ಎಂಸಿಸಿ ಪ್ರೀಮಿಯರ್ ಲೀಗ-2 ಕ್ರಿಕೆಟ್ಗೆ ದರ್ಶನಾಪುರ ಚಾಲನೆ
ಸ್ಪರ್ಧೆಯಲ್ಲಿ ಗೆಲುವು ಸೋಲು ಸಾಮಾನ್ಯ- ದರ್ಶನಾಪುರ
yadgiri, ಶಹಾಪುರಃ ಕ್ರೀಡಾಪಟುಗಳು ಸ್ಪರ್ಧೆಯಲ್ಲಿ ಕ್ರೀಡಾ ಮನೋಭಾವನೆಯಿಂದ ಭಾಗವಹಿಸಬೇಕು. ಸ್ಪರ್ಧೆಯಲ್ಲಿ ಗೆಲುವು ಸೋಲು ಸಾಮಾನ್ಯವಾದದು. ಇಲ್ಲಿ ಭಾಗವಹಿಸುವಿಕೆ ಬಹುಮುಖ್ಯವಾಗಿದೆ ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ತಿಳಿಸಿದರು.

ಮಾಜಿ ಮಂತ್ರಿ, ಧೀಮಂತ ರಾಜಕಾರಣಿ ದಿ.ಬಾಪುಗೌಡ ದರ್ಶನಾಪುರ ಅವರ 32 ನೇಯ ಪುಣ್ಯ ಸ್ಮರಣೆ ಅಂಗವಾಗಿ ಎಂಸಿಸಿ ಗ್ರೂಪ್ ಆಶ್ರಯದಲ್ಲಿ ನಗರದ ಕ್ರೀಡಾಂಗಣದಲ್ಲಿ ನಡೆದ ಪ್ರೀಮಿಯರ್ ಲೀಗ್-2 ಕ್ರಿಕೆಟ್ ಟೂರ್ನಾಮೆಂಟ್ ಬ್ಯಾಟ್ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಕ್ರಿಕೆಟ್ ಕ್ಷೇತ್ರದಲ್ಲಿ ಭಾರತ ತಂಡ ಉತ್ತಮ ಸಾಧನೆ ತೋರುತ್ತಿದ್ದು, ಹಲವಾರು ಕ್ರೀಡಾಪಟುಗಳು ಭಾರತದ ಹೆಸರು ತಂದಿದ್ದಾರೆ. ಪ್ರಸ್ತುತ ಕ್ರಿಕೆಟ್ ಜಗತ್ತಿನಾದ್ಯಂತ ಪ್ರಸಿದ್ಧಿ ಹೊಂದಿದೆ. ಯಾವುದೇ ಕ್ರೀಡೆಯಲ್ಲಿ ಭಾಗವಹಿಸುವದರಿಂದ ಮಾನಸಿಕವಾಗಿ ದೈಹಿಕವಾಗಿ ಸದೃಢತೆ ಹೊಂದಬಹುದು.
ಕ್ರೀಡೆಯಲ್ಲಿ ಗೆಲುವು ಸಾಧಿಸಿದ್ದೇವೆ ಎಂಬ ಹಮ್ಮು ಬೇಡ ಸೋತಿದ್ದೇವೆ ಎಂಬ ಅಳಕು ಬೇಡ ಸೋಲು ಗೆಲುವು ಸಾಮಾನ್ಯ. ಓರ್ವ ಕ್ರೀಡಾಳು ಇವೆರಡನ್ನು ಸಮಾನಾಗಿ ಸ್ವೀಕರಿಸಿ ತನ್ನ ಪ್ರತಿಭೆ ತೋರುವದಲ್ಲಿ ಮಗ್ನನಾಗಿರುತ್ತಾನೆ ಎಂದರು.
