ಪುಂಡಾನೆ ಎಸ್ಕೇಪ್ : ಅಭಿಮನ್ಯು ಜೊತೆ ಕಾದಾಡಿದ ಕಾಡಾನೆ ಸೆರೆ!
ದಾವಣಗೆರೆ: ಕಳೆದ ಒಂದು ತಿಂಗಳಿನಿಂದ ದಾವಣಗೆರೆ, ಚಿತ್ರದುರ್ಗ ಭಾಗದ ಜನರ ನಿದ್ದೆಗೆಡಿಸಿದ್ದ ಕಾಡಾನೆ ಸೆರೆಗೆ ಅರಣ್ಯ ಅಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಕಳೆದ ಐದು ದಿನಗಳಿಂದ ದಾವಣಗೆರೆಯ ಚನ್ನಗಿರಿ ಅರಣ್ಯದಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಮೈಸೂರಿನ ದಸರಾ ಆನೆ ಅಭಿಮನ್ಯು ನೇತೃತ್ವದ ಐದು ಆನೆಗಳು, ಶಿವಮೊಗ್ಗದ ಸಕ್ರೆಬೈಲ್ ನ ಎರಡು ಹೆಣ್ಣಾನೆಗಳನ್ನು ಬಳಸಿಕೊಂಡು ಸುಮಾರು 70 ಜನ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಆದರೆ, ಪುಂಡಾನೆ ಮಾತ್ರ ಎಸ್ಕೇಪ್ ಆಗಿದೆ.
ಮೂರು ದಿನಗಳ ಹಿಂದಷ್ಟೆ ಮಾನಮಟ್ಟಿ ಅರಣ್ಯದಲ್ಲಿ ದಸರಾ ಆನೆ ಅಭಿಮನ್ಯು ಜೊತೆ ಕಾಡಾನೆಯೊಂದು ಕಾಳಗ ನಡೆಸಿತ್ತು. ಆಗ ಅರಣ್ಯ ಸಿಬ್ಬಂದಿಯತ್ತ ಧಾವಿಸುತ್ತಿದ್ದ ಕಾಡಾನೆಯನ್ನು ತಡೆದ ಅಭಿಮನ್ಯು ದಂತ ಭಗ್ನಗೊಳಿಸಿತ್ತು. ಇಂದು ಅದೇ ಕಾಡಾನೆಯನ್ನು ಸೆರೆ ಹಿಡಿಯಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಅಂತೆಯೇ ಕಳೆದ ಒಂದು ತಿಂಗಳಿಂದ ನಾಡಿಗೆ ವಂದು ಉಪಟಳ ನೀಡಿದ್ದ ಪುಂಡಾನೆ ಪತ್ತೆ ಹಚ್ಚಿ ಸೆರೆ ಹಿಡಿಯುವ ಕಾರ್ಯಾಚರಣೆ ಮುಂದುವರೆದಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.