ಅಂಕಣಸಾಹಿತ್ಯ

ಹೆಸರಿಗೆ ಅಕ್ಕಿ ಆದರೆ ಸಾಹಿತ್ಯ, ಸಂಶೋಧನೆಯಲ್ಲಿ ಮೇರುಪರ್ವತ

ಕಲ್ಯಾಣ ಕರ್ನಾಟಕದ ಹಿರಿಯ ಸಾಹಿತಿ, ಸಂಶೋಧಕ – ಡಿ.ಎನ್. ಅಕ್ಕಿ

-ರಾಘವೇಂದ್ರ ಹಾರಣಗೇರಾ

ಗೌರವಿಸು ಜೀವನವ, ಗೌರವಿಸು ಚೇತನವ |
ಆರದೋ ಜಗವೆಂದು ಭೇದವೆಣಿಸದಿರು ||
ಹೋರುವುದೆ ಜೀವನ ಸಮೃದ್ಧಿಗೋಸುಗ ನಿನಗೆ |
ದಾರಿಯಾತ್ಮೊನ್ನತ್ತಿಗೆ ಮಂಕುತಿಮ್ಮ ||
ಎಂಬ ಡಿ.ವಿ.ಜಿ. ಅವರ ಮಂಕುತಿಮ್ಮನ ಕಗ್ಗದ ಸಾಲುಗಳು ಕಲ್ಯಾಣ ಕರ್ನಾಟಕದ ಹಿರಿಯ ಸಾಹಿತಿ, ಇತಿಹಾಸ ಸಂಶೋಧಕ ಶ್ರೀ ಡಿ.ಎನ್. ಅಕ್ಕಿ ಅವರ ವ್ಯಕ್ತಿತ್ವ ಮತ್ತು ಸಾಧನೆಗೆ ತುಂಬಾ ಅನ್ವಯಿಸುತ್ತದೆ.
ಅದಮ್ಯ ಜೀವನ ಪ್ರೀತಿಯೊಂದಿಗೆ ಅರ್ಥಪೂರ್ಣ ಕೌಟುಂಬಿಕ, ಸಾಹಿತ್ಯಿಕ, ಸಾಂಸ್ಕøತಿಕ ಬದುಕನ್ನು ಸಾಗಿಸಿದ ಡಿ.ಎನ್. ಅಕ್ಕಿ ಅವರು ಬದುಕನ್ನು ಗೌರವಿಸುತ್ತ ಹಿರಿಯ-ಕಿರಿಯರನ್ನದೆ, ಯಾವುದೇ ಜಾತಿ, ಮತ, ಪಂಥಗಳೆನ್ನದೆ ಎಲ್ಲರನ್ನೂ ಪ್ರೀತಿಸುತ್ತ, ಗೌರವಿಸುತ್ತ, ಬದುಕು ಬರಹಗಳನ್ನು ಒಂದಾಗಿಸಿಕೊಂಡು ಎಲ್ಲರ ಪ್ರೀತಿ ವಿಶ್ವಾಸಗಳಿಗೆ ಪಾತ್ರರಾಗಿದ್ದಾರೆ.

ಸರಳ ಸಜ್ಜನಿಕೆಯ, ಸುಸಂಸ್ಕøತ, ಸಾತ್ವಿಕ ನಡೆನುಡಿಯ, ಸದುವಿನಯದ ದೇವಿಂದ್ರಪ್ಪ ನಾಭಿರಾಜ ಅಕ್ಕಿಯವರು ಶಿಕ್ಷಣ, ಸಾಹಿತ್ಯ ಹಾಗೂ ಸಾಂಸ್ಕøತಿಕ ಲೋಕದಲ್ಲಿ ಡಿ.ಎನ್.ಅಕ್ಕಿಯವರೆಂದೇ ಚಿರಪರಿಚಿತರಾಗಿದ್ದಾರೆ. ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಗೋಗಿ ಗ್ರಾಮದ ಸಾಂಸ್ಕøತಿಕ ಪರಿಸರದಲ್ಲಿ ತುಂಬಾ ಹೆಸರುವಾಸಿಯಾದ ಅಕ್ಕಿ ಮನೆತನದ ನಾಭಿರಾಜ ಮತ್ತು ಶ್ರೀಮತಿ ಶ್ರೀಕಾಂತಮ್ಮ ಸುಸಂಸ್ಕøತ ದಂಪತಿಗಳ ಉದರದಲ್ಲಿ 03-10-1948ರಲ್ಲಿ ಜನಸಿದರು.