ಆಯೋಜಕರು ಪ್ರಾಮಾಣಿಕತೆ ರೂಢಿಸಿಕೊಂಡು ಶಾಂತತೆ ಕಾಪಾಡಿಕೊಂಡು ಪ್ರತಿಭೆ ಮೆರೆದ ಕ್ರೀಡಾಳುಗಳನ್ನು ಎಲ್ಲರೂ ಗೌರವಿಸುವದನ್ನು ಕಲಿಯಬೇಕು ಎಂದು ಕಿವಿ ಮಾತು ಹೇಳಿದರು.
ದಿ.ಬಾಪುಗೌಡ ದರ್ಶನಾಪುರ ಅವರ ಭಾವಚಿತ್ರಕ್ಕೆ ಪ್ರಥಮದಲ್ಲಿ ಪೂಜೆ ಸಲ್ಲಿಸಿ, ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಲಾಯಿತು. ಈ ಸಂದರ್ಭದಲ್ಲಿ ಮುಖಂಡರಾದ ಶಿವಮಹಾಂತ ಚಂದಾಪುರ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮರಿಗೌಡ ಹುಲಕಲ್, ಶರಣಪ್ಪ ಸಲಾದಪುರ, ಕರವೇ ಉತ್ತರ ಕರ್ನಾಟಕ ಅಧ್ಯಕ್ಷ ಶರಣು ಗದ್ದುಗೆ, ನಗರಸಭೆ ಮಾಜಿ ಅಧ್ಯಕ್ಷ ರಾಯಪ್ಪ ಸಾಲಿಮನಿ, ಸಯ್ಯದ್ ಮುಸ್ತಫಾ ದರ್ಬಾನ್, ಬಸವರಾಜಪ್ಪಗೌಡ ತಂಗಡಿಗಿ, ಚನ್ನಾರಡ್ಡಿ ತಂಗಡಗಿ, ಇಬ್ರಾಹಿಂಸಾಬ್ ಶಿರವಾಳ. ಸಿದ್ದು ಆರಬೋಳ, ಶಿವಕುಮಾರ ತಳವಾರ ಇದ್ದರು. ಇದೇ ಸಂದರ್ಭದಲ್ಲಿ ಎಂಸಿಸಿ ತಂಡದ ನಾಯಕ ಮೌನೇಶ ನಾಟೇಕಾರ ಇವರಿಗೆ ದರ್ಶನಾಪುರ ಸನ್ಮಾನಿಸಿ ಗೌರವಿಸಿದರು.
ಟೂರ್ನಾಮೆಂಟ್ ಆಯೋಜಕರು, ಕ್ರೀಡಾಳುಗಳು ಮುಖ್ಯವಾಗಿ ಕೊರೊನಾ ನಿಯಮಗಳನ್ನು ಪಾಲಿಸಬೇಕು. ಅಕ್ಕಪಕ್ಕದ ದೇಶಗಳಲ್ಲಿ ಕೊರೊನಾ ಹಾವಳಿ ಮತ್ತೇ ಜಾಸ್ತಿಯಾದ ಪರಿಣಾಮ ಮತ್ತೊಮ್ಮೆ ಲಾಕ್ ಡೌನ್ಗೆ ಮೊರೆ ಹೋಗಿದ್ದಾರೆ. ಹೀಗಾಗಿ ಎಲ್ಲರೂ ಮಾಸ್ಕ್ ಧರಿಸಬೇಕು. ಅಂತರ ಕಾಪಾಡಬೇಕು. ಸ್ಯಾನಿಟೈಸರ್ ಬಳಸಬೇಕು. ಇಲ್ಲ ಆಗಾಗ ಸಾಬೂನಿನಿಂದ ಕೈ ತೊಳೆದುಕೊಳ್ಳಬೇಕು. ಆಯೋಜಕರು ನಿಯಮಾವಳಿಯನ್ನು ಕಡ್ಡಾಯವಾಗಿ ಬಳಸಬೇಕು.
–ಶರಣಬಸಪ್ಪಗೌಡ ದರ್ಶನಾಪುರ. ಶಾಸಕರು. ಶಹಾಪುರ.