ವಿದ್ಯುನ್ಮಾನ ಮತಯಂತ್ರದ ಬಳಕೆ ಬಗ್ಗೆ ಗೊಂದಲ ಬೇಡಃ ಡಿಸಿ ಮಂಜುನಾಥ
ಯಾದಗಿರಿ: 2018ನೇ ಸಾಲಿನಲ್ಲಿ ರಾಜ್ಯ ವಿಧಾನಸಭೆಗೆ ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರದ ಜೊತೆಗೆ ಹೊಸದಾಗಿ ವಿವಿಪ್ಯಾಟ್ ಯಂತ್ರವನ್ನು ಬಳಸಲಾಗುತ್ತಿದೆ. ಈ ಕುರಿತು ಯಾವುದೇ ಗೊಂದಲ ಬೇಡ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಅವರು ಹೇಳಿದರು.
2018 ರ ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಸಂಬಂಧ ಮಾನ್ಯತೆ ಪಡೆದ ಎಲ್ಲಾ ರಾಷ್ಟ್ರೀಯ ಹಾಗೂ ರಾಜ್ಯ ರಾಜಕೀಯ ಪಕ್ಷಗಳ ಯಾದಗಿರಿ ಜಿಲ್ಲಾ ಘಟಕದ ಪ್ರತಿನಿಧಿಗಳೊಂದಿಗೆ ಮತದಾರರ ಪಟ್ಟಿಯ ಪರಿಷ್ಕರಣೆ ಹಾಗೂ ಪೋಲಿಂಗ್ ಬೂತ್ಗಳ ಸಿದ್ಧತೆ ಕುರಿತು ಚರ್ಚಿಸಲು ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಸೋಮವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
1996 ರಿಂದ ಚುನಾವಣೆಯಲ್ಲಿ ಆಧುನಿಕ ವಿದ್ಯುನ್ಮಾನ ಮತಯಂತ್ರಗಳನ್ನು ಬಳಸಲಾಗುತ್ತಿದೆ. ಇದರ ಬಗ್ಗೆ ಯಾವುದೇ ಗೊಂದಲ ಬೇಡವೆಂದ ಅವರು, ಪ್ರತಿ ಹತ್ತು ಜನ ಮತಗಟ್ಟೆ ಅಧಿಕಾರಿಗಳ ಮೇಲೆ ಒಬ್ಬರು ಸೆಕ್ಟರ್ ಆಫೀಸರ್ ಎಂದು ನೇಮಕ ಮಾಡಲಾಗುತ್ತಿದ್ದು, ಇದರಲ್ಲಿ ಬಹುತೇಕ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಇರಲಿದ್ದಾರೆ ಎಂದು ಅವರು ತಿಳಿಸಿದರು.
ಚುನಾವಣೆಯಲ್ಲಿ ಮತದಾರರು ಮತಚಲಾಯಿಸಿದಾಗ ಮತ ತಾವು ಆಯ್ಕೆಮಾಡಲು ಬಯಸಿದ ಅಭ್ಯರ್ಥಿಗೆ ಚಲಾಯಿಸಿರುವ ಮತವನ್ನು ಪರೀಕ್ಷಿಸಿಕೊಳ್ಳಲು ವಿವಿ ಪ್ಯಾಟ್, ಮತದಾರನಿಗೆ 7 ಸೆಕೆಂಡಗಳ ಕಾಲ ವೀಕ್ಷಿಸುವ ಅವಕಾಶ ಕಲ್ಪಿಸಿದೆ ಎಂದು ಅವರು ಸ್ಪಷ್ಟಪಡಿಸಿದರು.
ಜನವರಿ 22ರ ವರೆಗೆ ಮತದಾರರ ಪಟ್ಟಿ ಪರಿಷ್ಕರಣೆಗೆ ಕಾಲಾವಕಾಶ ಕಲ್ಪಿಸಲಾಗಿತ್ತು. 18 ವರ್ಷ ತುಂಬಿದ ಯುವ ಮತದಾರರ ನೋಂದಣಿ, ಮತದಾರರ ಪಟ್ಟಿಯಿಂದ ಹೆಸರನ್ನು ತೆಗೆದು ಹಾಕುವುದು, ಮತದಾರರ ಪಟ್ಟಿಯಿಂದ ಹೆಸರನ್ನು ವರ್ಗಾವಣೆ ಮಾಡುವುದು ಹಾಗೂ ತಿದ್ದುಪಡಿಗಾಗಿ ಅರ್ಜಿ ಆಹ್ವಾನಿಸಲಾಗಿತ್ತು ಎಂದು ತಿಳಿಸಿದ್ದಾರೆ.
ಜಿಲ್ಲೆಯ ಶಹಾಪುರ, ಸುರಪೂರ, ಯಾದಗಿರಿ ಹಾಗೂ ಗುರುಮಠಕಲ್ ನಾಲ್ಕು ವಿಧಾನಸಭಾ ಕ್ಷೇತ್ರಗಳಿಂದ ಹೊಸ ನೋಂದಣಿಗಾಗಿ 36836 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು. ಅವುಗಳಲ್ಲಿ 2200 ಅರ್ಜಿಗಳನ್ನು ತಿರಸ್ಕರಿಸಲಾಗಿದೆ, ಅರ್ಜಿ ನಮೂನೆ 7ರ ಪ್ರಕಾರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದು ಹಾಕುವಂತೆ 2700 ಅರ್ಜಿಗಳು ಬಂದಿದ್ದು, 4973 ಅರ್ಜಿಗಳು ತಿದ್ದುಪಡಿಗಾಗಿ ಬಂದಿವೆ ಎಂದು ಅವರು ತಿಳಿಸಿದರು.