ಹತ್ತನೆ ತರಗತಿಯ ವಿದ್ಯಾಭ್ಯಾಸದ ನಂತರ ಡಿ.ಎನ್. ಅಕ್ಕಿಯವರು ಚಿತ್ರಕಲೆಯಲ್ಲಿ ಡಿಪ್ಲೋಮಾ ಮತ್ತು ಆರ್ಟಮಾಸ್ಟರ್ ಪದವಿ ಪಡೆದು 19-11-1971ರಲ್ಲಿ ಸರ್ಕಾರದಿಂದ ಚಿತ್ರಕಲಾ ಶಿಕ್ಷಕರಾಗಿ ನೇಮಕಗೊಂಡು ವೃತ್ತಿ ಜೀವನವನ್ನು ಆರಂಭಿಸಿದ ಅವರು 34 ವರ್ಷಗಳ ಕಾಲ ವೃತ್ತಿಬದ್ಧತೆಯಿಂದ, ಪ್ರಾಮಾಣಿಕತೆ, ನಿಷ್ಠೆಯಿಂದ ಸೇವೆ ಸಲ್ಲಿಸಿ 30-06-2007ರಂದು ಶಿಕ್ಷಕ ವೃತ್ತಿಯಿಂದ ನಿವೃತ್ತರಾದರು.

ಡಿ.ಎನ್. ಅಕ್ಕಿ ಅವರು ತಮ್ಮ ಶಿಕ್ಷಕ ವೃತ್ತಿಯೊಂದಿಗೆ ಚಿತ್ರಕಲೆ, ಕಾವ್ಯ, ಲೇಖನ, ಸಂಶೋಧನಾ ಬರಹ ಮುಂತಾದವುಗಳಲ್ಲಿ ತುಂಬಾ ಕ್ರೀಯಾಶೀಲತೆಯಿಂದ ತೊಡಗಿಸಿಕೊಂಡು ಮೌಲ್ಯಿಕ ಕೃತಿಗಳನ್ನು ನೀಡಿದ್ದಾರೆ. ‘ಶಹಾಪುರ ತಾಲ್ಲೂಕು ದರ್ಶನ’ (1985), ಮುಂಬೆಳಗು (1987), ಚಿಗುರು ಚಿಂತನ (1987), ಸಗರನಾಡು ಸಿರಿ (1996), ಹಡದವ್ವ ಹಾಡ್ಯಾಳ (2000), ವರ್ಧಮಾನ ಮಹಾವೀರ (ಬಾನುಲಿ ನಾಟಕ) (2002), ಜೈನ ವಿಗ್ರಹಗಳು (2000) ಜೈನ ಜನಪದ ಹಾಡುಗಳು, ಬಾನರಂಗ (ರೇಡಿಯೋ ನಾಟಕಗಳು), ಎಮ್.ಟಿ. ಭೋಪಲೆ (ಜೀವನ ಚರಿತ್ರೆ), ಸನ್ನತಿ ಚಂದ್ರಲಾಂಬಾ, ಮಯಾಮದ್ದಲೆ (2008), ಯಕ್ಷಪ್ರಶ್ನೆ (2008), ಶಿಕ್ಷಕನ ಮನದಾಳದಿಂದ (2008), ಜೀನದನಿ (2010), ಗುಲಬರ್ಗಾ ಜಿಲ್ಲೆಯ ಜೈನ ಪರಂಪರೆ (2011), ಹಕ್ಕುಲತೆನಿ (2011), ಗಂಧೋದಕ (2011) ಮುಂತಾದ ಅನೇಕ ಮೌಲಿಕ ಕೃತಿಗಳನ್ನು ನಾಡಿನ ಸಾರಸ್ವತ ಲೋಕಕ್ಕೆ ಅರ್ಪಿಸಿದ್ದಾರೆ. ಅಲ್ಲದೇ ಅವರ ಹಲವಾರು ಸಂಶೋಧನಾ ಲೇಖನಗಳು, ಕವಿತೆಗಳು, ವ್ಯಂಗ್ಯ ಚಿತ್ರಗಳು, ರಂಗೋಲಿ ಕಲೆ ನಾಡಿನ ಪ್ರಮುಖ ಪತ್ರಿಕೆಗಳಲ್ಲಿ, ಸ್ಮರಣ ಸಂಚಿಕೆಗಳಲ್ಲಿ, ಅಭಿನಂದನಾ ಗ್ರಂಥಗಳಲ್ಲಿ ಪ್ರಕಟಗೊಂಡಿವೆ.

