ಮೀನು ತಿಂದು ಮಂಜುನಾಥನ ಮಂದಿರಕ್ಕೆ ಹೋದರಾ ಮುಖ್ಯಮಂತ್ರಿ!
ವಿವಾದ ಸೃಷ್ಟಿಸಿದೆ ಸಿಎಂ ಧರ್ಮಸ್ಥಳ ಭೇಟಿ!
ದೇಗುಲಗಳಿಗೆ ತೆರಳುವ ಸಂಪ್ರದಾಯವಾದಿಗಳು ಅನೇಕ ಕಟ್ಟುಪಾಡುಗಳನ್ನು ಪಾಲಿಸುತ್ತಾರೆ. ಮದ್ಯ, ಮಾಂಸ ಸೇವನೆಯಂತೂ ನಿಷಿದ್ಧವಾಗಿರುತ್ತದೆ ಇದು ಎಲ್ರಿಗೂ ಗೊತ್ತಿರುವ ಸಹಜ ವಿಷಯ.
ಆದರೆ, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮಾತ್ರ ನಿನ್ನೆ ಧರ್ಮಸ್ಥಳಕ್ಕೆ ಭೇಟಿ ನೀಡಿರೋದು ಈಗ ದೊಡ್ಡ ಸುದ್ದಿಯಾಗಿದೆ.ಕಾರಣ ಬಂಟ್ವಾಳದಲ್ಲಿ ಸಿಎಂ ಸಿದ್ಧರಾಮಯ್ಯ ಮೀನಿನ ಊಟ ಮಾಡಿದ್ದರು. ಸಚಿವರಾದ ರಮಾನಾಥ್ ರೈ, ಡಿ.ಕೆ.ಶಿವಕುಮಾರ್ ಅವರೂ ಸಿಎಂ ಜೊತೆಗೆ ಮೀನಿನೂಟ ಸವಿದಿದ್ದರು. ಊಟ ಆದ ಬಳಿಕ ಸಿಎಂ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದರು ಎಂಬುದೇ ಈಗ ವಿವಾದವಾಗಿದ್ದು ಸಂಪ್ರದಾಯವಾದಿಗಳ ಕೆಂಗಣ್ಣಿಗೆ ಗುರಿಯಾಗಿದೆ.
ಮುಖ್ಯಮಂತ್ರಿ ಸಿದ್ಧರಾಮಯ್ಯ ಮೀನೂಟ ಸವಿದ ಚಿತ್ರಗಳು ವೈರಲ್ ಆಗಿವೆ. ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆಗಳು ಶುರು ಆಗಿವೆ. ಕೆಲವರು ಬೇಡರ ಕಣ್ಣಪ್ಪ ಮಾಂಸ ಆಹಾರವನ್ನೇ ದೇವರಿಗೆ ಅರ್ಪಿಸಿರಲಿಲ್ಲವೇ. ಆಹಾರ ಅವರವರಿಗೆ ಬಿಟ್ಟ ವಿಚಾರ ಅಂತ ವಾದಿಸುತ್ತಿದ್ದಾರೆ. ಇನ್ನೂ ಕೆಲವರು ಧರ್ಮಸ್ಥಳದ ಮಂಜುನಾಥನಿಗೆ ಸಿಎಂ ಅಪಚಾರ ಮಾಡಿದ್ದಾರೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಮಾಂಸಾಹಾರ ಸೇವಿಸಿದ ಬಳಿಕ ದೇಗುಲಕ್ಕೆ ಭೇಟಿ ನೀಡುವ ಅಗತ್ಯವೇನಿತ್ತು ಎಂದು ವಾದಿಸುತ್ತಿದ್ದಾರೆ.