ಮುಖ್ಯಮಂತ್ರಿ ಯಡಿಯೂರಪ್ಪಗೆ ಸಿದ್ಧರಾಮಯ್ಯ ಅಭಿನಂದನೆ ಸಲ್ಲಿಸಿದ್ದು ಹೀಗೆ!
ಬೆಂಗಳೂರು: ನಮ್ಮಂತೆ ಯಡಿಯೂರಪ್ಪ ಅವರೂ ಸಹ ಸುದೀರ್ಘ ರಾಜಕಾರಣ, ಹೋರಾಟದ ಹಿನ್ನೆಲೆ ಹೊಂದಿದ್ದಾರೆ. ಮತ್ತೆ ಮುಖ್ಯಮಂತ್ರಿಯಾಗಿರುವ ಯಡಿಯೂರಪ್ಪ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಸಿದ್ಧರಾಮಯ್ಯ ಸದನದಲ್ಲಿ ಹೇಳಿದರು. ಆದರೆ, ಆಡಳಿತ ಯಂತ್ರ ಕುಸಿದಿದ್ದು ಜನರ ಆಶೋತ್ತರದ ಮೂಲಕ ನಾನು ಸಿಎಂ ಆಗಿದ್ದೇನೆ ಎಂದಿರುವ ಯಡಿಯೂರಪ್ಪ ಮಾತು ಒಪ್ಪತಕ್ಕದಲ್ಲ. ಕುಮಾರಸ್ವಾಮಿ ಸರ್ಕಾರ ಉತ್ತಮ ಆಡಳಿತವನ್ನೇ ನೀಡಿದೆ. ಕೆಲ ಶಾಸಕರನ್ನು ಅತೃಪ್ತರನ್ನಾಗಿಸಿ ನೀವು ಅಧಿಕಾರ ಹಿಡಿದಿದ್ದೀರಿ ಎಂದು ಯಡಿಯೂರಪ್ಪ ಗೆ ಅಭಿನಂದಿಸುತ್ತಲೇ ಟಾಂಗ್ ನೀಡಿದರು.
ಯಡಿಯೂರಪ್ಪ ಈವರೆಗೆ ಬಹುಮತದೊಂದಿಗೆ ಮುಖ್ಯಮಂತ್ರಿ ಆಗಿಲ್ಲ. ಈ ಹಿಂದೆಯೂ ಬಿಜೆಪಿಗೆ ಬಹುಮತ ಬಂದಿರಲಿಲ್ಲ. ಪಕ್ಷೇತರರ ಬೆಂಬಲದೊಂದಿಗೆ ಸಿಎಂ ಆಗಿದ್ದರು. ಒಟ್ಟು ನಾಲ್ಕು ಬಾರಿಯೂ ಸಹ ಸಂಪೂರ್ಣ ಬಹುಮತ ಇಲ್ಲದ ಸಂದರ್ಭದಲ್ಲೇ ಯಡಿಯೂರಪ್ಪ ಸಿಎಂ ಖುರ್ಚಿ ಹಿಡಿದಿದ್ದಾರೆ. ಈಗಲೂ ಸಂವಿಧಾನ ಬಾಹಿರವಾಗಿ ಸಿಎಂ ಆಗಿದ್ದಾರೆ ಎಂದು ಟೀಕಿಸಿದರು. ಆದರೆ, ದ್ವೇಷ ರಾಜಕಾರಣ ಮಾಡದೆ ಉತ್ತಮ ಆಡಳಿತ ನೀಡುತ್ತೇನೆ ಎಂದಿರುವ ಯಡಿಯೂರಪ್ಪ ಅವರ ಮಾತಿಗೆ ಬೆಂಬಲಿಸುತ್ತೇನೆ ಎಂದು ಸಿದ್ಧರಾಮಯ್ಯ ಹೇಳಿದರು.