71ರ ಇಳಿವಯಸ್ಸಿನಲ್ಲಿರುವ ಡಿ.ಎನ್. ಅಕ್ಕಿ ಅವರು ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಆದರ್ಶ ಶಿಕ್ಷಕ, ಕವಿ, ಲೇಖಕ, ಚಿತ್ರಕಲಾವಿದ, ಇತಿಹಾಸ ಸಂಶೋಧಕ ಮುಂತಾದವುಗಳಿಂದ ಅವರ ಬದುಕು ವೈವಿಧ್ಯಮಯದಿಂದ ಕೂಡಿದೆ. ಅತ್ಯಂತ ಶಿಸ್ತಿನ ಸಮರ್ಪಣ ಭಾವದ ಪ್ರಜ್ಞಾವಂತ ಶಿಕ್ಷಕರಾಗಿ ಸೇವೆ ಸಲ್ಲಿಸಿದವರು. ಇತಿಹಾಸ ಸಂಶೋಧನಾ ಕಾರ್ಯದಲ್ಲಿ ಅತ್ಯಂತ ಕ್ರೀಯಾಶೀಲತೆಯಿಂದ ತೊಡಗಿಸಿಕೊಂಡು ಮಾದರಿಯಾದವರು. ಬಹುಮುಖ ಪ್ರತಿಭೆವುಳ್ಳ ಅಕ್ಕಿ ಅವರ ಕವಿತೆಗಳು, ವೈಚಾರಿಕ ಲೇಖನಗಳು, ಸಂಶೋಧನಾ ಕಾರ್ಯ ಮತ್ತು ಬರಹಗಳು, ಚಿತ್ರಕಲೆ ಮುಂತಾದವುಗಳಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಅವರ ಸಾಧನಾ ಕ್ಷೇತ್ರ ಇತಿಹಾಸ ಎಂದು ಹೇಳಬಹುದು. ಇತಿಹಾಸದ ಹಲವು ಕಾಲಘಟ್ಟಗಳ ಮೇಲೆ ಬೆಳಕು ಚೆಲ್ಲುವ ಅನೇಕ ಶಾಸನಗಳು, ನಾಣ್ಯಗಳು ಸ್ಮಾರಕಗಳು, ಶಿಲಾಮೂರ್ತಿಗಳು, ಹಸ್ತಪ್ರತಿಗಳು, ದೇವಾಲಯಗಳು ಮುಂತಾದವು ಕುರಿತು ಕ್ಷೇತ್ರಕಾರ್ಯದ ಮೂಲಕ ಸಂಶೋಧನೆಗಳನ್ನು ಕೈಗೊಂಡು ಅವೆಲ್ಲವುಗಳ ಐತಿಹಾಸಿಕ, ಸಾಂಸ್ಕøತಿಕ ಮಹತ್ವವನ್ನು ದಾಖಲಿಸಲು ತುಂಬಾ ಶ್ರಮಿಸಿದ್ದಾರೆ. ಪ್ರಾಗೈತಿಹಾಸಿಕ ನೆಲೆಗಳ ಶೋಧ, ಐತಿಹಾಸಿಕ ಅನೇಕ ವಸ್ತುಗಳು, ಶಾತವಾಹನರ ಕಾಲದ 2000 ವರ್ಷಗಳ ಹಿಂದಿನ ಸೀಸದ ನಾಣ್ಯಗಳ ಶೋಧನೆ ಮತ್ತು ಅವುಗಳ ಸಂಗ್ರಹ ಡಿ.ಎನ್. ಅಕ್ಕಿ ಅವರ ಅತ್ಯಂತ ಪ್ರಮುಖ ಕಾರ್ಯವಾಗಿದೆ ಎಂದು ಹೇಳಬಹುದು.

