ಅಂಕಣ

ಚಿಂತನಾಶೀಲ ಶಿಕ್ಷಕ, ಸಾಹಿತಿ ಸಾಹೇಬಗೌಡ ಬಿರಾದಾರ

ಚಿಂತನಾಶೀಲ ಶಿಕ್ಷಕ, ಸಾಹಿತಿ ಸಾಹೇಬಗೌಡ ಬಿರಾದಾರ

ರಾಘವೇಂದ್ರ ಹಾರಣಗೇರಾ 

ಕಲಿಸುವುದು ಜಗತ್ತಿನ ಅತ್ಯಂತ ಉದಾತ್ತವಾದ, ಉನ್ನತವಾದ ಕಸುಬು. ಕಲಿಸುವುದು ಎಂದರೆ ಕಲಿಯುವುದು ಎಂದೇ ಅರ್ಥ. ಕಲಿಯುವುದರ ಹಾಗೂ ಕಲಿಸುವುದರ ಹಿಂದಿರುವ ಚೆಲುವನ್ನು ಕಂಡುಕೊಂಡರೆ ಅದರಿಂದ ಪಡೆಯುವ ಆನಂದ ಅವರ್ಣನಿಯವಾಗಿರುತ್ತದೆ.

“ಜಿಡ್ಡು ಕೃಷ್ಣಮೂರ್ತಿ ಅವರ ಈ ಚಿಂತನೆಯ ಸಾಲುಗಳು ಶಿಕ್ಷಕ ಕುಲದವರು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾದವುಗಳಾಗಿವೆ.  ಇಂತಹ ಕಲಿಸುವ ಮತ್ತು ಕಲಿಯುವ ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಸಾಹೇಬಗೌಡ ಬಿರಾದಾರ ಅವರು ಸಗರನಾಡಿನ ಚಿಂತನಾಶೀಲ ಶಿಕ್ಷಕ, ಸೂಕ್ಷ್ಮ ಸಂವೇದನೆಯ ಸಾಹಿತಿ.

ಸುರಪುರ ತಾಲೂಕಿನ ಹೆಗ್ಗನದೊಡ್ಡಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಸಹ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಅವರು ಸೃಜನಶೀಲ ಲೇಖಕ, ಉತ್ತಮ ವಾಗ್ಮಿ, ಒಳ್ಳೆಯ ನಿರೂಪಕ, ಪ್ರವಚನಕಾರರಾಗಿ ನಾಡಿನ ಶೈಕ್ಷಣಿಕ, ಸಾಹಿತ್ಯ, ಅಧ್ಯಾತ್ಮಿಕ, ಸಾಂಸ್ಕೃತಿಕ ಪರಿಸರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಎಲ್ಲರ ಮೆಚ್ಚುಗೆಯನ್ನು ಪಡೆದಿದ್ದಾರೆ.

ಬಹುಮುಖ ಪ್ರತಿಭೆಯ, ಸರಳ, ಸಜ್ಜನಿಕೆಯ ವಿನೀತಭಾವದ ಸ್ವಭಾವದ ಸಾಹೇಬಗೌಡ ಬಿರಾದಾರ ಅವರು ಇತಿಹಾಸ ಮತ್ತು ರಾಜ್ಯಶಾಸ್ತ್ರ ವಿಷಯದಲ್ಲಿ ಮತ್ತು ಎಮ್.ಎಡ್ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಯಲ್ಲೇರಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಐದು ವರ್ಷ ಸಹ ಶಿಕ್ಷಕರಾಗಿ, ಎರಡು ವರ್ಷ ಪ್ರಭಾರಿ ಮುಖ್ಯ ಗುರುಗಳಾಗಿ ಸೇವೆ ಸಲ್ಲಿಸಿದ ಅವರು ಶಿಕ್ಷಣ ಇಲಾಖೆಯಲ್ಲಿ ಬಿ.ಆರ್.ಸಿ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ.

ಶಿಕ್ಷಕ ವೃತ್ತಿಯಲ್ಲಿನ ವೃತ್ತಿ ಬದ್ದತೆಗೆ , ಪ್ರಮಾಣಿಕತೆಗೆ ಶಿಕ್ಷಣ ಇಲಾಖೆ ನೀಡಿದ ಹಲವು ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದವರು. ಸೃಜನಶೀಲ ಬರಹಗಾರ, ನಾಟಕಕಾರ ನಿರ್ದೇಶಕ, ಕ್ರಿಯಾಶೀಲ ಶಿಕ್ಷಕ, ಚಿಂತಕ, ಸಂಪನ್ಮೂಲ ವ್ಯಕ್ತಿ ಇವೆಲ್ಲವೂಗಳ ಮೆರಗು ಸಾಹೇಬಗೌಡ ಬಿರಾದಾರ ಅವರಲ್ಲಿ ಕಂಡುಬರುತ್ತವೆ.

