ವಿವಿಪ್ಯಾಟ್ ಎಂದರೇನು..? ಮತದಾನ ಯಂತ್ರಗಳ ಕುರಿತು ಪ್ರಾತ್ಯಕ್ಷಿಕೆ
ಯಾದಗಿರಿಃ ಇದೇ ಪ್ರಥಮಬಾರಿಗೆ ಕರ್ನಾಟಕದ ಚುನಾವಣೆ ಸಂದರ್ಭದಲ್ಲಿ ಮತದಾನ ಯಂತ್ರಕ್ಕೆ ವಿವಿಪ್ಯಾಟ್ ಅಳವಡಿಸಲಾಗಿದೆ. ವಿವಿಪ್ಯಾಟ್ ಎಂದರೇನು ಎಂದು ತಲೆಕೆಡಿಸಿಕೊಳ್ಳುತ್ತಿದ್ದೀರಾ.. ವಿವಿಪ್ಯಾಟ್ ಎಂದರೆ ಮತದನ ಖಾತ್ರಿ ಯಂತ್ರ. ಬ್ಯಾಲೆಟ್ ಯೂನಿಟ್ನಲ್ಲಿ ತಾವು ಯಾವ ಚಿಹ್ನೆಗೆ ಮತಚಲಾಯಿಸುತ್ತೇವೋ ಎಂಬುದು ಮತದಾನ ಖಾತ್ರಿ ಯಂತ್ರದಲ್ಲಿ 7 ಸೆಕೆಂಡ್ಗಳ ಕಾಲ ಪ್ರದರ್ಶನಗೊಳ್ಳುವುದರಿಂದ ಮತ ಯಾರಿಗೆ ಹಾಕಲಾಗಿದೆ ಎಂದು ಮತದಾರರು ಖಾತ್ರಿ ಮಾಡಿಕೊಳ್ಳಲು ಸುಲಭವಿಧಾನವಿದೆ. ಇದಕ್ಕೆ ವಿವಿಪ್ಯಾಟ್ ಎನ್ನಲಾಗುತ್ತಿದೆ.
ಶನಿವಾರ ಜಿಲ್ಲಾಡಳಿತ ಭವನದ ಆಡಿಟೋರಿಯಂನಲ್ಲಿ ವಿಧಾನಸಭಾ ಚುನಾವಣೆ-2018 ಹಿನ್ನೆಲೆ ಚುನಾವಣೆಯಲ್ಲಿ ಭಾಗವಹಿಸುವ ಎಲ್ಲಾ ಅಧಿಕಾರಿಗಳಿಗೆ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಪ್ರಾತ್ಯಕ್ಷಿಕೆ ಮೂಲಕ ತರಬೇತಿ ನೀಡಲಾಯಿತು.
ಮತದಾನ ಖಾತ್ರಿ ಯಂತ್ರ (ವಿವಿಪ್ಯಾಟ್), ಕಂಟ್ರೋಲ್ ಯೂನಿಟ್, ಬ್ಯಾಲೆಟ್ ಯೂನಿಟ್ ಹಾಗೂ ವಿಎಸ್ಡಿಯು ಯಂತ್ರಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಲಾಯಿತು. ಮತದಾನ ಕೇಂದ್ರಗಳಲ್ಲಿ ಮತದಾನಕ್ಕೂ ಮುನ್ನ ಹೇಗೆ ಈ ನಾಲ್ಕು ಯಂತ್ರಗಳ ಜೋಡಣೆ ಮಾಡಬಹುದು ಎಂಬುದನ್ನು ತರಬೇತಿ ನೀಡಿದರು. ಈ ಸಂದರ್ಭದಲ್ಲಿ ಅಧಿಕಾರಿ ಮತದಾನ ಮಾಡಿ ಖುಷಿಪಟ್ಟರು. ಅಲ್ಲದೆ ತಮ್ಮ ಮತದಾನವನ್ನು ವಿವಿಪ್ಯಾಟ್ ಮೂಲಕ ಖಾತ್ರಿ ಪಡಿಸಿಕೊಂಡರು.
ಅಲ್ಲದೆ ಇಲ್ಲಿ ವಿಎಸ್ಡಿಯು ಯಂತ್ರವಿದೆ. ಇದು ಮತದಾನ ಖಾತ್ರಿ ಯಂತ್ರ (ವಿವಿಪ್ಯಾಟ್)ದಲ್ಲಿ ಬ್ಯಾಟರಿ ದೋಷ ಮುಂತಾದವುಗಳನ್ನು ಎಚ್ಚರಿಸಲಿದೆ. ಒಬ್ಬ ಮತದಾರ ತಾನು ಇಚ್ಛಿಸಿದ ಅಭ್ಯರ್ಥಿಗೆ ಅಥವಾ ನೋಟಾ ( ಮೇಲಿನ ಯಾರೂ ಇಲ್ಲ) ಮತದಾನ ಮಾಡಿದ ನಂತರ ವಿವಿಪ್ಯಾಟ್ ಪ್ರದರ್ಶಕದಲ್ಲಿ 7 ಸೆಕೆಂಡ್ಗಳ ಕಾಲ ಅಭ್ಯರ್ಥಿಯ ಕ್ರ.ಸಂ. ಅಭ್ಯರ್ಥಿಯ ಹೆಸರು ಹಾಗೂ ಅಭ್ಯರ್ಥಿಗೆ ನೀಡಲಾದ ಚಿಹ್ನೆ ಪ್ರದರ್ಶನಗೊಳ್ಳುತ್ತದೆ.