ಡಿ.ಎನ್. ಅಕ್ಕಿ ಅವರು ಶಿಕ್ಷಣ, ಇತಿಹಾಸ, ಸಾಂಸ್ಕøತಿಕ ಕ್ಷೇತ್ರಗಳಿಗೆ ಸಲ್ಲಿಸಿದ ಅಮೋಘ ಸೇವೆಗೆ ಅನೇಕ ಪ್ರಶಸ್ತಿಗಳು ಅರಸಿ ಬಂದಿವೆ. 1996ರಲ್ಲಿ ಕರ್ನಾಟಕ ಸರ್ಕಾರದಿಂದ ಆದರ್ಶ ಶಿಕ್ಷಕ ರಾಜ್ಯ ಪ್ರಶಸ್ತಿ, 1997-98ರಲ್ಲಿ ಕೇಂದ್ರ ಸರ್ಕಾರದಿಂದ ಆದರ್ಶ ಶಿಕ್ಷಕ ರಾಷ್ಟ್ರ ಪ್ರಶಸ್ತಿ, 2000ರಲ್ಲಿ ಶ್ರೀಕ್ಷೇತ್ರ ಶ್ರವಣಬೆಳಗೋಳದಿಂದ ಶ್ರೀಗೊಮ್ಮಟೇಶ್ವರ ವಿದ್ಯಾಪೀಠ ಪ್ರಶಸ್ತಿ, ಬೆಂಗಳೂರಿನ ಕೆಂದ್ರ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಜೈನ ವಿಗ್ರಹಗಳು ಎಂಬ ಗ್ರಂಥಕ್ಕೆ ಸ್ವಸ್ತಿ ಶ್ರೀ ದೇವೇಂದ್ರಕೀರ್ತಿ ದತ್ತಿ ಪ್ರಶಸ್ತಿ, ಕೊಲ್ಕತ್ತಾದ ಅಖಿಲ ಭಾರತ ದಿಗಂಬರ ಜೈನ ಪ್ರತಿಭಾ ಸನ್ಮಾನ ಸಮಾರೋಹ ಸಮಿತಿಯಿಂದ 2002ರಲ್ಲಿ ಜೈನ ರಾಷ್ಟ್ರ ಗೌರವ ಪ್ರಶಸ್ತಿ, ಭಾರತವರ್ಷಿಯ ದಿಗಂಬರ ಜೈನ ತೀರ್ಥಕ್ಷೇತ್ರ ಸಂರಕ್ಷಣಾ ಸಮಿತಿ ವತಿಯಿಂದ 2004ರಲ್ಲಿ ಜೈನ ಸಂಸ್ಕøತಿ ಸಂರಕ್ಷಕ ಪ್ರಶಸ್ತಿ, ದಕ್ಷಿಣಾ ಭಾರತ ಜೈನಸಭಾ ಸಾಂಗ್ಲಿ ವತಿಯಿಂದ 2006ರಲ್ಲಿ ಆಚಾರ್ಯ ಬಾಹುಬಲಿ ಕನ್ನಡ ಸಾಹಿತ್ಯ ಪುರಸ್ಕಾರ, ಶಹಾಪುರದ ಏಕದಂಡಗಿ ಮಠದಿಂದ ಸಾಹಿತ್ಯ ಸಿರಿ ಪ್ರಶಸ್ತಿ, ಶಹಾಪುರದ ಚರಬಸವೇಶ್ವರ ಸಂಗೀತ ಸೇವಾ ಹಾಗೂ ಸಂಗೀತ ಶಿಕ್ಷಣ ಸಮಿತಿಯ ವತಿಯಿಂದ ಸಗರನಾಡ ಸಿರಿ ಪ್ರಶಸ್ತಿ, ಬೆಂಗಳೂರಿನ ವಾರದ ಸ್ಫೋಟ ಪತಿಕೆಯ ವತಿಯಿಂದ ಸುವರ್ಣ ಕರ್ನಾಟಕ ಪ್ರಶಸ್ತಿ, 2008ರಲ್ಲಿ ಕಲಬುರ್ಗಿಯ ಉದಯೋನ್ಮುಖ ಯುವಬರಹಗಾರರ ಬಳಗದ ವತಿಯಿಂದ ಕಾಯಕ ಸಮ್ಮಾನ ಪ್ರಶಸ್ತಿ, 2011ರಲ್ಲಿ ಕೇಂದ್ರ ಕನ್ನಡ ಸಾಹಿತ್ಯ ಪರಷತ್ತಿನ ವತಿಯಿಂದ ಪಿ. ಶಾಂತಿಲಾಲ್ ದತ್ತಿ ಪ್ರಶಸ್ತಿ, ಬೆಂಗಳೂರಿನ ದ.ರಾ. ಬೇಂದ್ರೆ ಕಾವ್ಯಕೂಟ ವತಿಯಿಂದ ವರ್ಷದ ವ್ಯಕ್ತಿ ಸನ್ಮಾನ, 2017ರಲ್ಲಿ ಶಿವಮೊಗ್ಗ ಜಿಲ್ಲೆಯ ಅತಿಶಯಕ್ಷೇತ್ರ ಹೊಂಬುಜದ ಶ್ರೀ ಜೈನಮಠದ ಭಟ್ಟಾಚಾರ್ಯ ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಮಹಾಸ್ವಾಮಿಗಳವರಿಂದ ಸಿದ್ಧಾಂತ ಕೀರ್ತಿ ಪ್ರಶಸ್ತಿ, ಪದವಿಧರ ಸಾಂಗ್ಲಿ, ದಕ್ಷಿಣ ಭಾರತ ಜೈನಸಭಾ ಸಾಂಗ್ಲಿ, ದಿಗಂಬರ ಜೈನಬೊರ್ಡಿಂಗ ಹುಬ್ಬಳ್ಳಿ ವತಿಯಿಂದ ಡಾ. ಆ.ನೇ. ಉಪಾಧ್ಯ ಜೈನ ಸಾಹಿತ್ಯ ನಿರ್ಮಿತಿ ಹಾಗೂ ಸಂಶೋಧನಾ ಪ್ರಶಸ್ತಿ ಹೀಗೆ ಹಲವಾರು ಪುರಸ್ಕಾರಗಳು ಡಿ.ಎನ್. ಅಕ್ಕಿಯವರಿಗೆ ಸಂದಿವೆ.

