ನುಡಿದಂತೆ ನಡೆಯದ್ದಕ್ಕೆ ದೇವಿ ಕೋಪ : ಡಿಕೆಶಿಗೆ ದೇವಿ ಶಾಪ?
ಯಾದಗಿರಿ ಜಿಲ್ಲೆ ವಡಗೇರಾ ತಾಲ್ಲೂಕಿನ ಗೋನಾಲ ಗ್ರಾಮದ ದುರ್ಗಾದೇವಿ ಆರಾಧಕ ಮಹಾದೇವಪ್ಪ ಪೂಜಾರಿ ಅವರು ಅನೇಕ ಸಲ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಭವಿಷ್ಯದ ಎಚ್ಚರಿಕೆ ನೀಡಿದ್ದರಂತೆ. ಮಹಾದೇವಪ್ಪ ಪೂಜಾರಿ ಮಾತುಗಳನ್ನು ನಂಬಿದ್ದ ಡಿಕೆಶಿ ಸಂಕಷ್ಟ ಪರಿಹಾರಕ್ಕಾಗಿ ವಿವಿಧ ಪೂಜೆಗಳನ್ನು ಮಾಡಿಸುತ್ತಾ ಬಂದಿದ್ದರಂತೆ. ಆದರೆ, ದೋಸ್ತಿ ಸರ್ಕಾರ ಸಂಕಟಕ್ಕೆ ಸಿಲುಕಿದ ಸಂದರ್ಭದಲ್ಲಿ ಡಿಕೆಶಿ ಬಿಜಿಯಾದ ಕಾರಣ ಮಹಾದೇವಪ್ಪ ಪೂಜಾರಿ ಅವರೊಂದಿಗಿನ ಸಂಪರ್ಕದಲ್ಲಿ ವ್ಯತ್ಯಾಸವಾಗಿದೆ. ಆಗಲೂ ಸಹ ಫೋನ್ ಮೂಲಕ ಮೈತ್ರಿ ಸರ್ಕಾರ ಪತನದ ಬಗ್ಗೆ ಪೂಜಾರಿ ಭವಿಷ್ಯ ನುಡಿದಿದ್ದರಂತೆ.
ಗೋನಾಲ ಗ್ರಾಮದ ದುರ್ಗಾದೇವಿ ಪೂಜೆಗೆ ಎರಡು ರೇಷ್ಮೆ ಸೀರೆ ಕಳುಹಿಸಿಕೊಟ್ಟಿದ್ದ ಡಿಕೆಶಿ ಜಾತ್ರೆ ಸಂದರ್ಭದಲ್ಲಿ ದೇಗುಲಕ್ಕೆ ಭೇಟಿ ನೀಡುವುದಾಗಿ ಪೂಜಾರಿಗೆ ಮಾತು ಕೊಟ್ಟಿದ್ದರಂತೆ. ಆದರೆ, ಕೊಟ್ಟ ಮಾತಿನಂತೆ ನಡೆಯದೆ ಮರೆತು ಬಿಟ್ಟಿದ್ದಾರಂತೆ. ಪರಿಣಾಮ ದೇವಿಯ ಕೋಪಕ್ಕೆ ತುತ್ತಾದ ಡಿಕೆಶಿಗೆ ಸಂಕಷ್ಟ ಎದುರಾಗಿದೆ. ದೇಗುಲ ದರ್ಶನ ಪಡೆಯುವ ಮೂಲಕ ನುಡಿದಂತೆ ನಡೆದರೆ ದೇವಿ ಆಶೀರ್ವಾದದಿಂದ ಒಳಿತಾಗುವ ಭರವಸೆ ಇದೆ ಎಂದು ದೇಗುಲದ ಅರ್ಚಕರು ಹೇಳುತ್ತಿದ್ದಾರೆ.
ಸಂಕಷ್ಟ ಎದುರಾಗುತ್ತಿದ್ದಂತೆ ಡಿಕೆಶಿ ಮತ್ತೆ ಪೂಜಾರಿ ಮೊರೆ ಹೋಗಿದ್ದಾರೆ. ಕಳೆದ ಒಂದು ವಾರದಿಂದ ಮಹಾದೇವಪ್ಪ ಪೂಜಾರಿ ಡಿಕೆಶಿ ನಿವಾಸಗಳಲ್ಲಿ ವಿಶೇಷ ಪೂಜೆಗಳಲ್ಲಿ ತೊಡಗಿದ್ದಾರೆ. ಇತ್ತ ಗೋನಾಲ ಗ್ರಾಮದ ದೇವಿ ದೇಗುಲದಲ್ಲೂ ಸಹ ಡಿಕೆಶಿ ಹೆಸರಿನಲ್ಲಿ ವಿಶಿಷ್ಟ ಪೂಜೆ, ಅರ್ಚನೆಗಳು ನಡೆಯುತ್ತಿದ್ದು ನಿನ್ನೆ ತಡರಾತ್ರಿ ವಿಶೇಷ ಪೂಜೆ ನಡೆದಿದೆ. ಮಹಾದೇವಪ್ಪ ಪೂಜಾರಿಯ ಪೂಜೆ ಫಲ ನೀಡುತ್ತದೆಯೇ?. ಡಿಕೆಶಿ ನಂಬಿಕೆ ನಿಜವಾಗುತ್ತದೆಯೇ ಎಂಬುದು ಮಾತ್ರ ‘ಪೂಜಾರಿ’ ಪ್ರಿಯ ಡಿಕೆಶಿಗೆ ಗೊತ್ತು!.
ಇಡಿ ಅಧಿಕಾರಿಗಳ ವಿಚಾರಣೆ ಎದುರಿಸಲು ಹೊರಟ ಡಿ.ಕೆ.ಶಿವಕುಮಾರ್ ಕಾರಿನಲ್ಲಿ ಕುಳಿತಾಕ್ಷಣ ಸ್ಮರಿಸಿದ್ದು ಗೋನಾಲದ ದೇವಿಯನ್ನ ಎಂಬುದು ಅರ್ಚಕರು ಹಾಗೂ ಭಕ್ತರ ವಾದ. ಎನಿವೇ ಡಿಕೆಶಿ ಭಕ್ತಿಗೆ ಕೋಪಗೊಂಡಿರುವ ದೇವಿ ತಣ್ಣಗಾಗಿ ತತಾಸ್ತು ಅನ್ನುವಳೇ? ಡಿಕೆಶಿಯನ್ನು ಗೋನಾಲದ ತಾಯಿ ಕಾಪಾಡುವಳೇ ಎಂಬುದೀಗ ಈ ಭಾಗದ ಜನರಲ್ಲಿ ಮೂಡಿದ ಮಿಲಯನ್ ಡಾಲರ್ ಪ್ರಶ್ನೆ ಆಗಿದೆ. ಸಂಕಷ್ಟಕ್ಕೆ ಸಿಲುಕಿರುವ ಡಿಕೆಶಿ ಬಂಧನಕ್ಕೊಳಗಾಗ್ತಾರೋ ಅಥವಾ ಬಚಾವ್ ಆಗುತ್ತಾರೋ ಗೋನಾಲ ದೇವಿ ಮಹಿಮೆ ಬಲ್ಲವರೇ ಬಲ್ಲರು!. ಆದರೆ ಇಡಿ ಅಧಿಕಾರಿಗಳ ‘ಮಹಿಮೆ’ ಏನೆಂಬುದು ಮಾತ್ರ ಸಂಜೆ ವೇಳೆಗೆ ಸ್ಪಷ್ಟವಾಗಲಿದೆ.