
ದಿನಕ್ಕೊಂದು ಕಥೆ
ಸತ್ಕರ್ಮದ ಫಲ ಅದ್ಭುತ ಸಂದೇಶ ಓದಿ
ಒಂದು ಊರಿನಲ್ಲಿ ಒಬ್ಬ ಒಳ್ಳೆಯ ಮಹಿಳೆ ಇದ್ದಳು. ಆಕೆ ಪ್ರತಿದಿನ ಒಂದು ವ್ರತ ಮಾಡುತ್ತಿದ್ದಳು. ಅವಳ ವ್ರತವೆಂದರೆ, ಪ್ರತಿದಿನ ರೊಟ್ಟಿ ಮಾಡಿ ತನ್ನ ಮನೆಯ ಕಿಟಕಿಯ ಬಳಿ ಇಡುವುದು. ಯಾರಾದರೂ ಅತಿಥಿಗಳು ಬಂದು ಆ ರೊಟ್ಟಿಯನ್ನು ತಿಂದು ತನ್ನ ಮನೆತನಕ್ಕೆ ಶುಭವನ್ನು ಬಯಸಲಿ ಎಂಬುದು ಅವಳ ಆಶಯವಾಗಿತ್ತು.

ಅವಳ ಸಾತ್ವಿಕ ಬಯಕೆಯಂತೆ, ಆ ರೊಟ್ಟಿಯನ್ನು ಪ್ರತಿದಿನ ಒಬ್ಬ ಸಾಧು ತೆಗೆದುಕೊಂಡು ಹೋಗುತ್ತಿದ್ದ. ಹೋಗುವಾಗ ಅವರು ಯಾವಾಗಲೂ ಒಂದೇ ಮಾತನ್ನು ಹೇಳುತ್ತಿದ್ದರು: “ನೀನು ಒಳ್ಳೆಯದನ್ನು ಮಾಡಿದರೆ ನಿನಗೆ ಒಳ್ಳೆಯದಾಗುತ್ತದೆ, ನೀನು ಕೆಟ್ಟದ್ದನ್ನು ಮಾಡಿದರೆ ನಿನಗೆ ಕೆಟ್ಟದ್ದಾಗುತ್ತದೆ.”
ಆ ಮಹಿಳೆಯ ಒಬ್ಬನೇ ಮಗ ಮನೆ ಬಿಟ್ಟು ಓಡಿ ಹೋಗಿದ್ದ. ಅವನು ಮರಳಿ ಬರಲೆಂದು ಆಕೆ ಪ್ರತಿದಿನ ದುಃಖಿಸುತ್ತಾ, ದೇವರಲ್ಲಿ ಪ್ರಾರ್ಥಿಸುತ್ತಿದ್ದಳು. ಆದರೆ ರೊಟ್ಟಿ ಮಾಡಿ ಇಡುವ ತನ್ನ ವ್ರತವನ್ನು ಮಾತ್ರ ಯಾವ ಕಾರಣಕ್ಕೂ ಬಿಡಲಿಲ್ಲ. ಪ್ರತಿದಿನ ಅದೇ ಸಾಧು ಬಂದು, ಅದೇ ಮಾತು ಹೇಳಿ ರೊಟ್ಟಿಯನ್ನು ತೆಗೆದುಕೊಂಡು ಹೋಗುತ್ತಿದ್ದ.
ಸಾಧುವಿನ ಮಾತು ಮತ್ತು ಅವನ ವರ್ತನೆ ಆ ತಾಯಿಗೆ ಇಷ್ಟವಾಗಲಿಲ್ಲ. “ನಾನು ಪ್ರತಿದಿನ ಈ ಸಾಧುವಿಗೆ ರೊಟ್ಟಿ ಕೊಟ್ಟರೂ ನನ್ನ ಮಗ ಮರಳಿ ಬರಲಿಲ್ಲ. ಈ ಸಾಧುವೇ ಏನಾದರೂ ನನ್ನ ಮಗನಿಗೆ ಮಂತ್ರವಾದಿ ಮಾಡಿರಬಹುದೇ?” ಎಂಬ ನೂರಾರು ಆಲೋಚನೆಗಳು ಮಗನನ್ನು ಕಳೆದುಕೊಂಡ ಆಕೆಯ ಮನಸ್ಸಿನಲ್ಲಿ ಮೂಡಿದವು. ಒಂದು ದಿನ ಆಕೆ ಆ ರೊಟ್ಟಿಯಲ್ಲಿ ವಿಷ ಬೆರೆಸಿ ಕಿಟಕಿಯ ಬಳಿ ಇಟ್ಟಳು.
