ಸಂದ ಗೌರವವಾಗಿದ್ದು ಹಿಂದಿನ ಸರ್ಕಾರಕ್ಕೂ ನಮ್ಮ ಸರ್ಕಾರಕ್ಕೂ ಇರುವ ವ್ಯತ್ಯಾಸದ ಬಗ್ಗೆ ಮುಂದಿನ ದಿನಗಳಲ್ಲಿ ಸಾಧಿಸಿ ತೋರಿಸಬೇಕಿದೆ. ನಾನು ದ್ವೇಷದ ರಾಜಕಾರಣ ಮಾಡಲ್ಲ. ಇದೇ ಜುಲೈ 29ರ ಸೋಮವಾರದಂದೇ ಬಹುಮತ ಸಾಬೀತು ಪಡಿಸುತ್ತೇನೆ ಎಂದು ನೂತನ ಸಿಎಂ ಯಡಿಯೂರಪ್ಪ ಪ್ರಥಮ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.