ಜಿಲ್ಲೆಯಲ್ಲಿ ಒಟ್ಟು 9,33,745 ಮತದಾರರಿದ್ದು, ಸುರಪೂರ ಮತಕ್ಷೇತ್ರದಲ್ಲಿ 287 ಮತಗಟ್ಟೆಗಳಿದ್ದು, ಹೊಸದಾಗಿ 32 ಮತಗಟ್ಟೆಗಳನ್ನು ಹೆಚ್ಚಿಸಿ ಒಟ್ಟು 319 ಮತಗಟ್ಟೆಗಳನ್ನು ನಿರ್ಮಿಸಲಾಗಿದೆ. ಶಹಾಪೂರ ಮತಕ್ಷೇತ್ರದಲ್ಲಿ 230 ಮತಗಟ್ಟೆಗಳಿದ್ದು, ಹೊಸದಾಗಿ 31 ಮತಗಟ್ಟೆಗಳನ್ನು ಹೆಚ್ಚಿಸಿ ಒಟ್ಟು 261ಮತಗಟ್ಟೆಗಳನ್ನು ಗುರುತಿಸಲಾಗಿದೆ. ಯಾದಗಿರಿ ಮತಕ್ಷೇತ್ರದಲ್ಲಿ 236 ಮತಗಟ್ಟೆಗಳಿದ್ದು, ಹೊಸದಾಗಿ 28 ಮತಗಟ್ಟೆಗಳನ್ನು ಹೆಚ್ಚಿಸಿ ಒಟ್ಟು 264 ಮತಗಟ್ಟೆಗಳನ್ನು ಗುರುತಿಸಲಾಗಿದೆ ಹಾಗೂ ಗುರುಮಠಕಲ್ ಮತಕ್ಷೇತ್ರದಲ್ಲಿ 253 ಮತಗಟ್ಟೆಗಳಿದ್ದು, ಹೊಸದಾಗಿ 30 ಮತಗಟ್ಟೆಗಳನ್ನು ಹೆಚ್ಚಿಸಿ ಒಟ್ಟು 283 ಮತದಾನ ಕೇಂದ್ರಗಳನ್ನು ನಿರ್ಮಿಸಲಾಗಿದ್ದು. ಜಿಲ್ಲೆಯಲ್ಲಿ ಒಟ್ಟು 1127 ಮತದಾನ ಕೇಂದ್ರಗಳನ್ನು ಗುರುತಿಸಲಾಗಿದೆ ಎಂದು ಅವರು ತಿಳಿಸಿದರು.
ಮತದಾನ ಕೇಂದ್ರಗಳಲ್ಲಿ ಮತದಾರರಿಗೆ ಮೂಲಭೂತ ಸೌಕರ್ಯಗಳಾದ ವಿದ್ಯುತ್, ಶಾಮಿಯಾನ, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಿದ್ದು, ಅಂಗವಿಕಲ ಮತದಾರರಿಗೆ ವ್ಹೀಲ್ ಚೇರ್ ವ್ಯವಸ್ಥೆ ಮಾಡಲಾಗುವದು ಎಂದು ಅವರು ತಿಳಿಸಿದರು. ಜಿಲ್ಲೆಯಲ್ಲಿ ಗುರುತಿಸಲಾದ 20 ಮತಗಟ್ಟೆಗಳು ಶಿಥಿಲಾವಸ್ಥೆಯಲ್ಲಿವೆ. ಸುರಪೂರದಲ್ಲಿ 3, ಶಹಾಪೂರದಲ್ಲಿ 5, ಯಾದಗಿರಿಯಲ್ಲಿ 5 ಹಾಗೂ ಗುರುಮಠಕಲ್ನಲ್ಲಿ 7 ಮತಗಟ್ಟೆಗಳು ಶಿಥಿಲಾವಸ್ಥೆಯಲ್ಲಿದ್ದು. ಅವುಗಳ ಬದಲಾಗಿ ಪರ್ಯಾಯ ವ್ಯವಸ್ಥೆ ಮಾಡಲಾಗುವುದು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ವಿವಿಪ್ಯಾಟ್ ಮತಯಂತ್ರದ ಬಗ್ಗೆ ರಾಜಕೀಯ ಮುಖಂಡರ ಮಾಹಿತಿ ನೀಡಲಾಯಿತು. ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮರಿಗೌಡ ಹುಲ್ಕಲ್, ಬಿಜೆಪಿಯ ಮಾಧ್ಯಮ ವಕ್ತಾರ ಎ.ಪಿ ನಾಡೇಕರ್, ಜೆಡಿಎಸ್ನ ಶರಣು ನಾಟೇಕಾರ್, ಬಿಎಸ್ಪಿಯ ಬಸವರಾಜ ಬೊಂಬಾಯಿ ಹಾಗೂ ಇತರ ರಾಜಕೀಯ ಪಕ್ಷಗಳ ಮುಖಂಡರು, ಹೆಚ್ಚುವರಿ ಜಿಲ್ಲಾಧಿಕಾರಿ ಶ್ರೀ ಪ್ರಕಾಶ ರಜಪೂತ್ ಹಾಗೂ ಸಹಾಯಕ ಆಯುಕ್ತರಾದ ಡಾ|| ಮಂಜುನಾಥ್ ಸ್ವಾಮಿ ಅವರು ಭಾಗವಹಿಸಿದ್ದರು.