ದಾವಣಗೆರೆಯಲ್ಲಿ ಕಾಡಾನೆಗಳ ದಾಳಿ: ಇನ್ನೂ ಕಾಡು ಸೇರಿಲ್ಲ ‘ಅಣ್ತಮ್ಮಾಸ್’!
ದಾವಣಗೆರೆ: ಕಳೆದ ಮೂರು ದಿನಗಳಿಂದ ಕೋಟೆನಾಡು ಚಿತ್ರದುರ್ಗದಲ್ಲಿ ಬೀಡು ಬಿಟ್ಟಿದ್ದ ‘ಅಣ್ತಮ್ಮಾಸ್’ ಕಾಡಾನೆಗಳು ಅನೇಕ ಅವಾಂತರಗಳನ್ನು ಸೃಷ್ಟಿಸಿದ್ದವು. ಚಿತ್ರದುರ್ಗ – ಆಂಧ್ರ ಗಡಿಯಲ್ಲಿ ಇಬ್ಬರು ರೈತರನ್ನು ಬಲಿ ಪಡೆದಿದ್ದ ಆನೆಗಳು ಚಿತ್ರದುರ್ಗ ಜಿಲ್ಲೆಯಲ್ಲಿ ಮೂವರ ಮೇಲೆ ದಾಳಿ ನಡೆಸಿ ಗಂಭೀರ ಗಾಯಗೊಳಿಸಿದ್ದವು. ನಿನ್ನೆಯಷ್ಟೇ ದುರ್ಗದಿಂದ ಚನ್ನಗಿರಿಯತ್ತ ಸಾಗಿದ್ದ ಮದಗಜಗಳು ಭದ್ರಾ ಅರಣ್ಯದ ಹಾದಿ ಹಿಡಿದಿವೆ ಎನ್ನಲಾಗಿತ್ತು.
ಆದರೆ, ಇಂದು ದಾವಣಗೆರೆ ತಾಲೂಕಿನ ತ್ಯಾವಣಗಿ ಗ್ರಾಮದ ಸಮೀಪ ಪ್ರತ್ಯಕ್ಷ ಆಗಿರುವ ಪುಂಡಾನೆಗಳು ಮತ್ತಿಬ್ಬರು ವ್ಯಕ್ತಿಗಳು ಹಾಗೂ ನಾಲ್ಕು ಜಾನುವಾರುಗಳ ಮೇಲೆ ದಾಳಿ ನಡೆಸಿವೆ. ಗಂಭೀರವಾಗಿ ಗಾಯಗೊಂಡಿರುವ ಸತೀಶ್(32) ಹಾಗೂ ಗಣೇಶ(40) ರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಪರಿಣಾಮ ದಾವಣಗೆರೆಯಲ್ಲೀಗ ಕಾಡಾನೆಗಳ ಹಾವಳಿ ಶುರುವಾಗಿದ್ದು ಜನ ಆತಂಕಗೊಂಡಿದ್ದಾರೆ. ಕಾಡಾನೆ ಹಾವಳಿ ತಡೆಗೆ ಅರಣ್ಯ ಅಧಿಕಾರಿಗಳು ಅದ್ಯಾವಾಗ ಬ್ರೇಕ್ ಹಾಕುತ್ತಾರೋ ಎಂದು ಜನ ಅಧಿಕಾರಿಗಳ ವಿರುದ್ಧ ಹಿಡಿ ಶಾಪ ಹಾಕುತ್ತಿದ್ದಾರೆ.