ಪ್ರಮುಖ ಸುದ್ದಿ
ತೀರ್ಥ ಪ್ರಸಾದ ದೆಹಲಿ ದೊರೆಯಿಂದಲೇ ಬರಬೇಕು!
ಬೆಂಗಳೂರು: ಸಚಿವ ಸ್ಥಾನದ ಚೆಂಡು ಹೈಕಮಾಂಡ್ ಅಂಗಳಕ್ಕೆ ಎಸೆದು ಮುಖ್ಯಮಂತ್ರಿ ನಿರಾಳರಾಗಿರಲು ನಿರ್ಧರಿಸಿದ್ದಾರೆ. ಪಕ್ಷದಲ್ಲಿ ಅಸಮಾಧಾನದ ಹೊಗೆ ಭುಗಿಲೇಳದಂತೆ ಎಚ್ಚರಿಕೆಯ ಹೆಜ್ಜೆ ಇರಿಸಿದ್ದಾರೆ. ಬಿಜೆಪಿಯ ಪ್ರಭಾವಿ ಶಾಸಕರು ಮಂತ್ರಿಗಿರಿಗಾಗಿ ಈಗಾಗಲೇ ಲಾಬಿ ಶುರು ಮಾಡಿದ್ದಾರೆ. ಆದರೆ, ಬಿಎಸ್ ವೈ ಮಾತ್ರ ಯಾವುದೇ ಭರವಸೆ ನೀಡದೆ ಹೈಕಮಾಂಡ್ ಕಡೆ ಬೆರಳು ತೋರಿಸಿದ್ದಾರೆ ಎನ್ನಲಾಗುತ್ತಿದೆ.
2008 ರಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಆಡಳಿತ ಚುಕ್ಕಾಣಿ ಹಿಡಿದಾಗಲೂ ಮಂತ್ರಿಗಿರಿಗಾಗಿ ಭಿನ್ನಮತ ಸ್ಪೋಟ ಆಗಿತ್ತು. ಇದೀಗ ಪಕ್ಷದ ಸಚಿವಾಕಾಂಕ್ಷಿಗಳ ಜತೆಗೆ ಕಾಂಗ್ರೆಸ್, ಜೆಡಿಎಸ್ ನಿಂದ ಹೊರಬಿದ್ದಿರುವ ಅನರ್ಹ ಶಾಸಕರು ಸಹ ಯಡಿಯೂರಪ್ಪ ಮೇಲೆ ಒತ್ತಡ ಹೇರುತ್ತಿದ್ದಾರೆ. ಆದರೆ, ಬಿ.ಎಸ್.ವೈ ಮಾತ್ರ ನಾನು ಕೇವಲ ಉತ್ಸವ ಮೂರ್ತಿ, ತೀರ್ಥ ಪ್ರಸಾದ ಕೊಡುವ ದೊರೆಗಳು ದೆಹಲಿಯಲ್ಲಿದ್ದಾರೆ ಎಂಬಂತೆ ಹೈಕಮಾಂಡ್ ನತ್ತ ಬೆರಳು ತೋರುತ್ತಿದ್ದಾರೆ ಎಂದು ಬಿಜೆಪಿ ಮೂಲಗಳಿಂದ ತಿಳಿದು ಬಂದಿದೆ.