ಕಾಡಾನೆ ದಾಳಿಗೆ ಮತ್ತೋರ್ವ ಬಲಿ : ಕಾಡಾನೆ ಹಾವಳಿ ತಪ್ಪಿಸಿ ಪ್ಲೀಸ್
ಚಿತ್ರದುರ್ಗ: ಕೊನೆಗೂ ಕಾಡಾನೆ ಕೋಟೆನಾಡು ಚಿತ್ರದುರ್ಗದಲ್ಲಿ ರೈತನೋರ್ವನ ಬಲಿ ಪಡೆದಿದೆ. ಹೊಳಲ್ಕೆರೆ ತಾಲೂಕಿನ ತಾಳಿಕಟ್ಟೆ ಗ್ರಾಮದ ರೈತ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಒಂಟಿ ಸಲಗ ದಾಳಿ ನಡೆಸಿದ್ದು ರೈತ ಗಾಳೆಪ್ಪ (45) ನನ್ನು ತುಳಿದು ಹಾಕಿದೆ. ಆದರೆ, ನಿನ್ನೆ ತಾಳಿಕಟ್ಟೆ, ದುಮ್ಮಿ, ಹಾಗೂ ಬೆಟ್ಟ ಕಡೂರು ಬಳಿ ಏಳು ಜನರಿಗೆ ಗಾಯಗೊಳಿಸಿದ್ದು ಮಾತ್ರ ವರದಿ ಆಗಿತ್ತು. ರೈತ ಗಾಳೆಪ್ಪ ಆನೆ ದಾಳಿಗೆ ಬಲಿಯಾಗಿದ್ದು ತಡವಾಗಿ ಬೆಳಕಿಗೆ ಬಂದಿದೆ.
ನಿನ್ನೆ ರಾತ್ರಿ ರೈತ ಗಾಳೆಪ್ಪ ಮನೆಗೆ ಬಾರದಿದ್ದಾಗ ಕುಟುಂಬಸ್ಥರು ಆತಂಕಗೊಂಡಿದ್ದಾರೆ. ಜಮೀನಿಗೆ ಹೋದವರು ಆನೆ ನೋಡಲು ತೆರಳಿದ್ದರೆ ಸಂಜೆಯಾದರೂ ಬರಬೇಕಿತ್ತು. ಇನ್ನೂ ಬಂದಿಲ್ಲವಲ್ಲ ಎಂದು ಅಕ್ಕಪಕ್ಕದ ಊರಿನ ಸಂಭಂಧಿಕರಿಗೆ ಫೋನ್ ಮಾಡಿ ಕೇಳಿದ್ದಾರೆ. ಎಲ್ಲೆಡೆ ಹುಡುಕಿದರೂ ಸಹ ಗಾಳೆಪ್ಪ ಪತ್ತೆಯಾಗಿಲ್ಲ. ಇಂದು ಬೆಳಗ್ಗೆ ಮೆಕ್ಕೆಜೋಳದ ಹೊಲದಲ್ಲಿ ಗಾಳೆಪ್ಪನ ಶವ ಪತ್ತೆಯಾಗಿದೆ. ಪರಿಣಾಮ ಗ್ರಾಮಸ್ಥರು ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದು ಕಾಡಾನೆ ಹಾವಳಿಯನ್ನು ತಡೆಗಟ್ಟಿ ಪ್ಲೀಸ್ ಎಂದು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.