ತಮ್ಮ ವೃತ್ತಿ, ಪ್ರವೃತ್ತಿಗಳೊಂದಿಗೆ ನಾಡು-ನುಡಿಯ ಸಾಹಿತ್ಯ ಹಾಗೂ ಸಾಂಸ್ಕøತಿಕ ಸಂಘ ಸಂಸ್ಥೆಗಳಲ್ಲಿ ವಿವಿಧ ಜವಾಬ್ದಾರಿಗಳನ್ನು ಹೊತ್ತುಕೊಂಡು ಕಾರ್ಯನಿರ್ವಹಿಸಿದ ಡಿ.ಎನ್. ಅಕ್ಕಿಯವರು ಆ ಸ್ಥಾನಗಳಿಗೆ ಗೌರವವನ್ನು ಮತ್ತು ಮಹತ್ವವನ್ನು ತಂದು ಕೊಟ್ಟಿದ್ದಾರೆ. ಶ್ರೀಕ್ಷೇತ್ರ ಶ್ರವಣಬೆಳಗೊಳದ ಜೈನ ಅಧ್ಯಯನ ಸಂಸ್ಥೆಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಲಬುರ್ಗಿ ಜಿಲ್ಲಾ ಕನ್ನಡ ಜಾಗೃತಿ ಸಮಿತಿಯ ಸದಸ್ಯರಾಗಿ, ಕರ್ನಾಟಕ ಸರ್ಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ 2006ರಲ್ಲಿ ಸುವರ್ಣ ಕರ್ನಾಟಕ ನಿಮಿತ್ತ ಪ್ರಕಟಿಸಿದ ಕರ್ನಾಟಕದ ಏಕೀಕರಣಕ್ಕಾಗಿ ದುಡಿದ ಮಹನೀಯರು ಎಂಬ ಗ್ರಂಥದ ಉಪಸಂಪಾದಕರಾಗಿ, ಕೇಂದ್ರ ಸರ್ಕಾರದ ಸಂಸ್ಕøತಿ ಇಲಾಖೆಯ ರಾಷ್ಟ್ರೀಯ ಹಸ್ತಪÀ್ರತಿಯ ಅಭಿಯಾನ, ಕರ್ನಾಟಕ ರಾಜ್ಯ ಹಸ್ತಪ್ರತಿಗಳ ಸರ್ವೇಕ್ಷಣಾ ಯೋಜನೆಯ ಕಲಬುರ್ಗಿ ಜಿಲ್ಲಾ ಸಂಯೋಜಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಡಿ.ಎನ್. ಅಕ್ಕಿ ಅವರ ಬದುಕು ಸಾಧನೆಯ ಕುರಿತು 2011ರಲ್ಲಿ ಅವರ ಅಭಿಮಾನಿಗಳು, ಶಿಷ್ಯಂದಿರು, ಆಪ್ತರು ಸೇರಿ ‘ಧವಳ’ ಅಭಿನಂದನಾ ಗ್ರಂಥವನ್ನು ಸಮರ್ಪಿಸಿದ್ದಾರೆ.

