ಟೀ ವ್ಯಾಪಾರಿ ಬಳಿ ಲಂಚ : ಸಿಬಿಐ ಬಲೆಗೆ ಬಿದ್ದ ಭ್ರಷ್ಟ ಅಧಿಕಾರಿ
ಭ್ರಷ್ಟ ಅಧಿಕಾರಿಗಳಿಗೆ ಸಿಂಹ ಸ್ವಪ್ನವಾದ ರಾಜಶೇಖರ್ ಮಲಾಲಿ
ಚಿತ್ರದುರ್ಗ : ರೈಲ್ವೆ ನಿಲ್ದಾಣದಲ್ಲಿ ಚಹಾಮಾರಾಟದ ಗುತ್ತಿಗೆ ಪಡೆದಿದ್ದವರ ಬಳಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ರೈಲ್ವೆ ಇಲಾಖೆಯ ಆರ್ ಪಿಎಫ್ ಅಧಿಕಾರಿ ಗುರುಸ್ವಾಮಿ ಸಿಬಿಐ ಅಧಿಕಾರಿಗಳ ಬಲೆಗೆ ಬಿದ್ದಿದ್ದಾನೆ. ಚಹಾ ಮಾರಾಟದ ಟೆಂಡರ್ ಪಡೆದಿದ್ದ ಶಿವಗಂಗಮ್ಮ, ಸಹೋದರ ಕೃಷ್ಣಪ್ಪ ಅವರು ಅಧಿಕಾರಿಯ ಕಿರುಕುಳ ತಾಳದೆ ಸಾಮಾಜಿಕ ಹೋರಾಟಗಾರ ರಾಜಶೇಖರ್ ಮಲಾಲಿ ಅವರ ಮೊರೆ ಹೋಗಿದ್ದಾರೆ. ಇಲ್ಲದ ನೆಪವೊಡ್ಡಿ ಗುರುಸ್ವಾಮಿ ನಮ್ಮನ್ನು ಬೆದರಿಸಿ ತಿಂಗಳಿಗೆ ಸುಮಾರು 40 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದು ಭ್ರಷ್ಟಾಚಾರಕ್ಕೆ ಬ್ರೇಕ್ ಹಾಕಿ ಎಂದು ಮನವಿ ಮಾಡಿದ್ದಾರೆ.
ರಾಜಶೇಖರ್ ಮಲಾಲಿ ಅವರ ಸೂಚನೆ ಮೇರೆಗೆ ಸಿಬಿಐಗೆ ದೂರು ಸಲ್ಲಿಸುವ ಮೂಲಕ ಭ್ರಷ್ಟ ಅಧಿಕಾರಿ ಗುರುಸ್ವಾಮಿಯನ್ನು ಬಲೆಗೆ ಕೆಡವಲಾಗಿದೆ. ಸಿಬಿಐ ಡಿವೈಎಸ್ಪಿ ರಾಜು ಅವರ ನೇತೃತ್ವದ ತಂಡ ಇಂದು ಕಾರ್ಯಾಚರಣೆ ನಡೆಸಿದ್ದು ಮುಂಗಡವಾಗಿ 8 ಸಾವಿರ ರೂಪಾಯಿ ಲಂಚ ಸ್ವೀಕರಿಸುವ ಸಂದರ್ಭದಲ್ಲಿ ರೆಡ್ ಹ್ಯಾಂಡಾಗಿ ಗುರುಸ್ವಾಮಿಯನ್ನು ಹಿಡಿದು ವಶಕ್ಕೆ ಪಡೆದಿದೆ ಎಂದು ತಿಳಿದು ಬಂದಿದೆ. ರಾಜಶೇಖರ ಮಲಾಲಿ ಸಾಮಾಜಿಕ ಜಾಲತಾಣಗಳ ಮೂಲಕ ಈ ವಿಚಾರವನ್ನು ಶೇರ್ ಮಾಡಿದ್ದಾರೆ.