ಶೈಕ್ಷಣಿಕ ವಲಯದಲ್ಲಿ ನಡೆಯುವ ಎಸ್.ಎಲ್. ಡಿ.ಪಿ ತರಬೇತಿ ( ಶಾಲಾ ನಾಯಕತ್ವ ಅಭಿವೃದ್ದಿ ಕಾರ್ಯಕ್ರಮ) ಎಚ್. ಕೆ.ಅರ್.ಡಿ.ಬಿ ವತಿಯಿಂದ ಟಿ.ಇ.ಟಿ ತರಬೇತಿ, ನಲಿಕಲಿ ತರಬೇತಿ, ನಾಟಿಕೋತ್ಸವ ತರಬೇತಿ, ಟಿ.ಎ.ಎಲ್.ಪಿ ತರಬೇತಿ, ಎನ, ಎಮ್, ಎಮ್ ಎಸ್ ಮತ್ತು ಎನ್.ಟಿ.ಎಸ್. ಇ ಉಚಿತ ತರಬೇತಿ, ವ್ಯಕ್ತಿತ್ವ ವಿಕಸನ ತರಬೇತಿ ಮುಂತಾದ ಅನೇಕ ತರಬೇತಿ ಕಾರ್ಯಕ್ರಮಗಳಲ್ಲಿ ತರಬೇತಿ ಮತ್ತು ಉಪನ್ಯಾಸ ನೀಡಿದ್ದಾರೆ.

ಪ್ರತಿಭಾವಂತ ಸಂಪನ್ಮೂಲ ಶಿಕ್ಷಕರಾದ ಸಾಹೇಬಗೌಡ ಬಿರಾದಾರ ಅವರು ತರಗತಿಯಲ್ಲಿ ಮಕ್ಕಳ ಮಟ್ಟಕ್ಕಿಳಿದು ಪಾಠ ಮಾಡುತ್ತ ಮಕ್ಕಳ ಓದನ್ನು ಮತ್ತು ಜ್ಞಾನವನ್ನು ವಿಸ್ತರಿಸುತ್ತ ಅವರಲ್ಲಿರುವ ವಿವಿಧ ಪ್ರತಿಭೆಗಳನ್ನು ಗುರುತಿಸಿ ಬೆಳೆಸುವ ಕಾರ್ಯದಲ್ಲಿ ತಮ್ಮನ್ನು ತಾವು ಕ್ರಿಯಾಶೀಲತೆಯಿಂದ ತೊಡಗಿಸಿಕೊಂಡಿದ್ದಾರೆ.

ಇವರಿಂದ ಸ್ಪೂರ್ತಿ ಪಡೆದ ಅನೇಕ ಪ್ರತಿಭಾನ್ವಿತ ವಿದ್ಯಾರ್ಥಿಗಳು ಉಜ್ವಲ ಭವಿಷ್ಯವನ್ನು ಕಂಡುಕೊಂಡಿದ್ದಾರೆ. ಮಾದರಿ ಶಿಕ್ಷಕರಾಗಿ ವಿದ್ಯಾರ್ಥಿಗಳಿಗೆ ಸ್ಪೂರ್ತಿಯ ಸೆಲೆಯಾಗಿದ್ದಾರೆ. ಅಕ್ಷರ ವಿದ್ಯೆ ಕಲಿಸುವುದರೊಂದಿಗೆ ವಿದ್ಯಾರ್ಥಿಗಳಿಗೆ ಉತ್ತಮ ಸಂಸ್ಕಾರವನ್ನು ನೀಡುತ್ತಾ ಬೆಳೆಸುತ್ತಿದ್ದಾರೆ.