ಡಿ.ಎನ್. ಅಕ್ಕಿ ಅವರ ಕುರಿತು ಶಶಿಕಾಂತ ಆರ್. ದಾಪಕೆ ಅವರು ಸೃಜನಾತ್ಮಕ ಕಲಾವಿದ-ಸಾಹಿತಿ, ರಾಷ್ಟ್ರಪ್ರಶಸ್ತಿ ಪುರಸ್ಕøತ ಡಿ.ಎನ್. ಅಕ್ಕಿ ಎಂಬ ವಿಷಯದ ಮೇಲೆ ಎಮ್.ಬಿ. ಲೋಹಾರ ಅವರ ಮಾರ್ಗದರ್ಶನದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಲಘು ಸಂಶೋಧನಾ ಪ್ರಬಂಧವನ್ನು ಅರ್ಪಿಸಿದ್ದಾರೆ. ಮತ್ತು ನರಸಪ್ಪ ಎಮ್. ಗುಪ್ತಾ ಅವರು ಡಾ. ಟಿ.ಎಮ್. ಬಾಸ್ಕರ್ ಅವರ ಮಾರ್ಗದರ್ಶನದಲ್ಲಿ ಡಿ.ಎನ್. ಅಕ್ಕಿ ಅವರ ಬದುಕು-ಬರಹ ಎಂಬ ವಿಷಯದ ಮೇಲೆ ಎಮ್.ಫಿಲ್. ಪದವಿಗಾಗಿ ಗುಲಬರ್ಗಾ ವಿಶ್ವವಿದ್ಯಾಲಯಕ್ಕೆ ಲಘು ಸಂಶೋಧನಾ ಪ್ರಬಂಧವನ್ನು ಮಂಡಿಸಿದ್ದಾರೆ. ಗುಲಬರ್ಗಾ ವಿಶ್ವವಿದ್ಯಾಲಯದಿಂದ ಡಾ. ಚಂದ್ರಬಾಗ ಬಿದರಿಯವರ ಮಾರ್ಗದರ್ಶನದಲ್ಲಿ ಹಳ್ಳೆಪ್ಪ ಲಿಂಗದಳ್ಳಿ ಅವರು ಡಿ.ಎನ್. ಅಕ್ಕಿ ಅವರು ಬದುಕು ಬರಹಗಳ ಸಮಗ್ರ ಕೃತಿಗಳ ಕುರಿತು ಸಂಶೋಧನಾ ಪ್ರಬಂಧವನ್ನು ಮಂಡಿಸಿ ಅಗಸ್ಟ 2019ರಂದು ಪಿ.ಎಚ್.ಡಿ. ಪದವಿಯನ್ನು ಪಡೆದುಕೊಂಡಿದ್ದಾರೆ.

ಡಿ.ಎನ್. ಅಕ್ಕಿ ಅವರು ಸ್ನೇಹಜೀವಿ, ಸಂಘಜೀವಿ, ನಾಡು ನುಡಿಯ ಬಗ್ಗೆ ಅಪಾರವಾದ ಕಾಳಜಿವುಳ್ಳವರು. ಸೂಕ್ಷ್ಮ ಸಂವೇದನಾಶೀಲರಾದ ಅವರು ಎಲ್ಲರೊಂದಿಗೆ ಕಲೆತು, ಬೆರೆತು ಮಾತನಾಡುತ್ತಾರೆ. ಅವರ ಸಂಪರ್ಕಕ್ಕೆ ಬಂದ ವ್ಯಕ್ತಿ ಯಾರೇ ಆಗಿರಲಿ ಆ ವ್ಯಕ್ತಿಯ ಹಿನ್ನೆಲೆ, ಆಸಕ್ತಿ, ಅಭಿರುಚಿ, ಹವ್ಯಾಸ ಮುಂತಾದವುಗಳನ್ನು ತಿಳಿದುಕೊಂಡು ಅವರೊಂದಿಗೆ ಮುಕ್ತವಾಗಿ ಚರ್ಚಿಸಿ ಮಾರ್ಗದರ್ಶನ ಮಾಡುತ್ತಾರೆ, ಪ್ರೋತ್ಸಾಹ ಪ್ರೇರಣೆ ನೀಡುತ್ತಾರೆ. ಪ್ರೀತಿ, ವಾತ್ಸಲ್ಯ, ಆತ್ಮೀಯತೆ, ಮಾನವೀಯ ಅನುಕಂಪ ಮೊದಲಾದ ಗುಣಗಳಿದ ಎಲ್ಲರಿಗೂ ಬೇಕಾದವರಾಗಿದ್ದಾರೆ. ಅವರು ಭಾಷೆ, ಇತಿಹಾಸ, ಸಾಹಿತ್ಯ, ಧರ್ಮ ಯಾವುದೇ ವಿಷಯಗಳ ಬಗ್ಗೆ ತಮ್ಮ ಆಳವಾದ ಅಧ್ಯಯನದಿಂದ ತಿಳಿಸಿಕೊಡುವ ಶೈಲಿ ನಮಗೆ ಬೆರಗುಗೊಳಿಸುತ್ತದೆ. ಅಕ್ಕಿ ಅವರು ವ್ಯಕ್ತಪಡಿಸುವ ಪ್ರತಿಯೊಂದು ಮಾತು, ವಿಚಾರ ತುಂಬಾ ಮೌಲಿಕವಾಗಿರುತ್ತವೆ. ಯಾರಲ್ಲಿಯೂ ಬೇದ ಕಾಣದೆ ಎಲ್ಲರನ್ನು ಮಾನವೀಯ ದೃಷ್ಟಿಯಿಂದ ನೋಡುವ ಸ್ವಬಾವ ಅವರದು.