ಆದರೆ, ಯಾವುದೇ ಕಾರಣಕ್ಕೂ ಪ್ರದರ್ಶಕದಲ್ಲಿ ಕಾಣಿಸಿದ ಸ್ಲೀಪ್ ಭೌತಿಕವಾಗಿ ಮುಟ್ಟಿ ನೋಡಲು, ತೆಗೆದುಕೊಂಡು ಹೋಗಲು ಅವಕಾಶ ಇರುವುದಿಲ್ಲ.
ಈ ಮಧ್ಯೆ ಒಬ್ಬ ಮತದಾರ ‘ಎ’ ಅನ್ನುವ ಅಭ್ಯರ್ಥಿಗೆ ಮತ ಚಲಾಯಿಸಿ, ವಿವಿಪ್ಯಾಟ್ ಪ್ರದರ್ಶಕದಲ್ಲಿ ಬೇರೊಬ್ಬ ಅಭ್ಯರ್ಥಿಯ ಹೆಸರು ಮತ್ತು ಇತರೆ ವಿವರಗಳು ಪ್ರದರ್ಶನವಾಗುತ್ತಿವೆ ಎಂದು ಆಕ್ಷೇಪಣೆ ವ್ಯಕ್ತಪಡಿಸಿದ್ದಲ್ಲಿ, ಅಂತಹ ಸಂದರ್ಭದಲ್ಲಿ ಮತಗಟ್ಟೆಯ ಅಧ್ಯಕ್ಷಾಧಿಕಾರಿ ಆತನನ್ನು ಕರೆದು ವಿವಿಪ್ಯಾಟ್ ಯಂತ್ರದಲ್ಲಿ ಈ ರೀತಿಯ ದೋಷವಿರಲು ಸಾಧ್ಯವಿಲ್ಲ.
ಆದರೂ ನಿನಗೆ ಒಂದು ಟೆಸ್ಟ್ ಮತ ಮಾಡಿಸುವ ಮೂಲಕ ಪುನಃ ನೀನು ಮಾಡಿದ ಮತ ಸಂಬಂಧಿಸಿದ ಅಭ್ಯರ್ಥಿಗೆ ಸೇರುತ್ತದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ಅವಕಾಶವಿದೆ. ಆದರೆ, ಇದಕ್ಕೆ ನೀನು ಘೋಷಣಾ ಪತ್ರದಲ್ಲಿ ಸಹಿ ಮಾಡಬೇಕು. ಒಂದು ವೇಳೆ ಟೆಸ್ಟ್ ಮತದಾನ ಮಾಡಿದ ನಂತರ ನಿನ್ನ ಆಕ್ಷೇಪಣೆ ನಿಜವಾದರೆ ಮತದಾನದ ಪ್ರಕ್ರಿಯೆ ನಿಲ್ಲಿಸಲಾಗುವುದು.
ಆದರೆ ಟೆಸ್ಟ್ ಮತದಾನ ಮಾಡಿದ ನಂತರ ನಿನ್ನ ಆಕ್ಷೇಪಣೆ ಸುಳ್ಳಾದರೆ ನಿನ್ನನ್ನು ಕಾನೂನಿನ್ವಯ ಜೈಲಿಗೆ ಕಳುಹಿಸಲಾಗುವುದು ಎಂದು ಕಾನೂನಿನ ತಿಳುವಳಿಕೆ ನೀಡಬೇಕು ಎಂಬ ಬಗ್ಗೆ ತರಬೇತಿಯಲ್ಲಿ ಮಾಹಿತಿ ಸಹ ನೀಡಲಾಯಿತು.
ಜಿಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಜೆ. ಮಂಜುನಾಥ್ ಅವರು ಮಾತನಾಡಿ, 2018ರ ಚುನಾವಣೆಯಲ್ಲಿ ಪ್ರಪ್ರಥಮ ಬಾರಿಗೆ ರಾಜ್ಯದಲ್ಲಿ ಮತದಾನ ಖಾತ್ರಿ ಯಂತ್ರ ಬಳಸಲಾಗುತ್ತಿದ್ದು, ಇದರಿಂದ ಮತದಾನ ಮಾಡುವ ಮತದಾರನಿಗೆ ತಾನು ಚಲಾಯಿಸಿದ ಮತ ಖಾತ್ರಿ ಪಡಿಸಿಕೊಳ್ಳಬಹುದಾಗಿದೆ. ಈ ಬಗ್ಗೆ ಅಧಿಕಾರಿಗಳು ಸ್ವತ: ಮತ ಚಲಾಯಿಸಿ ನೂತನ ವ್ಯವಸ್ಥೆಯ ಬಗ್ಗೆ ತಿಳಿದುಕೊಳ್ಳುವುದಲ್ಲದೆ, ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ಇದರ ಬಗ್ಗೆ ಅರಿವು ಮೂಡಿಸುವಂತೆ ಕ್ರಮ ಕೈಗೊಳ್ಳಲು ಸೂಚಿಸಿದರು.
