ಜನಮನ

ರಾಜಕಾರಣಿಯೊಳಗೊಬ್ಬ ಸಾಹಿತಿ ಇದ್ದರೆ ಚಂದ, ಸಾಹಿತಿಯೊಳಗೊಬ್ಬ ರಾಜಕಾರಣಿ ಇದ್ದರೆ ಚಂಪಾ!

– ಮಲ್ಲಿಕಾರ್ಜುನ್ ಮುದನೂರ್ 

ಮೈಸೂರಿನಲ್ಲಿ ನಡೆದ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಡೆದ ರಾಜಕೀಯ ಮೇಲಾಟಗಳು ಸಾಹಿತ್ಯ ವೇದಿಕೆಯನ್ನೇ ಅನುಮಾನದಿಂದ ನೋಡುವ ಮಟ್ಟಕ್ಕೆ ತಂದು ನಿಲ್ಲಿಸಿವೆ. ಸಮ್ಮೇಳನದ ಸರ್ವಾದ್ಯಕ್ಷರಾದ ಬಂಡಾಯ ಸಾಹಿತಿ ಚಂದ್ರಶೇಖರ ಪಾಟೀಲ್ ಅವರಿಂದ ಕನ್ನಡಿಗರು ಬಹು ನಿರೀಕ್ಷೆಯನ್ನು ಹೊಂದಿದ್ದರು. ಕನ್ನಡ ನಾಡು-ನುಡಿ ಅಭಿವೃದ್ಧಿಗೆ, ನೆಲ-ಜಲದ ಸಮಸ್ಯೆಗಳಿಗೆ ಉತ್ತಮ ಪರಿಹಾರಗಳನ್ನು ಸೂಚಿಸಬಹುದು. ಪಕ್ಷಾತೀತವಾಗಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಚಾಟಿ ಬೀಸಿ ಎಚ್ಚರಗೊಳಿಸಬಹುದು ಎಂದು ಭಾವಿಸಿದ್ದರು.

ಆದರೆ, ಚಂಪಾ ಅವರು ಮಾತ್ರ ಮೊದಲ ದಿನದ ಸಮ್ಮೇಳನ ಉದ್ಧಾಟನೆ ವೇಳೆಯೇ ಸಿಎಂ ಸಿದ್ಧರಾಮಯ್ಯ ಅವರ ಕೈ ಹಿಡಿದರು. ಕನ್ನಡದ ಸಿದ್ಧರಾಮಯ್ಯ ಎಂದು ಹಾಡಿ ಹೊಗಳಿದರು. ಮರು ದಿನ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹರಿಹಾಯ್ದರು. ಅಷ್ಟಕ್ಕೂ ಸಮಾಧಾನಗೊಳ್ಳದ ಚಂಪಾ ಮತ್ತೊಂದು ಹೆಜ್ಜೆ ಮುಂದಿಟ್ಟು ಜಾತ್ಯಾತೀತ ಪಕ್ಷಕ್ಕೆ ಮತ ನೀಡಿ, ಯಾವ ಪಕ್ಷ ಎಂದು ಹೇಳುವ ಅಗತ್ಯವಿಲ್ಲ ಎಂದು ಹೇಳುವ ಮೂಲಕ ಕಾಂಗ್ರೆಸ್ ಪಕ್ಷದ ಬೆಂಬಲಕ್ಕೆ ನಿಂತು ಬಿಟ್ಟರು.

ಮೇಲ್ನೋಟಕ್ಕೆ ಚಂಪಾ ಅವರ ಹೇಳಿಕೆಯಲ್ಲಿ ಅಂಥದ್ದೇನು ತಪ್ಪಿಲ್ಲವಲ್ಲ ಎಂದು ಅನ್ನಿಸದಿರದು. ಅವರೂ ಸಹ ತಮ್ಮ ಹೇಳಿಕೆಯನ್ನು ಸಮರ್ಥನೆ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ನಾಯಕರು ಚಂಪಾ ಬೆಂಬಲಕ್ಕೆ ನಿಂತಿದ್ದು ಕೋಮುವಾದಿಗಳಿಗೆ ಮತಹಾಕಿ ಅಂತ ಹೇಳಬೇಕಿತ್ತೇನು ಎಂದು ಪ್ರಶ್ನಿಸಿದ್ದಾರೆ. ಮತ್ತೊಂದು ಕಡೆ ಬಿಜೆಪಿಯವರು ಕನ್ನಡ ಸಮ್ಮೇಳನದ ವೇದಿಕೆಯನ್ನು ಚಂಪಾ ರಾಜಕೀಯ ವೇದಿಕೆಯನ್ನಾಗಿ ಬಳಸಿಕೊಂಡಿದ್ದು ಅಕ್ಷಮ್ಯ ಅಂದಿದ್ದಾರೆ.