ಡಿ.ಎನ್. ಅಕ್ಕಿ ಅವರ ಪತ್ನಿ ಶ್ರೀಮತಿ ಸುಮಂಗಲಾ ಅವರು ಸಹ ತುಂಬಾ ಸರಳ, ಸೌಜನ್ಯಮೂರ್ತಿ. ಅಕ್ಕಿ ಅವರ ಬಾಳಸಂಗಾತಿಯಾಗಿ ಬಿಸಿಲು ಬೆಳದಿಂಗಳುಗಳನ್ನು ಸಮವಾಗಿ ಹಂಚಿಕೊಂಡು ಸಂತೃಪ್ತ ಸಂಸಾರಿಕ ಜೀವನವನ್ನು ಸಾಗಿಸಿದವರು. ಮನೆಗೆ ಯಾರೇ ಬರಲಿ ಅವರು ನಮ್ಮವರೇ ಎಂದು ಸತ್ಕರಿಸುವ ವ್ಯಕ್ತಿತ್ವ ಅನುಕರಣೀಯ. ಅಕ್ಕಿ ಅವರ ಹಿರಿಯ ಮಗ ಬ್ರಹ್ಮರಾಜು ಡಿಪ್ಲೋಮ ಇಂಜಿನಿಯರ್ ಪದವಿ ಮುಗಿಸಿ ಹೊರದೇಶದಲ್ಲಿ ಉದ್ಯೋಗದಲ್ಲಿ ಇದ್ದಾರೆ. ಪುತ್ರಿ ಸುಷ್ಮಾ ಕಿರಣಗಿ ಅವರು ಇಂಡಿಯಲ್ಲಿ ಪತಿಯೊಂದಿಗೆ ಸಂಸಾರಿಕ ಜೀವನವನ್ನು ಸಾಗಿಸುತ್ತಿದ್ದಾರೆ. ಕಿರಿಯ ಮಗ ನಾಭಿರಾಜ ಇಂಡಿಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಡಿ.ಎನ್. ಅಕ್ಕಿ ಅವರ ಅಧ್ಯಯನದ ಶಿಸ್ತು, ಸಂಶೋದನೆಯ ಕ್ಷೇತ್ರಕಾರ್ಯ, ಬರವಣಿಗೆಯ ಅಚ್ಚುಕಟ್ಟುತನ, ವಿಸ್ತಾರವಾದ ಓದಿನ ವ್ಯಾಪ್ತಿ, ಮನೆಯಲ್ಲಿ ಅಪಾರವಾದ ಅವರ ಪುಸ್ತಕ ಸಂಗ್ರಹ, ಹೊಸ ತಲೆಮಾರಿನವರೆಗೆ ತುಂಬಾ ಅನುಕರಣೀಯವಾಗುತ್ತವೆ. ಸದ್ದುಗದ್ದಲವಿಲ್ಲದ ಅಪರೂಪದ ಸಾಧಕರಾದ ಸಾಹಿತಿ ಡಿ.ಎನ್. ಅಕ್ಕಿ ಅವರು ಯಾವುದೇ ಪ್ರಶಸ್ತಿ ಬಿರುದು ಬಾವಲಿಗಳಿಗೆ ಆಶಿಸದೆ, ರಾಜಕೀಯ ಮಾಡದೆ ಬದ್ಧತೆಯಿಂದ ಕೆಲಸ ಮಾಡುತ್ತ ಬದುಕು ಸಾಗಿಸಿದವರು. ಇವತ್ತಿನ ಲಾಭ-ನಷ್ಟದ ಹಿನ್ನೆಲೆಯಲ್ಲಿ ನೋಡುವ ಸಾಮಾಜಿಕ ಪರಿಸರದಲ್ಲಿ ಒಳಗೊಂದು ಹೊರಗೊಂದು ಇಟ್ಟುಕೊಂಡು, ಮಾತು ಬರಹ ಕ್ರೀಯೆ ಮುಂತಾದವುಗಳಲ್ಲಿ ಸಾಂಗತ್ಯವಿಲ್ಲದ ಅನೇಕ ಜನ ಸಾಹಿತಿಗಳ ನಡುವೆ ಅಕ್ಕಿ ಸರ್ ಅವರು ಬದುಕು-ಬರಹ, ಒಳ-ಹೊರ ಒಂದಾಗಿಸಿಕೊಂಡು ಮಾನವೀಯ ಸಂವೇದನೆಯ ಸಾಹಿತಿಯಾಗಿ ತುಂಬಾ ವಿಶಿಷ್ಠವಾಗಿ ಕಾಣುತ್ತಾರೆ.

