ಖಾಸಗೀಕರಣದಿಂದ ದೇಶ ಅಧೋಗತಿಯತ್ತಃ ಸಿಐಟಿಯು ಆಕ್ರೋಶ
ಬಿಜೆಪಿ ಆಡಳಿತ ಕೇಂದ್ರದ ಬಾಯಲ್ಲಿ ಖಾಸಗೀಕರಣ ಜಪಃ ಆರೋಪ
yadgiri, ಶಹಾಪುರಃ ಈ ದೇಶದ ರೈತರು ಕಾರ್ಮಿಕರು ಮತ್ತು ಕೂಲಿಕಾರರ ಬದುಕು ಖಾಸಗೀಕರಣ ಎಂಬ ಪೆಡಂಭೂತದ ಕೈಗೆ ಸಿಲುಕಿ ನಲಗುವಂತಾಗಲಿದೆ. ರೈತರು ಕಾರ್ಮಿಕರು ಒಂದಾಗದಿದ್ದರೆ ಮುಂದೆ ಈ ದೇಶಕ್ಕೆ ಭವಿಷ್ಯವಿಲ್ಲ. ಬಿಜೆಪಿ ಸರ್ಕಾರ ರೈತ, ಕಾರ್ಮಿಕ, ಕೂಲಿಕಾರರ ಬದುಕು ಅತಂತ್ರಗೊಳಿಸಿದೆ ಎಂದು ಸಿಐಟಿಯು ತಾಲೂಕು ಸಂಚಾಲಕ ಮಲ್ಲಯ್ಯ ಪೋಲಂಪಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಶನಿವಾರ ಇಲ್ಲಿನ ತಹಸೀಲ್ ಕಚೇರಿ ಎದುರು ಸಿಐಟಿಯು, ಕೆಪಿಆರ್ಎಸ್, ಎಐಎಡಬ್ಲೂಯು ಸಂಘಟನೆವತಿಯಿಂದ ನಡೆದ ರೈತರ ಕಾರ್ಮಿಕರ, ಕೂಲಿಕಾರರ ಐಕ್ಯ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರೈತರ ಹೊಲ, ಗದ್ದೆಗಳು ಖಾಸಗೀಕರಣ, ಎಪಿಎಂಸಿ ಮಾರುಕಟ್ಟೆಗಳು ಖಾಸಗೀಕರಣ, ಶಿಕ್ಷಣ ಆರೋಗ್ಯ ಖಾಸಗೀಕರಣ, ರಸತೆ, ರೈಲು, ವಿಮಾನ, ವಿದ್ಯುತ್, ನೀರು ಇದಲ್ಲದೆ ಬ್ಯಾಂಕುಗಳು, ದೂರ ಸಂಪರ್ಕ, ವಿಮಾ ಕಂಪನಿಗಳು ಸಾಲದೆಂಬಂತೆ ದೇಶದ ರಕ್ಷಣೆ ವ್ಯವಸ್ಥೆಯನ್ನು ಸಹ ಈಗ ಖಾಸಗೀಕರಣ ಎನ್ನುವ ಶೂಲಕ್ಕೆ ಬಿಜೆಪಿ ಸರ್ಕಾರ ಬಲಿಯಾಗಿಸುತ್ತಿದೆ ಈಗಲೆ ಎಚ್ಚೆತ್ತುಕೊಳ್ಳದೆ ಹೋದರೆ ಮುಂದೆ ಬಹು ದೊಡ ಸವಾಲು ಎದುರಾಗಲಿದೆ ಎಂದರು.
ಕೇಂದ್ರ ಸರ್ಕಾರ ಸಂಪೂರ್ಣ ಕಾರ್ಪೋರೇಟಕರಣಗೊಳಿಸುತ್ತಿದ್ದು, ಇದರಿಂದ ದೇಶದ ಸ್ಥಿತಿ ಗಂಭೀರವಾಗಲಿದೆ ಎಂದು ಆರೋಪಿಸಿ ಮತ್ತು ಹಲವು ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಇಲ್ಲಿನ ಕೂಲಿ ಕಾರ್ಮಿಕ ಜಂಟಿ ಸಂಘಟನೆಗಳು ಸಿಐಟಿಯು ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದವು.
ಈ ಸಂದರ್ಭದಲ್ಲಿ ಪಂಚಾಯತಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಲ್ಲಣ್ಣ ಬಿರಾದಾರ, ಅಂಗನವಾಡಿ ನೌಕರರ ಸಂಘದ ತಾಲೂಕು ಕಾರ್ಯದರ್ಶಿ ಯಮನಮ್ಮ ದೋರನಹಳ್ಳಿ, ಅಕ್ಷರ ದಾಸೋಹ ನೌಕರರ ಸಂಘದ ಗೌರವ ಅಧ್ಯಕ್ಷ ಸುನಂದ ಹಿರೇಮಠ, ತಾಲೂಕು ಅಧ್ಯಕ್ಷೆ ಹನುಮಂತಿ ಮೌರ್ಯ, ತಾಲೂಕು ಕಾರ್ಯದರ್ಶಿ ಈರಮ್ಮ ಹಯ್ಯಾಳಕರ್, ಖಜಾಂಚಿ ಮಂಜುಳಾ ಹೊಸಮನಿ, ಮರ್ದಾನೆಪ್ಪ ಕಂದಕೂರ, ಶಾರದಾದೇವಿ, ನಿರ್ಮಲ, ಹನುಂತಿ, ಮಲ್ಲನಗೌಡ ಮಾಲಿ ಪಾಟೀಲ್ ಸೇರಿದಂತೆ ಇತರರು ಭಾಗವಹಿಸಿದ್ದರು.