ರಾಷ್ಟ್ರೀಯ ಮನೋಭಾವ ಬೆಳೆಸಿಕೊಳ್ಳಲು ಬಳ್ಳೂರಗಿ ಕರೆ
ಯಾದಗಿರಿ, ಶಹಾಪುರಃ ರಾಷ್ಟ್ರದ ಏಕತೆ, ನಿರ್ಮಾಣಕ್ಕೆ ಯುವಕರ ಪಾತ್ರ ಬಹು ಮುಖ್ಯವೆಂದು ಹಿರಿಯ ಸಾಹಿತಿ ದೊಡ್ಡಬಸಪ್ಪ ಬಳೂರಗಿ ಹೇಳಿದರು.
ನಗರದ ಹೊರವಲಯದ ಶಿರವಾಳ ರಸ್ತೆ ಮಾರ್ಗದಲ್ಲಿ ಬರುವ ಚಿಂತಮ್ಮಗೌಡತಿ ಸ್ಮಾರಕ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ನೆಹರು ಯುವ ಕೇಂದ್ರ ಕಲಬುರಗಿ, ಯಾದಗಿರಿ ಮತ್ತು ಗ್ರಾಮೀಣ ಗೆಳೆಯರ ಬಳಗ ಸಂಯುಕ್ತಾಶ್ರಯದಲ್ಲಿ ನಡೆದ ಅರಿವು ಮತ್ತು ಶಿಕ್ಷಣ ಉಪನ್ಯಾಸ ಮಾಲೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ದೇಶ ಪ್ರೇಮ, ಶಿಸ್ತು, ಸೇವಾ ಮನೋಭಾವದಂತಹ ಉತ್ತಮ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳೂವ ಮೂಲಕ ದೇಶದ ಯುವ ಜನರು ಕ್ರೀಯಾಶೀಲರಾಗಿ ತಮ್ಮನ್ನು ತಾವು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಶರಣು ಪಾಟೀಲ ಮಾತನಾಡಿ, ರಾಷ್ಟ್ರಕ್ಕಾಗಿ ಬಲಿದಾನ ಮಾಡಿದ ವೀರ ಪುರುಷರು ನಮಗೆ ಪ್ರೇರಣೆಯಾಗಬೇಕು. ಜ್ಞಾನದ ದ್ಯೋತಕರಾದ ಸ್ವಾಮಿ ವಿವೇಕಾನಂದರು ಹೇಳಿದ ಏಳಿ ಏದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ ಎಂಬುವದು ಮರೆಯಬಾರದು ಎಂದರು.
ಕಾಲೇಜಿನ ಪ್ರಾಂಶುಪಾಲ ಮಲ್ಲಿಕಾರ್ಜುನ ಅವಂಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ನರಸಿಂಹ ವೈದ್ಯ ರಾಷ್ಟ್ರ ಸೇವೆಯಲ್ಲಿ ಯುವಕರ ಪಾತ್ರ ಕುರಿತು, ಸುರೇಶ ಅರುಣಿಯವರು ಯುವ ನಾಯಕತ್ವದ ಕುರಿತು, ಶೃತಿಯವರು ಬಯಲು ಶೌಚ ಮುಕ್ತ ಕುರಿತು, ಸಿದ್ದಯ್ಯಸ್ವಾಮಿ ಕೇಂದ್ರ ಸರ್ಕಾರಗಳ ಯೋಜನೆಗಳ ಕುರಿತು ಸಹವಿವರವಾಗಿ ಉಪನ್ಯಾಸ ನೀಡಿದರು.
ಶಾಮಲಾ ಹಾಗೂ ಸರಸ್ವತಿ ಪ್ರಾರ್ಥನಾ ಗೀತೆ ಹಾಡಿದರು. ಬಳಗದ ಅಧ್ಯಕ್ಷ ಮಾಂತೇಶ ಗಿಂಡಿ, ಉಪಾಧ್ಯಕ್ಷ ಅಂಬು ದೋರನಹಳ್ಳಿ, ಕಾರ್ಯದರ್ಶಿ ವಿರೇಶ ಉಳ್ಳಿ, ಶಿವರಾಜ ಜಂಗಳಿ, ಶಂಕರ ಹುಲಕಲ್, ಜಗದೇವಪ್ಪ, ಜಗದೀಶ, ಸವಿತಾ ಇತರರಿದ್ದರು.