ಸ್ವಲ್ಪ ಸಮಯದ ನಂತರ, ಒಂದು ವರ್ಷದಿಂದ ಅತಿ ನಿಸ್ವಾರ್ಥ ಭಾವದಿಂದ ಸೇವೆ ಮಾಡಿದ ಆಕೆಯ ಸಕಾರಾತ್ಮಕ ಮನಸ್ಸು ಮತ್ತು ಹೃದಯ ಎಚ್ಚರಿಸಿತು: “ನೀನು ಮಾಡಿದ್ದು ತಪ್ಪು.” ತಕ್ಷಣವೇ ಆಕೆ ಆ ವಿಷದ ರೊಟ್ಟಿಯನ್ನು ತಂದು ಒಲೆಯಲ್ಲಿ ಸುಟ್ಟುಹಾಕಿ, ಹೊಸದಾದ ಒಳ್ಳೆಯ ರೊಟ್ಟಿಯನ್ನು ಮಾಡಿ ಕಿಟಕಿಯ ಬಳಿ ಇಟ್ಟಳು.
ಎಂದಿನಂತೆ ಸಾಧು ಬಂದು ರೊಟ್ಟಿಯನ್ನು ತೆಗೆದುಕೊಂಡು, ಅದೇ ಮಾತನ್ನು ಹೇಳಿ ಹೋದನು: “ನೀನು ಒಳ್ಳೆಯದನ್ನು ಮಾಡಿದರೆ ನಿನಗೆ ಒಳ್ಳೆಯದಾಗುತ್ತದೆ, ನೀನು ಕೆಟ್ಟದ್ದನ್ನು ಮಾಡಿದರೆ ನಿನಗೆ ಕೆಟ್ಟದ್ದಾಗುತ್ತದೆ.”
ಅವಳು ತನ್ನ ಮಗನನ್ನು ನೆನೆದುಕೊಂಡು ಅತೀವ ದುಃಖದಿಂದ ಜೋರಾಗಿ ಅಳುತ್ತಾ ಕುಳಿತಿದ್ದಳು. ಆಗ ಮನೆಯ ಬಾಗಿಲು ಬಡಿಯುವ ಶಬ್ದ ಕೇಳಿಸಿತು. ಬಾಗಿಲು ತೆರೆದು ನೋಡಿದಾಗ ಆಶ್ಚರ್ಯ! ಕಳೆದು ಹೋದ ತನ್ನ ಮಗ ಪ್ರತ್ಯಕ್ಷನಾಗಿದ್ದ.
ಒಂದು ಕಡೆ ಆನಂದ, ಇನ್ನೊಂದು ಕಡೆ ದುಃಖ. ಅವನು ಬಹಳ ಸೊರಗಿ ಹೋಗಿದ್ದ. ಬಟ್ಟೆಗಳು ಹರಿದಿದ್ದವು. ಅವನಿಗೆ ಎಷ್ಟೋ ದಿನಗಳಿಂದ ಊಟವೇ ಸಿಕ್ಕಿರಲಿಲ್ಲ ಎಂಬುದು ಅವನ ನೋಟದಿಂದಲೇ ಗೊತ್ತಾಗುತ್ತಿತ್ತು. ತಾಯಿ ಅವನ ಕಥೆಯನ್ನು ಕೇಳಲು ಆರಂಭಿಸಿದಳು.