ಚಂಪಾ ಅವರು ಜಾತ್ಯಾತೀತ ಪಕ್ಷಕ್ಕ ಮತನೀಡಿ ಅಂದಿದ್ದರ ಬಗ್ಗೆ ಪಕ್ಷಾತೀತವಾಗಿರುವವರೂ ಸಹ ತಕರಾರು ತೆಗೆಯಲು ಕಾರಣ ಚಂಪಾ ಮತ್ತು ಸಾಹಿತ್ಯದ ಮೇಲಿನ ಅಭಿಮಾನ ಹೊರತು ಬೇರೆನಲ್ಲ. ಯಾಕೆಂದರೆ, ಬಂಡಾಯ ಸಾಹಿತ್ಯದಿಂದ ಬಂದಿರುವ ಚಂಪಾ ಜೀವನ ಪರ್ಯಂತ ಹೋರಾಟ ಮಡಿಕೊಂಡು ಬಂದವರು. ಆದರೆ, ವಯಸ್ಸಾದಂತೆ ಅವರ ನಿಲುವುಗಳೂ ಸಡಿಲಗೊಳ್ಳುತ್ತಿವೆ. ಕಳೆದ ವಿಧಾನಸಭೆ ಚುನಾವಣೆ ವೇಳೆ ಭ್ರಷ್ಟಾಚಾರ ಆರೋಪ ಹೊತ್ತು ಜೈಲಿಗೆ ಹೋಗಿ ಬಂದಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕೆ.ಜೆ.ಪಿ ಕಟ್ಟಿದಾಗ ಅವರೊಂದಿಗೆ ಕೈ ಜೋಡಿಸಿದ್ದರು.

ಈಗ ಸಮ್ಮೇಳನದ ವೇದಿಕೆಯಲ್ಲಿ ಸಿಎಂ ಸಿದ್ಧರಾಮಯ್ಯ ಪರ ಬ್ಯಾಟಿಂಗ್ ಮಾಡಿದ್ದಲ್ಲದೆ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ. ಅಷ್ಟೇ ಅಲ್ಲದೆ ಜಾತ್ಯಾತೀತ ಪಕ್ಷಕ್ಕೆ ಮತನೀಡಿ ಎಂಬ ಅಪ್ರಸ್ತುತ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದಾರೆ. ಹೀಗಾಗಿ, ರಾಜಕಾರಣಿಯೊಳಗೊಬ್ಬ ಸಾಹಿತಿ ಇದ್ದರೆ ಚಂದ. ಯಾಕೆಂದರೆ, ರಾಜಕಾರಣದ ಜೊತೆಗೆ ಸ್ವಲ್ಪಾದರೂ ಮಾನವ ಸಂವೇದನ ಅವರಲ್ಲಿರುತ್ತದೆ. ಉದಾಹರಣೆಗೆ ಮಾಜಿ ಉಪಮುಖ್ಯಮಂತ್ರಿ ದಿ.ಎಂ.ಪಿ.ಪ್ರಕಾಶ ಅಂಥವರಿದ್ದರು. ಆದರೆ, ಈ ಸಮ್ಮೇಳನದಲ್ಲಿ ಚಂಪಾ ಅವರ ನಡವಳಿಕೆ ನೋಡಿದರೆ ಸಾಹಿತಿಯೊಳಗೊಬ್ಬ ರಾಜಕಾರಣಿ ಇದ್ದರೆ ಅದು ಚಂಪಾ ಎಂದು ಜನ ಆಡಿಕೊಳ್ಳುವಂತಾಗಿರುವುದು ನಿಜಕ್ಕೂ ವಿಪರ್ಯಾಸ!

Related Articles

2 Comments

  1. ಚಂಪಾ ಓವ೯ ಅನುಕೂಲಸಿಂಧು ಸಾಹಿತಿ., ಜಾತ್ಯತೀತ ಪಕ್ಷಕ್ಕೆ ಮತ ನೀಡಿ ಎಂದು ನೀಡಿರುವ ಅವರ ಹೇಳಿಕೆ ಏನಿದೆಯಲ್ಲ, ಒಂಥರಾ ಸಮಗ್ರ ಪ್ರಾಫಿಟ್ಟಿನ ಇರಾದೆಯಿಂದ ಕೂಡಿದ್ದು. ಹೇಗೆ? ಎಂದರೆ ಮುಂಬರುವ ಚುನಾವಣೆಯಲ್ಲಿ ಒಂದು ವೇಳೆ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರಕಾರ ರಚಿಸಿದರೂ ಚಂಪಾ ಸಾಹೇಬರ ಪಾಲಿಗೆ ಕುಲ್ ಜಾ ಸಿಮ್ ಸಿಮ್ ರೀತಿಯ ಲಾಟರಿ ಹೊಡೆಯೋದು ಗ್ಯಾರಂಟಿ. ಇಷ್ಟೇ ಅವರ ಎದುರಿಗಿರುವ ಅಜೆಂಡಾ ಕೂಡ. ಇನ್ನುಳಿದಂತೆ ಅವರ ಪ್ರಗತಿಪರ ನಿಲುವು, ಧೋರಣೆ ಎಲ್ಲವೂ ಬುಲ್ ಶಿಟ್ ಅಷ್ಟೆ.ಇವರೆಲ್ಲಾ ಒಂದು ನಮೂನಿ ಮಳಿಗಾಲದ ಕಪ್ಪಿ ಇದ್ಹಾಂಗ….ಮಳಿ ಹೋಗಣಾ ಇಂಥವರ ಅಥಾಪಥಾ ಏನೂ ಇರಲ್ಲ.

Leave a Reply

Your email address will not be published. Required fields are marked *

Back to top button