ಪ್ರಮುಖ ಸುದ್ದಿ
ಕೋಟೆನಾಡಲ್ಲಿ ನಾಪತ್ತೆಯಾಗಿದ್ದ ಕಾಡಾನೆಗಳು ಪ್ರತ್ಯಕ್ಷ, ರೈತನಿಗೆ ತಿವಿತ!
ಚಿತ್ರದುರ್ಗ: ನಿನ್ನೆ ಚಳ್ಳಕೆರೆ ತಾಲೂಕಿನ ಕೆರೆಯಾಗಳಹಳ್ಳಿ ಬಳಿಯ ಕೆರೆಯಲ್ಲಿ ಬೀಡು ಬಿಟ್ಟಿದ್ದ ಆನೆಗಳು ಯುವಕನೊಬ್ಬನಿಗೆ ತಿವಿದು ಗಾಯಗೊಳಿಸಿದ್ದವು. ಆದರೆ, ರಾತ್ರೋರಾತ್ರಿ ಆನೆಗಳು ಕೆರೆಯಾಗಳಹಳ್ಳಿಯಿಂದ ನಾಪತ್ತೆಯಾಗಿದ್ದವು. ಹೀಗಾಗಿ, ಬೆಳಗ್ಗೆಯಿಂದ ಅರಣ್ಯ ಅಧಿಕಾರಿಗಳು ಆನೆಗಳ ಪತ್ತೆಗಾಗಿ ಆನೆ ಜಾಡು ಹಿಡಿದು ತಡಕಾಡಿದ್ದರು. ಆದರೆ, ಜೋಡಾನೆಗಳು ಮಾತ್ರ ಕೆರೆಯಾಗಳಹಳ್ಳಿಯಿಂದ ಸುಮಾರು ನಲವತ್ತು ಕಿಲೋ ಮೀಟರ್ ದೂರದ ಚಿತ್ರದುರ್ಗ ತಾಲೂಕಿನ ಆಯಿತೋಳು ಗ್ರಾಮದ ಬಳಿ ಪ್ರತ್ಯಕ್ಷವಾಗಿವೆ.
ಆಯಿತೋಳು ಗ್ರಾಮದ ಬಳಿಯ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತ ಕಾಟಪ್ಪ(65) ನಿಗೆ ತಿವಿದು ತೀವ್ರ ಗಾಯಗೊಳಿಸಿವೆ. ಪತಿಣಾಮ ರೈತ ಕಾಟಪ್ಪ ಗಂಭೀರವಾಗಿ ಗಾಯಗೊಂಡಿದ್ದು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳು, ಪೊಲೀಸರು ಭೇಟಿ ನೀಡಿದ್ದು ಆನೆಗಳನ್ನು ನೋಡಲು ಮುಗಿಬಿದ್ದಿರುವ ಜನರನ್ನು ನಿಯಂತ್ರಿಸಲು ಹರಸಾಹಸ ಪಡುತ್ತಿದ್ದಾರೆ.