ಆನೆಕಾಲು ರೋಗ ತಡೆಗೆ ಮಾತ್ರೆ ಸೇವನೆ ಉಪಯುಕ್ತ-ಕಾಂಬ್ಳೆ
ಯಾದಗಿರಿ, ಶಹಾಪುರ: ಸರ್ಕಾರದ ಆರೋಗ್ಯ ಇಲಾಖೆಯ ಮಹತ್ವಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಆನೆಕಾಲು ರೋಗ ತಡೆಗಟ್ಟುವುದಕ್ಕೆ ಮುಂಚಿತವಾಗಿ ಮಾತ್ರೆಗಳ ಸೇವನೆ ಅತ್ಯಂತ ಉಪಯುಕ್ತವಾಗಿದೆ ಎಂದು ಹಿರಿಯ ಆರೋಗ್ಯ ಸಹಾಯಕ ಮಲ್ಲಪ್ಪ ಕಾಂಬ್ಳೆ ತಿಳಿಸಿದರು.
ನಗರದಲ್ಲಿನ ಜ್ಞಾನ ಗಂಗೋತ್ರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆನೆಕಾಲು ರೋಗ ನಿಯಂತ್ರಣ ಔಷಧಿ ಸೇವನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಾತ್ರೆ ಸೇವನೆಯಿಂದ ಕೆಲವೊಬ್ಬರಿಗೆ ವಾಂತಿ ಬಂದಂತೆ, ಒಂದಿಷ್ಟು ಜ್ವರ ಮೈಕೈ ಬಿಸಿಯಾದಂತೆ ಲಕ್ಷಣಗಳು ಕಂಡು ಬರಬಹುದು ಅದಕ್ಕೆ ಯಾವುದೇ ಭಯ ಆತಂಕ ಬೇಡ ಎಂದು ಅವರು ಸಲಹೆ ನೀಡಿದರು. ತಕ್ಷಣ ವೈದ್ಯರು ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿ ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯಬಹುದು.
ಇನ್ನೂ ನಗರಕ್ಕೆ ಸಂಬಂಧಿಸಿದಂತೆ ಹಿರಿಯ ವೈದ್ಯರ ಮಾರ್ಗದರ್ಶನದಲ್ಲಿ 10 ಮಹಿಳಾ ಆರೋಗ್ಯ ಸಹಾಯಕಿಯರು, ಮೂವರು ಮೇಲ್ವಿಚಾರಕರು, 9 ಜನ ಆಶಾ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ನಗರದ ಪ್ರತಿಯೊಂದು ಶಾಲೆಯ ವಿದ್ಯಾರ್ಥಿಗಳಿಗೂ ಮತ್ತು ಅಲ್ಲಿನ ಶಿಕ್ಷಕ ಸಿಬ್ಬಂಧಿವರ್ಗದವರಿಗೆ ಔಷಧ ನುಂಗಿಸುವ ಕಾರ್ಯ ಮುಂದುವರೆದಿದ್ದು, ನಗರದಲ್ಲಿ ಸರ್ಕಾರದ ಆರೋಗ್ಯ ಇಲಾಖೆ ಕಾರ್ಯಕ್ರಮ ಯಶಸ್ವಿಯಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಆರೋಗ್ಯ ಮೇಲ್ವಿಚಾರಕಿ ದೀಪಾ, ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಪದ್ದಮ್ಮ, ಸೇವಾ ಸಹಾಯಕಿ ಪ್ರಿಯಾ, ಆಶಾ ಕಾರ್ಯಕರ್ತರಾದ ಜಮುನಾ ಉಪಸ್ಥಿತರಿದ್ದರು.