ಮಹಾಮಾರಿ ಕೊರೊನಾ ತಡೆಗೆ ಲಸಿಕೆ ಪೂರಕ – ಜಗನ್ನಾಥರಡ್ಡಿ
ಸಾವಿರ ಜನಕ್ಕೆ ಲಸಿಕೆ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ
yadgiri, ಶಹಾಪುರಃ ಮಹಾಮಾರಿ ಕೊರೊನಾ ಮಾನವ ಜನಾಂಗವನ್ನೆ ತಲ್ಲಣಗೊಳಿಸಿದ್ದು, ಕೊರೊನಾ ತಡೆಗೆ ಪ್ರತಿಯೊಬ್ಬರು ಲಸಿಕೆ ಹಾಕಿಸಿಕೊಳ್ಳುವದು ಅಗತ್ಯವಿದೆ. ಕೊರೊನಾ ತಡೆಗೆ ಲಸಿಕೆ ಪೂರಕವಾಗಿದೆ ಎಂದು ತಹಸೀಲ್ದಾರ ಜಗನ್ನಾಥರಡ್ಡಿ ತಿಳಿಸಿದರು.
ನಗರದ ಬಾಲಕಿಯರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಎಬಿವಿಪಿ ವತಯಿಂದ ನಡೆದ ಸಾವಿರ ಜನರಿಗೆ ಉಚಿತ ಲಸಿಕೆ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜನರು ಲಸಿಕೆ ಹಾಕಿಸಿಕೊಂಡಷ್ಟು ಕೊರೊನಾ ತೀವ್ರತೆ ಕಡಿಮೆಯಾಗಲಿದೆ. ಲಸಿಕೆ ಹಾಕಿಕೊಂಡವರಿಗೆ ಕೊರೊನಾ ತಗುಲಿದರೂ ಪ್ರಾಣಪಾಯದಿಂದ ಪಾರಾಗಲಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆಯೇ ದೃಢಪಡಿಸಿದೆ. ಕಾರಣ ದೇಶದ ಜನಸಂಖ್ಯೆ 140 ಕೋಟಿಯಷ್ಟಿದ್ದು, ದಿನಕ್ಕೆ 70 ರಿಂದ 80 ಲಕ್ಷ ಜನರಿಗೆ ಲಸಿಕೆ ಹಾಕುವ ಮಹತ್ವದ ಕಾರ್ಯವನ್ನು ಆರೋಗ್ಯ ಇಲಾಖೆ ಮಾಡುತ್ತಿದೆ.
ಸಂಘ ಸಂಸ್ಥೆಗಳು ಜನರ ಸಹಭಾಗಿತ್ವ ಅಗತ್ಯವಿದ್ದು, ಲಸಿಕೆ ನೂರರಷ್ಟು ಜನ ಪಡೆಯಬೇಕಿದೆ ಆ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕು. ಆ ಮೂಲಕ ಕೊರೊನಾ ಹೆಮ್ಮಾರಿಯನ್ನು ದೇಶದಿಂದಲೇ ಓಡಿಸಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಸುಮಾರು 229 ಜನರು ಲಸಿಕೆ ಹಾಕಿಸಿಕೊಂಡರು. ಕಾರ್ಯಕ್ರಮ ಮುಂದುವರೆಸಲಾಗಿದ್ದು, ಮತ್ತೊಂದು ದಿನ ನಗರ ಪ್ರದೇಶದ ಬೇರಡೆ ಆಯೋಜಿಸಲಾಗುವದು ಎಂದು ಎಬಿವಿಪಿ ಮುಖಂಡ ಅರವಿಂದ ಉಪ್ಪಿನ್ ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕು ಆರೋಗ್ಯ ಅಧಿಕಾರಿ ಡಾ.ರಮೇಶ ಗುತ್ತೇದಾರ, ವೀರಶೈವ ಸಮಾಜ ಮುಖಂಡರಾದ ಶರಣು ಗದ್ದುಗೆ, ಡಾ.ಚಂದ್ರಶೇಖರ ಸುಬೇದಾರ, ಅಡಿವೆಪ್ಪ ಜಾಕಾ, ಗುಂಡಪ್ಪ ತುಂಬಗಿ, ಸಿದ್ದು ಆರಬೋಳ, ಮಹೇಶ ಆನೇಗುಂದಿ, ನೀಲಪ್ಪ ಚೌದ್ರಿ, ಬಸವರಾಜ ಹೇರುಂಡಿ, ರಾಜೂ ಆನೇಗುಂದಿ, ನಗರಸಭೆ ಸದಸ್ಯ ರಾಜೂ ಮಡ್ನಾಳ ಉಪಸ್ಥಿತರಿದ್ದರು. ಎಬಿವಿಪಿ ಮುಖಂಡರಾದ ಅರವಿಂದ ಉಪ್ಪಿನ್, ಅವಿನಾಶ ಗುತ್ತೇದಾರ ಇತರರು ಭಾಗವಹಿಸಿದ್ದರು.