ಅವನು ತಾನು ಮಾಡಿದ ತಪ್ಪುಗಳನ್ನು ನೆನೆದು ಬೇಸರದಿಂದ ತನ್ನ ಎಲ್ಲಾ ಕಥೆಯನ್ನು ಹೇಳಿದ. ಕೊನೆಗೆ ಹೇಳಿದ: “ಅಮ್ಮಾ, ಇಂದು ಬೆಳಿಗ್ಗೆ ನಿನ್ನನ್ನು ನೋಡಲೇಬೇಕೆಂಬ ಹಂಬಲದಿಂದ ಓಡಿ ಬರುತ್ತಿದ್ದೆ. ದಾರಿಯಲ್ಲಿ ಮೂರು ದಿನಗಳಿಂದ ಊಟವಿಲ್ಲದೆ ಸುಸ್ತಾಗಿ ಬಿದ್ದುಬಿಟ್ಟೆ. ಆಗ ಒಬ್ಬ ಸಾಧುಗಳು ನನ್ನನ್ನು ನೋಡಿ, ತಮ್ಮ ಬಳಿಯಿದ್ದ ರೊಟ್ಟಿಯನ್ನು ತಿನ್ನಲು ಕೊಟ್ಟು, ನೀರು ಕುಡಿಸಿದರು. ಹೋಗುವಾಗ ಅವರು ಒಂದು ಮಾತು ಹೇಳಿದರು: ‘ನೀನು ಬೇರೆಯವರಿಗೆ ಒಳ್ಳೆಯದನ್ನು ಮಾಡಿದರೆ ನಿನಗೆ ಒಳ್ಳೆಯದಾಗುತ್ತದೆ, ನೀನು ಬೇರೆಯವರಿಗೆ ಕೆಟ್ಟದ್ದನ್ನು ಮಾಡಿದರೆ ನಿನಗೆ ಕೆಟ್ಟದ್ದಾಗುತ್ತದೆ.'”
ಇದನ್ನು ಕೇಳಿದ ತಾಯಿಗೆ ಆಶ್ಚರ್ಯದ ಮತ್ತೊಂದು ಮೆರಗು. “ಅದು ನಮ್ಮ ಸಾಧುವೇ! ನಾನು ಇಂದು ನನ್ನ ದುಷ್ಟಬುದ್ಧಿಯ ಮಾತನ್ನು ಕೇಳಿ ವಿಷದ ರೊಟ್ಟಿಯನ್ನು ಕೊಟ್ಟಿದ್ದರೆ, ನನ್ನ ಮಗನೇ ಅದನ್ನು ತಿಂದು ಸತ್ತು ಹೋಗುತ್ತಿದ್ದನಲ್ಲಾ! ದೇವರೇ, ನಾನು ಪ್ರತಿದಿನ ಒಳ್ಳೆಯ ಭಾವದಿಂದ, ಅಭ್ಯಾಸ ಬಲದಿಂದ ಒಳ್ಳೆಯ ರೊಟ್ಟಿಯನ್ನೇ ಕೊಟ್ಟ ಪುಣ್ಯದಿಂದ ನನ್ನ ಮಗ ಬದುಕಿದ,” ಎಂದು ಆನಂದಪಟ್ಟಳು.
ನೀತಿ :-– ಒಳ್ಳೆಯದನ್ನು ಪ್ರತಿದಿನ, ಎಷ್ಟೇ ಕಷ್ಟ ಬಂದರೂ ನಂಬಿಕೆಯಿಂದ ಮಾಡುತ್ತಾ ಹೋದರೆ, ಆ ಒಳ್ಳೆಯದನ್ನು ಮಾಡುವ ಗುಣವೇ ನಮ್ಮ ಅಭ್ಯಾಸವಾಗಿ ಬಿಡುತ್ತದೆ. ಆ ಅಭ್ಯಾಸವೇ ನಮ್ಮನ್ನು ಕೆಟ್ಟದ್ದನ್ನು ಮಾಡುವುದರಿಂದ ತಡೆಯುತ್ತದೆ ಮತ್ತು ಕೊನೆಗೆ ನಮಗೇ ಒಳ್ಳೆಯದನ್ನು ತಂದುಕೊಡುತ್ತದೆ.
🖊️ಸಂಗ್ರಹ🖋️
*ಷ.ಬ್ರ.ಡಾ.ಅಭಿನವ ರಾಮಲಿಂಗ ಶ್ರೀ*
📞 – 9341137882, 9845763534.




