ಅಧಿಕಾರಿಗಳೇ, ಹಂತಕ ಕಾಡಾನೆಗಳನ್ನು ಕಾಡಿಗಟ್ಟುವುದ್ಯಾವಾಗ?
ದಾವಣಗೆರೆ: ಕಳೆದ ಮೂರು ದಿನಗಳಿಂದ ಚಿತ್ರದುರ್ಗ ಜಿಲ್ಲೆಯಲ್ಲಿ ಬೀಡು ಬಿಟ್ಟಿದ್ದ ಕಾಡಾನೆಗಳು ಚಿತ್ರದುರ್ಗ- ಆಂಧ್ರ ಗಡಿಯಲ್ಲಿ ಇಬ್ಬರನ್ನು ಬಲಿ ಪಡೆದಿದ್ದವು. ಬಳಿಕ ಚಿತ್ರದುರ್ಗದಲ್ಲಿ ಮೂವರ ಮೇಲೆ ದಾಳಿ ನಡೆಸಿದ್ದವು. ಪರಿಣಾಮ ಮೂವರ ಸ್ಥಿತಿಯೂ ಗಂಭೀರವಾಗಿದ್ದು ದಾವಣಗೆರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಿನ್ನೆಯಷ್ಟೇ ಚಿತ್ರದುರ್ಗದಿಂದ ದಾವಣಗೆರೆಯ ಚನ್ನಗಿರಿಯತ್ತ ತೆರಳಿದ್ದ ಆನೆಗಳು ಭದ್ರಾ ಅರಣ್ಯದ ದಾರಿ ಹಿಡಿದಿವೆ ಎನ್ನಲಾಗಿತ್ತು. ಆದ್ರೆ, ಇಂದು ಮತ್ತೆ ಬೆಳ್ಳಂಬೆಳಗ್ಗೆಯೇ ನಾಡಿನಲ್ಲೇ ಕಾಣಿಸಿಕೊಳ್ಳುವ ಮೂಲಕ ಶಾಕ್ ನೀಡಿವೆ. ಅಲ್ಲದೆ ದಾವಣಗೆರೆ ತಾಲೂಕಿನ ತ್ಯಾವಣಗಿ ಗ್ರಾಮದ ಬಳಿ ಇಬ್ಬರ ಮೇಲೆ ದಾಳಿ ನಡೆಸಿ ತೀವ್ರ ಗಾಯಗೊಳಿಸಿವೆ. ಅಂತೆಯೇ ನಾಲ್ಕು ಜಾನುವಾರುಗಳನ್ನು ಬಲಿ ಪಡೆದಿವೆ.
ತದನಂತರ ತ್ಯಾವಣಗಿಯಿಂದ ಮುನ್ನಡೆದ ಆನೆಗಳು ಚನ್ನಗಿರಿ ತಾಲೂಕಿನ ಹೊಸಹಳ್ಳಿ ಸಮೀಪ ಈಶ್ವರ ನಾಯ್ಕ (55) ಎಂಬ ವ್ಯಕ್ತಿಯನ್ನು ತುಳಿದು ಕೊಂದಿವೆ. ಪರಿಣಾಮ ಜನ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು ಕೂಡಲೇ ಹಂತಕ ಆನೆಗಳನ್ನು ಕಾಡಿಗಟ್ಟಲು ಕ್ರಮ ಕೈಗೊಳ್ಳಬೇಕು. ಬಂದ ದಾರಿಯಲ್ಲಿ ತಾವಾಗೇ ಕಾಡಿಗೆ ಮರಳುತ್ತವೆ ಎಂದು ಅಧಿಕಾರಿಗಳು ಕೈ ಕಟ್ಟಿ ಕೂಡುವುದನ್ನು ಬಿಟ್ಟು ಜನರ ಪ್ರಾಣ ರಕ್ಷಿಸಬೇಕೆಂದು ಹೊಸಹಳ್ಳಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.