ಜಿಲ್ಲೆಯಲ್ಲಿ ಮುಕ್ತ, ನ್ಯಾಯಸಮ್ಮತ, ಶಾಂತಿಯುತ ಚುನಾವಣೆ ನಡೆಸುವ ನಿಟ್ಟಿನಲ್ಲಿ ಯಾರಿಗೂ ಅಂಜದೆ ಕರ್ತವ್ಯ ನಿರ್ವಹಿಸುವಂತೆ ಅಧಿಕಾರಿಗಳಿಗೆ ಅವರು ಧೈರ್ಯ ತುಂಬಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಜಿಲ್ಲಾ ಮಾದರಿ ನೀತಿ ಸಂಹಿತೆ ನೋಡಲ್ ಅಧಿಕಾರಿ ಜಿ.ಪಂ ಸಿಇಓ ಡಾ. ಅವಿನಾಶ್ ಮೆನನ್, ಜಿಲ್ಲೆಯಲ್ಲಿ ರಚಿಸಲಾಗಿರುವ 32 ಕ್ಷಿಪ್ರ ಕಾರ್ಯ ಪಡೆ (ಫ್ಲೈಯಿಂಗ್ ಸ್ಕ್ವಾಡ್) ಅಧಿಕಾರಿ ಮತ್ತು 20 ಚಕ್ ಪೋಸ್ಟ್ ಅಧಿಕಾರಿಗಳಿಗೆ, 20 ವಿಡಿಯೋ ವಿಚಕ್ಷಣಾ ದಳದ ಅಧಿಕಾರಿಗಳಿಗೆ ಅವರ ಕರ್ತವ್ಯ-ಜವಾಬ್ದಾರಿಗಳು, ಅನ್ವಯಿಸುವ ಕಾನೂನು-ನಿಯಮಗಳು, ಮಾದರಿ ನೀತಿ ಸಂಹಿತೆ ಜಾರಿ ಮಾಡುವ ಸಂದರ್ಭದಲ್ಲಿ ಎದುರಿಸಬಹುದಾದ ವಿವಿಧ ಬಗೆಯ ಪ್ರಕರಣಗಳ ಬಗ್ಗೆ ಮಾಹಿತಿ ನೀಡಿದರು. ವಿವಿಧ ತಂಡದ ಸದಸ್ಯರುಗಳಿಗೆ ಪ್ರಶ್ನೆಗಳನ್ನು ಕೇಳಿ, ಬುದ್ಧಿಮತ್ತತೆಯನ್ನು ಪರೀಕ್ಷಿಸಿದರು.
ರಾಜ್ಯ ಹಂತದ ತರಬೇತುದಾರರಾದ ಹಣಮಂತ ಪೂಜಾರಿ ಹಾಗೂ ಅಮರೇಶ್ ಕುಂಬಾರ್ ಅವರು ಅಧಿಕಾರಿಗಳಿಗೆ ತರಬೇತಿ ನೀಡಿದರು. ಜಿಲ್ಲಾ ಉಪ ಚುನಾವಣಾ ಅಧಿಕಾರಿಯೂ ಆದ ಅಪರ ಜಿಲ್ಲಾಧಿಕಾರಿ ಪ್ರಕಾಶ್ ಜಿ. ರಜಪೂತ್, ಯಾದಗಿರಿ ವಿಧಾನಸಭಾ ಕ್ಷೇತ್ರದ ಚುನಾವಣಾ ಅಧಿಕಾರಿ ಸಹಾಯಕ ಆಯುಕ್ತ ಬಿ.ಎಸ್. ಮಂಜುನಾಥ್ ಸ್ವಾಮಿ, ಸುರಪೂರ ವಿಧಾನಸಭಾ ಕ್ಷೇತ್ರದ ಚುನಾವಣಾ ಅಧಿಕಾರಿಯೂ ಆದ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಪ್ರವೀಣ್ ಪ್ರಿಯಾ ಡೇವಿಡ್, ಶಹಾಪೂರ ವಿಧಾನಸಭಾ ಕ್ಷೇತ್ರ ಚುನಾವಣಾ ಅಧಿಕಾರಿಯೂ ಆದ ವಿಶೇಷ ಭೂಸ್ವಾಧೀನ ಅಧಿಕಾರಿ ನವೀನ್ ಜೋಸೆಫ್ ಹಾಗೂ ಗುರುಮಠಕಲ್ ವಿಧಾನಸಭಾ ಕ್ಷೇತ್ರದ ಚುನಾವಣಾ ಅಧಿಕಾರಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ಉಪನಿರ್ದೇಶಕ ಪರಮೇಶ್ವರ್ ನಾಯ್ಕ್ ಮುಂತಾದವರು ಹಾಜರಿದ್ದರು.




