ಪೌರತ್ವ ತಿದ್ದುಪಡಿ ಕಾಯ್ದೆಯಿಂದ ತೊಂದರೆಯಿಲ್ಲ-ಶರಣಭೂಪಾಲರಡ್ಡಿ
ಮುಸ್ಲಿಂರಿಗೆ ಪೌರತ್ವ ಕಾಯ್ದೆಯಿಂದ ತೊಂದರೆ ಎಂಬುದು ಸುಳ್ಳು
ಯಾದಗಿರಿ, ಶಹಾಪುರಃ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯಿಂದ ಮುಸ್ಲಿಂರ ಪೌರತ್ವಕ್ಕ ಧಕ್ಕೆ ಬರಲಿದೆ ಎಂಬುದು ಶುದ್ಧ ಸುಳ್ಳು. ಅಮಾಯಕ ಮುಸ್ಲಿಂ ಬಾಂಧವರನ್ನು ವಿರೋಧ ಪಕ್ಷಗಳು ಎತ್ತಿಕಟ್ಟುವ ಮೂಲಕ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಈ ಕಾಯ್ದೆ ಜಾರಿಯಿಂದ ಭಾರತೀಯ ಮುಸ್ಲಿಂರಿಗೆ ಯಾವುದೇ ತೊಂದರೆಯಿಲ್ಲ ಎಂದು ಬಿಜೆಪಿ ಮುಖಂಡ ಶರಣಭೂಪಾಲರಡ್ಡಿ ಹೇಳಿದರು.
ನಗರದ ಬಿಜೆಪಿ ಕಾರ್ಯಾಲಯದಲ್ಲಿ ಬುಧವಾರ ನಡೆದ ಪೌರತ್ವ ತಿದ್ದುಪಡೆ ಕಾಯ್ದೆ ಮನೆ ಸಂಪರ್ಕ ಅಭಿಯಾನ ಕಾರ್ಯಗಾರದಲ್ಲಿ ಭಾಗವಹಿಸಿ ಮಾತನಾಡಿದರು.
ಸಿಎಎ ಜಾರಿಯಿಂದ ದೇಶವಾಸಿಗಳಿಗೆ ಅನುಕೂಲವಿದೆ. ಅದು ಮುಸ್ಲಿಂ ಇರಲಿ, ಹಿಂದೂ ಇರಲಿ ಯಾವುದೇ ತೊಂದರೆಯಾಗುವದಿಲ್ಲ. ಪೌರತ್ವ ಕಾಯ್ದೆ ಬಗ್ಗೆ ನರೇಂದ್ರ ಮೋದಿಜೀಯವರು ತೆಗೆದುಕೊಂಡ ಮೊದಲ ನಿರ್ಧಾರವಲ್ಲ. 1971 ರಲ್ಲಿ ನಡೆದ ಯದ್ಧದ ಬಳಿಕಬಾಂಗ್ಲಾದೇಶ ರಚನೆ ನಂತರ ನಿರಾಶ್ರಿತರಿಗೆ ಪೌರತ್ವ ನೀಡಲಾಯಿತು. ಆದರೆ ಪಾಕಿಸ್ತಾನದಿಂದ ಬಂದವರಿಗೆ ನೀಡಿರಲಿಲ್ಲ.
ಅಲ್ಲದೆ ಮುಸ್ಲಿಂ ದೇಶವೆಂದು ಘೋಷಿಸಿಕೊಂಡ ಬಾಂಗ್ಲಾ, ಪಾಕಿಸ್ತಾನ ಮತ್ತು ಇಸ್ಲಾಬಾದ್ನಲ್ಲಿ ವಾಸಿಸುವ ಮುಸ್ಲೀಂರು ಬಹುಸಂಖ್ಯಾತರಾಗಿದ್ದು, ಅವರನ್ನು ಅಲ್ಪಸಂಖ್ಯಾತೆಂದು ಪರಿಗಣಿಸಲು ಬರುವದಿಲ್ಲ ಎಂದರು.