ವೃತ್ತಿಯಲ್ಲಿ ಶಿಕ್ಷಕ ಪ್ರವೃತ್ತಿಯಲ್ಲಿ ಸಾಹಿತಿ, ಕವಿ, ಲೇಖಕರಾಗಿರುವ ಸಾಹೇಬಗೌಡ ಬಿರಾದಾರ ಅವರು ಸಮಕಾಲೀನ ಸಾಹಿತ್ಯ ಮತ್ತು ಸಾಮಾಜಿಕ ಬದುಕಿನಲ್ಲಿ ಸದ್ದುಗದ್ದಲವಿಲ್ಲದೆ ಹಲವಾರು ರೀತಿಯ ಬರಹ, ಕೆಲಸ – ಕಾರ್ಯಗಳಲ್ಲಿ ನಿರತರಾಗಿದ್ದಾರೆ. ” ಅಂತರಂಗದ ಕೂಗು” ಕವನ ಸಂಕಲನ, ‘ ಗಿರಿಸೊಬಗು’ ಸಂಪಾದನೆ ಕೃತಿ, ಎಸ್.ಎಸ್. ಎಲ್.ಸಿ ಸರಳ ಸೂತ್ರ ಸಮಾಜ ವಿಜ್ಞಾನ, NTSE/NNMs ಪರೀಕ್ಷೆ ಕೈಪಿಡಿ ಮುಂತಾದ ಕೃತಿಗಳನ್ನು ರಚಿಸಿದ್ದಾರೆ.

ಹೊಸ ಬೆಳಕು (ವಿಚಾರ ಲಹರಿ), ಶಿಶು ಗೀತೆ, ಒಲವು (ಮಧುರ ಗೀತೆಗಳು), ಜೇನಹನಿ (ಚುಟುವಟಿಕೆಗಳು), ಕಾಯ-ಕಾಯೋ (ಹಡೆದಪ್ಪನ ಹಾಡುಗಳ ಹಾದಿ) ಮುಂತಾದ 6 ಕೃತಿಗಳು ಅಚ್ಚಿನಲ್ಲಿವೆ. ನನ್ನ ಬರಹ, ಬದುಕು ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ನನ್ನ ತಂದೆ, ನಿವೃತ್ತ ಶಿಕ್ಷಕ, ಸಾವಿರ ಹಾಡುಗಳ ತತ್ವಪದಕಾರ, 45 ಕ್ಕೂ ಹೆಚ್ಚು ಪುಸ್ತಕಗಳನ್ನು ರಚಿಸಿದ ಶರಣ ಶ್ರೀ ಯಮೂನೂರೇಶ ಬಿರಾದಾರ ಅವರ ಪ್ರಭಾವವೇ ಕಾರಣ.

ಅವರ ಬದಕು ಮತ್ತು ವ್ಯಕ್ತಿತ್ವ ನನಗೆ ತುಂಬಾ ಮಾದರಿ ಮತ್ತು ಅನುಕರಣೀಯ ಎಂದು ಹೆಮ್ಮೆಯಿಂದ ನುಡಿಯುತ್ತಾರೆ. ಸಾಹೇಬಗೌಡ ಬಿರಾದಾರ ಅವರ ಶೈಕ್ಷಣಿಕ, ಸಾಹಿತ್ಯಕ ಹಾಗೂ ಸಾಮಾಜಿಕ ಸೇವೆಗೆ ರಾಜ್ಯ ಸದ್ಭಾವನಾ ಪ್ರಶಸ್ತಿ, ಯಾದಗಿರಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಮಂದಾರ ಸಿರಿ ಆದರ್ಶ ಶಿಕ್ಷಕ ಪ್ರಶಸ್ತಿ, ಚನ್ನಬಸವ ಶ್ರೀ ರಾಜ್ಯ ಪ್ರಶಸ್ತಿ , ವಿಕಾಸ ವೈಭವ ವಿಶೇಷ ಸನ್ಮಾನ ಮುಂತಾದ ಅನೇಕ ಪ್ರಶಸ್ತಿ, ಸನ್ಮಾನ, ಗೌರವಗಳು ಸಂದಿವೆ.

