‘ಕೇಸರಿ ಧ್ವಜದ ಹುಡುಗರಿಗೆ ಉದ್ಯೋಗ ಸಿಕ್ಕರೆ ಗಲಾಟೆಗಳಾಗಲ್ಲ’ – ದೇವನೂರು ಮಹಾದೇವ
ಚಿತ್ರದುರ್ಗ: ಕಟುಕನೂ ಕತ್ತರಿಸುತ್ತಾನೆ, ಶಸ್ತ್ರ ಚಿಕಿತ್ಸಕನೂ ಕತ್ತರಿಸುತ್ತಾನೆ. ಆದರೆ, ಕಟಕು ಜೀವ ತೆಗೆಯಲು ಕತ್ತರಿಸುತ್ತಾನೆ, ಶಸ್ತ್ರ ಚಿಕಿತ್ಸಕ ಜೀವ ಉಳಿಸಲು ಕತ್ತರಿಸುತ್ತಾನೆ. ಇಂದಿನ ಕಾಲಘಟ್ಟದ ಬಹುತೇಕ ರಾಜಕಾರಣಿಗಳು ಕಟುಕರಾಗಿದ್ದಾರೆ. ಹೀಗಾಗಿ, ಜೀವ ಉಳಿಸುವ ಶಸ್ತ್ರ ಚಿಕಿತ್ಸಕ ರಾಜಕಾರಣದ ಅಗತ್ಯವಿದೆ ಎಂದು ಸ್ವರಾಜ ಇಂಡಿಯಾ ಪಕ್ಷದ ರಾಷ್ಟ್ರೀಯ ಮಂಡಳಿ ಸದಸ್ಯರೂ ಆಗಿರುವ ಸಾಹಿತಿ ದೇವನೂರು ಮಹಾದೇವ ಅಭಿಪ್ರಾಯಪಟ್ಟಿದ್ದಾರೆ.
ನಗರದ ಕ್ರೀಡಾ ಭವನದಲ್ಲಿ ಸ್ವರಾಜ್ ಇಂಡಿಯಾ ಪಕ್ಷದ ಜಿಲ್ಲಾ ಘಟಕದ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅವರು ಆಶಯ ಭಾಷಣ ಮಾಡಿದರು. ದಾವಣಗೆರೆ ನಗರದಿಂದ ಚಿತ್ರದುರ್ಗಕ್ಕೆ ಬರುವ ಸಂದರ್ಭದಲ್ಲಿ ಕೆಲ ಯುವಕರ ಗುಂಪು ಬೈಕಿನಲ್ಲಿ ಕೇಸರಿ ಧ್ವಜ ಹಿಡಿದು ಹೋಗುವುದನ್ನು ನೋಡಿದೆ. ಅವರು ಭಜರಂಗದಳ ಅಥವಾ ಬಿಜೆಪಿ ಸಭೆಗೆ ಹೋಗುತ್ತಿರಬಹುದು. ಯಾವುದಾದರೂ ಸಭೆಗೆ ಹೋಗಲಿ ನಮ್ಮ ಅಭ್ಯಂತರವಿಲ್ಲ. ಆದರೆ, ಸಭೆಯಲ್ಲಿ ಮೊದಲು ಯುವಕರಿಗೆ ಉದ್ಯೋಗ ನೀಡಿ ಎಂದು ಕೇಳಲಿ. ಅಂತ ಯುವಕರು ಉದ್ಯೋಗ ಹಿಡಿದರೆ ಗದ್ದಲ ಗಲಾಟೆಗಳು ಆಗೋದಿಲ್ಲ ಎಂದರು.
ಯುವಕರಿಗೆ ಉದ್ಯೋಗ ಕೊಡಿಸುವ ಇಚ್ಛಾಶಕ್ತಿ ನಾಯಕರಿಗೆ ಇಲ್ಲವಾಗಿದೆ. ಯುವಕರು ಉದ್ಯೋಗ ಹಿಡಿದರೆ ಧ್ವಜ ಹಿಡಿದು ಸಭೆಗೆ ಬರುವವರು ಯಾರೆಂಬ ಚಿಂತನೆ ರಾಜಕೀಯ ನಾಯಕರಲ್ಲಿ ಅಡಗಿದೆ. ಅಭಿವೃದ್ಧಿಯ ಅಳತೆಗೋಲು ಅಂದರೆ ಬಕಾಸುರ ಬಂಡವಾಳಶಾಹಿಗಳಾದ ಅಂಬಾನಿ, ಅದಾನಿ ಅವರಲ್ಲ. ಮೊದಲು ಯವಕರ ಕೈಗೆ ಉದ್ಯೋಗ ಸಿಗುವಂತಾಗಬೇಕು ಎಂದು ದೇವನೂರು ಮಹಾದೇವ ಹೇಳಿದರು.