ಪ್ರಮುಖ ಸುದ್ದಿ
ಕೋಟೆನಾಡಿನ ಗಡಿದಾಟಿದ ಕಾಡಾನೆಗಳು ಸದ್ಯ ಕಾಡಿನ ಕಾರಿಡಾರಲ್ಲಿವೆ!
ಚಿತ್ರದುರ್ಗ: ಕಳೆದ ಮೂರು ದಿನಗಳಿಂದ ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಬೀಡು ಬಿಟ್ಟಿದ್ದ ಕಾಡಾನೆಗಳು ಅನೇಕ ಅವಾಂತರಗಳನ್ನು ಸೃಷ್ಟಿಸಿದ್ದವು. ಜನರಲ್ಲಿ ಭಯ ಭೀತಿಯನ್ನು ಹುಟ್ಟಿಸಿದ್ದವು. ಆಂಧ್ರದ ಗಡಿಯಲ್ಲಿ ಇಬ್ಬರನ್ನು ಬಲಿ ಪಡೆದಿದ್ದ ಆನೆಗಳು ಚಿತ್ರದುರ್ಗದಲ್ಲಿ ದಾಳಿ ನಡೆಸಿ ಮೂವರನ್ನು ಗಾಯಗೊಳಿಸಿದ್ದವು.
ಕಾಡಾನೆಗಳು ಅದ್ಯಾವಾಗ ಈ ಬಯಲು ಸೀಮೆಯಿಂದ ಕಾಡಿನ ದಾರಿ ಹಿಡಿಯುತ್ತವೆ ಎಂದು ಜನ ಕಾದಿದ್ದರು. ಅಲ್ಲದೆ ಪೊಲೀಸರು, ಅರಣ್ಯ ಇಲಾಖೆ ಅಧಿಕಾರಿಗಳು ಸಹ ಜನರನ್ನು ನಿಯಂತ್ರಿಸುವುದು ಮತ್ತು ಆನೆಗಳಿಗೆ ಕಾಡಿಗಟ್ಟುವುದು ಹೇಗೆಂದು ತಲೆಬಿಸಿ ಮಾಡಿಕೊಂಡಿದ್ದರು.
ಅಂತೂ ಇಂತು ಕಾಡಾನೆಗಳು ನಿನ್ನೆ ರಾತ್ರಿ ಆಯಿತೋಳು ಗ್ರಾಮದಿಂದ ಕಾತ್ರಾಳು, ಸಿರಿಗೆರೆ ಮೂಲಕ ಚನ್ನಗಿರಿಯತ್ತ ಸಾಗಿ ನೀರ್ತಡಿ ಅರಣ್ಯದ ಮೂಲಕ ಭದ್ರಾ ಅರಣ್ಯದ ದಾರಿ ಹಿಡಿದಿವೆ ಎಂದು ತಿಳಿದು ಬಂದಿದೆ. ಹೀಗಾಗಿ, ಮೂರು ದಿನಗಳಿಂದ ಆನೆ ಹಾವಳಿಯಿಂದ ಕಂಗೆಟ್ಟಿದ್ದ ದುರ್ಗದ ಜನ ಇಂದು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.