ಒಳ್ಳೆಯ ಕನಸುಗಾರ, ಅಪೂರ್ವ ಸಾಂಸ್ಕೃತಿಕ ಪ್ರಜ್ಞೆಯ ಸಾಹಿತಿ, ಶಿಕ್ಷಕರಾಗಿರುವ ಸಾಹೇಬಗೌಡ ಬಿರಾದಾರ ಅವರು ಯಾವುದೇ ಬಿಗುಮಾನಗಳಿಲ್ಲದೆ ಎಲ್ಲರೊಂದಿಗೆ ಬೆರೆಯುವ ಸಹೃದಯಿ. ಉತ್ತಮ ನಡೆ, ಚಂದದ ಮಾತು, ದಿಟ್ಟ ನಿಲುವು, ಮುಕ್ತ ಮನಸ್ಸಿನ ವಿವೇಕವಂತರು‌. ನಿರರ್ಗಳ ಮಾತು, ಸ್ಪಷ್ಟವಾದ ನುಡಿ, ಸಾಹಿತ್ಯದ ಕಂಪು, ಮಿಳಿತವಾಗಿ ಬಳಸುವ ನುಡಿಗಟ್ಟುಗಳು, ಪೋಣಿಸುವ ಪ್ರಾಸಗಳು ಮುಂತಾದವು ಅವರನ್ನು ಉತ್ತಮ ವಾಗ್ಮಿಯಾಗಿ, ಒಳ್ಳೆಯ ನಿರೂಪಕನಾಗಿ ಮಾಡಿವೆ. ನಾಡಿನಾದ್ಯಂತ ನಡೆಯುವ ನೂರಾರು ಶಿಕ್ಷಣ, ಸಾಹಿತ್ಯ, ಆಧ್ಯಾತ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಉಪನ್ಯಾಸ, ತರಬೇತಿ, ಪ್ರವಚನ, ನಿರೂಪಣೆ ನೀಡಿ ಬಹಳಷ್ಟು ಮೆಚ್ಚುಗೆಯನ್ನು ಪಡೆದುಕೊಂಡಿದ್ದಾರೆ.

ಉತ್ತಮ ಸಂಘನಾತ್ಮಕ ಮನೋಭಾವದವರಾದ ಸಾಹೇಬಗೌಡರು ಯಾದಗಿರಿ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿ, ಬಾನಾಮತಿ ಮತ್ತು ಮೂಢನಂಬಿಕೆ ನಿರ್ಮೂಲನ ಜಿಲ್ಲಾ ಸಂಚಾಲಕರಾಗಿ, ಯಾದಗಿರಿ ಜಿಲ್ಲಾ ಶಿಕ್ಷಕರ ಪ್ತತಿಭಾ ಪರಿಷತ್ತಿನ ಅಧ್ಯಕ್ಷರಾಗಿ, ಪ್ರೌಢಶಾಲಾ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿಯಾಗಿ ಸೇವೆಸಲ್ಲಿಸಿದ್ದಾರೆ. – ನಮ್ಮ ಸುತ್ತಣ ಬಾಳಿನಲ್ಲಿ ಹಲವು ವೈಷಮ್ಯಗಳನ್ನು ಗಮನಿಸುವುದಕ್ಕಿಂತ ಸಮನ್ವಯದ ಹಾದಿಯಲ್ಲಿ ಮಾನವೀಯ ಬದುಕು ಸಾಧಿಸಬೇಕು ಎಂಬ ಚಿಂತನೆಯುಳ್ಳ ಶಿಕ್ಷಕ, ಸಾಹಿತಿಯಾಗಿರುವ ಸಾಹೇಬಗೌಡ ಬಿರಾದಾರ ಅವರು ಭೋದನೆ, ಚಿಂತನೆ, ಸಾಹಿತ್ಯ, ಸಂಸ್ಕೃತಿಗಳ ಸಂಗಮದ ವ್ಯಕ್ತಿತ್ವವುಳ್ಳವರಾಗಿದ್ದಾರೆ.

ಸ್ವಸ್ಥ ಸಮಾಜದ ಕನಸು ಕಾಣುತ್ತ ಹಲವಾರು ಸೃಜನಾತ್ಮಕ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಶಿಕ್ಷಣ, ಸಾಹಿತ್ಯ ಚಿಂತಕ, ಮಾದರಿ ಅದ್ಯಾಪಕ ಸಾಹೇಬಗೌಡ ಬಿರಾದಾರ ಅವರು ನಾಡಿನ ಶಿಕ್ಷಣ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ವಿಶಿಷ್ಠವಾದ ಕೊಡುಗೆ ನೀಡಲಿ. ಅವರ ಸಾಧನೆ ನಿರಂತರ ಬೆಳಗುತ್ತಿರಲಿ ಎಂದು ಆಶಿಸೋಣ.

ರಾಘವೇಂದ್ರ ಹಾರಣಗೇರಾ ಸಮಾಜಶಾಸ್ತ್ರ ಉಪನ್ಯಾಸಕರು ಶಹಾಪುರ. ಮೊ.9901559873

Related Articles

Leave a Reply

Your email address will not be published. Required fields are marked *

Back to top button