ಕಾರ್ಯಕರ್ತರು ಕಾಯ್ದೆ ಕುರಿತು ಸಂಪೂರ್ಣ ಮಾಹಿತಿ ಅರಿತು ಮನೆ ಮನೆ ತೆರಳಿ ಈ ಕುರಿತು ಜಾಗೃತಿ ಮೂಡಿಸಬೇಕು. ಭಿತ್ತಿಪತ್ರದಲ್ಲಿ ತಿಳಿಸದಂತೆ ವಿಷಯ ಕುರಿತು ಚರ್ಚಿಸಿ ಜನರೊಂದಿಗೆ ಮಾಹಿತಿ ನೀಡುವ ಕೆಲಸ ಮಾಡಬೇಕು ಎಂದರು.
ಮಾಜಿ ಶಾಸಕ ಗುರು ಪಾಟೀಲ್ ಶಿರವಾಳ ಮಾತನಾಡಿ, ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯಿಂದ ದೇಶ ನಿವಾಸಿ ಯಾರಿಗೂ ತೊಂದರೆಯಾಗುವದಿಲ್ಲ. ಭಾರತದಲ್ಲಿ ವಾಸಿಸುವ ಮುಸ್ಲೀಂರಿಗೂ ತೊಂದರೆಯಾಗಲ್ಲ ಎಂಬುದನ್ನು ದೇಶದ ಪ್ರಧಾನಿಗಳೇ ಸ್ಪಷ್ಟವಾಗಿ ಹೇಳಿದ್ದಾರೆ.
ಕಾಯ್ದೆ ಕುರಿತು ಸಮಗ್ರ ಮಾಹಿತಿ ಅರಿತು ಮಾತನಾಡಬೇಕು. ವಿರೋಧ ಪಕ್ಷಗಳಿಗೆ ಯಾವುದೇ ಕ್ಯಾತೆ ತೆಗೆಯಲು ಯಾವುದೇ ಅಸ್ತ್ರ ದೊರೆಯುತ್ತಿಲ್ಲ. ಕೇಂದ್ರ ಸರ್ಕಾರ ಆಡಳಿತದಲ್ಲಿ ಹುಳುಕು ಹುಡುಕುವ ಪ್ರಯತ್ನ ನಿರಂತರ ನಡೆದಿದೆ. ಆದರೆ ಸಮರ್ಪಕವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಬಿಜೆಪಿ ಕೇಂದ್ರ ಆಡಳಿತ ಸಮರ್ಪಕ ವಿಷಯ ಅರಿತು ಲಾಭ ನಷ್ಟ ಅರಿತು ಮುನ್ನಡೆಯುತ್ತಿದೆ.
ಮೋದಿಜೀಯವರ ನೇತೃತ್ವದಲ್ಲಿ ಭಾರತ ವಿಶ್ವದಲ್ಲಿಯೇ ಬಲಿಷ್ಠ ದೇಶವಾಗಿ ಹೊರಹೊಮ್ಮುತ್ತಿದೆ. ಕಾರಣ ಕಾಯ್ದೆ ಕುರಿತು ಹಬ್ಬಿಸಿರುವ ಸುಳ್ಳು ಸುದ್ದಿಯನ್ನು ಜನರು ನಂಬುವದಿಲ್ಲ. ಈ ಕುರಿತು ಮನೆ ಮನೆಗೆ ಸತ್ಯಾಂಶ ತಿಳಿಸುವ ಜವಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಈ ಸಂದರ್ಭದಲ್ಲಿ ಡಾ.ಚಂದ್ರಶೇಖರ ಸುಬೇದರ, ನಗರ ಘಟಕ ಅಧ್ಯಕ್ಷ ದೇವು ಕೋನೇರ ಉಪಸ್ಥಿತರಿದ್ದರು. ನಗರಸಭೆ ಸದಸ್ಯರಾದ ಲಾಲನಸಾಬ ಖುರೇಶಿ, ರವಿ ನಾಯಕ, ಅಶೋಕ ನಾಯಕ, ಸೂಗುರೇಶ ಹಿರೇಮಠ, ರಾಘವೇಂದ್ರ ಯಕ್ಷಿಂತಿ, ಚಂದ್ರು ಯಾಳಗಿ, ಗುರು ಕಾಮಾ, ವೆಂಕಟೇಶ ಆಲ್ದಾಳ, ತಾಯರ್ ಹುಸೇನ್ ಖಾಜಿ ಕೆಂಬಾವಿ, ರಾಜುಗೌಡ ಉಕ್ಕಿನಾಳ ಸೇರಿದಂತೆ ಇತರರಿದ್ದರು.