ಚಂಪಾ ನೇತೃತ್ವದ ಕನ್ನಡ ಸಮ್ಮೇಳನ ಕ್ಷಣ ಕ್ಷಣಕ್ಕೂ ರಾಜ್ಯದ ಗಮನ ಸೆಳೆಯಲಿದೆ! ಸಿಕ್ಕಿದೆ ಮುನ್ಸೂಚನೆ?
ಮೈಸೂರು: ಮಲ್ಲಿಗೆ ನಗರಿ ಮೈಸೂರಿನಲ್ಲಿ 83 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ಸಿಕ್ಕಿದೆ. ಇಂದಿನಿಂದ ಮೂರು ದಿನಗಳ ಕಾಲ ಸಮ್ಮೇಳನ ನಡೆಯಲಿದ್ದು ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹಾದೇವಪ್ಪ ಧ್ವಜಾರೋಹಣ ನೆರವೇರಿಸಿದ್ದಾರೆ. ಈ ವೇಳೆ ಸಮ್ಮೇಳನಾದ್ಯಕ್ಷರಾದ ಚಂದ್ರಶೇಖರ್ ಪಾಟೀಲ್, ಕಸಾಪ ಅದ್ಯಕ್ಷ ಮನು ಬಳಿಗಾರ ಸೇರಿ ಇತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಮ್ಮೇಳನ ಅದ್ಯಕ್ಷ ಚಂಪಾ ಮೂರು ದಿನಗಳ ಕಾಲ ಕನ್ನಡ ಸಮ್ಮೇಳನ ನಡೆಯಲಿದ್ದು ವಿವಿಧ ವೇದಿಕೆಗಳಲ್ಲಿ ಹಲವು ಗೋಷ್ಠಿಗಳು ನಡೆಯಲಿವೆ. ಕನ್ನಡ ನಾಡು, ನುಡಿ ಅಭಿವೃದ್ಧಿ ಮತ್ತು ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಲಿದೆ. ಆದರೆ, ನಮ್ಮ ಸಮಸ್ಯೆಗಳಿಗೆ ನಾವೇ ಜವಾಬ್ದಾರರು, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾದವರೂ ನಾವೇ ಎಂಬುದು ಮುಖ್ಯಾಂಶವಾಗಬೇಕು ಎಂಬುದಾಗಿ ಚಂದ್ರಶೇಖರ ಪಾಟೀಲ್ ಹೇಳಿದ್ದಾರೆ.
ಸಮ್ಮೇಳನದ ಆರಂಭದಲ್ಲೇ ಸಮ್ಮೇಳನಾದ್ಯಕ್ಷ ಚಂಪಾ ಅವರು ಎಂದಿನ ಬಂಡಾಯದ ಗತ್ತಿನಲ್ಲೇ ಹೇಳಿಕೆ ನೀಡಿದ್ದಾರೆ. ಚಂಪಾ ನೇತೃತ್ವದಲ್ಲಿ ನಡೆಯಲಿರುವ ಕನ್ನಡ ಸಮ್ಮೇಳನ ಕ್ಷಣ ಕ್ಷಣಕ್ಕೂ ರಾಜ್ಯದ ಗಮನ ಸೆಳೆಯಲಿದೆ ಎಂಬುದರ ಮುನ್ಸೂಚನೆ ಇದಾಗಿದೆ. ಎಂಬುದು ಸಾಹಿತ್ಯಾಸಕ್ತರ ಅಭಿಪ್ರಾಯವಾಗಿದೆ.