ತುಂಬಿದ ಕೊಡ ತುಳುಕುವುದಿಲ್ಲ ಎಂಬ ಮಾತಿನಂತೆ ನಾಡಿನಲ್ಲಿ ಹಲವು ದಶಕಗಳಿಂದ ಸದ್ದಿಲ್ಲದೆ ಸಾಹಿತ್ಯ, ಇತಿಹಾಸ, ಸಾಂಸ್ಕøತಿಕ ಕ್ಷೇತ್ರಗಳಲ್ಲಿ ವಿಶಿಷ್ಟವಾಗಿ ಕೆಲಸ ಮಾಡುತ್ತಿರುವ ಡಿ.ಎನ್. ಅಕ್ಕಿ ಸರ್ ಅವರು ಕಲ್ಯಾಣ ಕರ್ನಾಟಕದ ಪ್ರಮುಖ ಸಂಪನ್ಮೂಲ ಸಾಹಿತಿಯಾಗಿದ್ದಾರೆ. ಇತಿಹಾಸ ಸಂಶೋಧಕರಾಗಿದ್ದಾರೆ. ಕರ್ನಾಟಕದ ಹಲವಾರು ವಿಶ್ವವಿದ್ಯಾಲಯಗಳ, ಶಾಲಾ ಕಾಲೇಜುಗಳ ಅಧ್ಯಾಪಕರು, ಸಂಶೋಧಕರು, ಚಿಂತಕರು, ಪತ್ರಕರ್ತರು, ಅಪಾರ ಶಿಷ್ಯರು ಇಂದಿಗೂ ಅವರೊಂದಿಗೆ ಅನೇಕ ವಿಷಯಗಳನ್ನು ಕುರಿತು ಮಾರ್ಗದರ್ಶನವನ್ನು, ಸಲಹೆಗಳನ್ನು ಪಡೆಯುತ್ತಾರೆ, ಚರ್ಚಿಸುತ್ತಾರೆ. ಡಿ.ಎನ್. ಅಕ್ಕಿ ಅವರು ನಮ್ಮ ನಾಡಿನ ಪ್ರಮುಖ ಸಾಹಿತ್ಯ ಹಾಗೂ ಸಾಂಸ್ಕøತಿಕ ಸಂಪತ್ತು ಹೇಳಿದರೆ ಅತಿಶೋಕ್ತಿಯಾಗಲಾರದು.

ರಾಘವೇಂದ್ರ ಹಾರಣಗೇರಾ
ಸಮಾಜಶಾಸ್ತ್ರ ಉಪನ್ಯಾಸಕರು
ಶಹಾಪುರ
ಮೊ.ನಂ. 9901559873

Related Articles

Leave a Reply

Your email address will not be published. Required fields are marked *

Back to top button