ಪ್ರಮುಖ ಸುದ್ದಿ

ಸಂಭ್ರಮದ ಗವಿಸಿದ್ಧಲಿಂಗೇಶ್ವರ ರಥೋತ್ಸವ

ಅದ್ಧೂರಿಯಾಗಿ ಜರುಗಿದ ಚಿಂತನಹಳ್ಳಿ ಗವಿಸಿದ್ದಲಿಂಗೇಶ್ವರ ರಥೋತ್ಸವ

ಯಾದಗಿರಿಃ ಗುರುಮಠಕಲ್ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಹಾಗೂ ಧಾರ್ಮಿಕ ಶಕ್ತಿ ಕೇಂದ್ರ ಚಿಂತನಹಳ್ಳಿಯ ಗವಿಸಿದ್ಧಲಿಂಗೇಶ್ವರ ರಥೋತ್ಸವವು ರವಿವಾರ ರಾತ್ರಿ ಅತಿ ವಿಜ್ರುಂಭಣೆಯಿಂದ ಜರುಗಿತು.

ಇಲ್ಲಿನ ಭಕ್ತಜನರ ಆರಾಧ್ಯದೈವವಾದ ಗವಿಸಿದ್ಧಲಿಂಗೇಶ್ವರನಿಗೆ ಬೆಳಿಗ್ಗೆ ವೇದಘೋಷಗಳೊಂದಿಗೆ ಅರ್ಚಕರು ಮಹಾರುದ್ರಾಭಿಷೇಕ ನೆರವೇರಿಸಿದರು. ನಂತರ ಸಹಸ್ರ ಬಿಲ್ವಾರ್ಚನೆ ನಡೆಯಿತು. ಶ್ರೀ ದೇವರ ಮೂರ್ತಿಯನ್ನು ಹೊತ್ತ ಪಲ್ಲಕ್ಕಿಯು ಚಿಂತನಹಳ್ಳಿ ಗ್ರಾಮದಿಂದ ಕಾನನದ ಮಧ್ಯೆ ಇರುವ ಗವಿ ಸಿದ್ಧಲಿಂಗೇಶ್ವರ ದೇವಸ್ಥಾನದ ವರೆಗೆ ಮರವಣಿಗೆ ಮಾಡಲಾಯಿತು.

ರಾತ್ರಿ ದಿಗ್ಗಾಂವ್ ಹಿರೇಮಠದ ಸಿದ್ಧವೀರ ಶಿವಾಚಾರ್ಯ ಮಹಾಸ್ವಾಮೀಜಿ ಮತ್ತು ಸೇಡಂ ಹಾಲಪ್ಪಯ್ಯನ ಮಠದ ಪಂಚಾಕ್ಷರಿ ಮಹಾಸ್ವಾಮೀಜಿಯವರಿಂದ ರಥಕ್ಕೆ ಪೂಜೆ ಮಾಡುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. ಆಗಮಿಸಿದ ಭಕ್ತರು ಹುಣ್ಣಿಮೆಯ ಬೆಳದಿಂಗಳಲ್ಲಿ ಶ್ರದ್ಧಾ, ಭಕ್ತಿಯಿಂದ ಗವಿಸಿದ್ಧಲಿಂಗೇಶ್ವರ ಮಹಾರಾಜ ಕೀ ಜೈ ಎಂಬ ಜಯಘೋಷದಿಂದ ಶ್ರೀ ದೇವರ ರಥವನ್ನು ಎಳೆದು ಸಂಭ್ರಮಿಸಿದರು. ಈ ಸಂದರ್ಭದಲ್ಲಿ ವೀರಭದ್ರ ದೇವರ ವೇಷ ಧರಿಸಿದ ಪುರುವಂತರ ಕುಣಿತ ನೋಡುಗರ ಗಮನ ಸೆಳೆಯಿತು.

ನಂತರ ನಡೆದ ಧರ್ಮ ಸಭೆಯಲ್ಲಿ ಸಭಿಕರನ್ನು ಉದ್ದೇಶಿಸಿ ಸಿದ್ಧವೀರ ಶಿವಾಚಾರ್ಯರು ಮಾತನಾಡುತ್ತಾ, ಜಾತ್ರೆಗಳು ಜಾಗೃತಿಯನ್ನು ಮೂಡಿಸುತ್ತವೆ. ನೊಂದ ಮನಸುಗಳಿಗೆ ಸಾಂತ್ವಾನವನ್ನು, ದುಡಿದ ದೇಹಕ್ಕೆ ನೆಮ್ಮದಿಯನ್ನು ನೀಡುತ್ತವೆ ಎಂದು ಅಭಿಪ್ರಾಯ ಪಟ್ಟರು.

ಪಂಚಾಕ್ಷರಿ ಮಹಾಸ್ವಾಮಿಗಳು ಮಾತನಾಡಿ, ಈ ಜಾತ್ರೆಯಂತೆ ನಮ್ಮ ಬದುಕಿನ ಜಾತ್ರೆಯನ್ನು ಜೋಪಾನವಾಗಿ ನಡೆಸಿಕೊಂಡು ಹೋಗಬೇಕು. ಶರಣರ ಸಂತರ ಶಿವಯೋಗಿಗಳ ಸಂಗದಿಂದ, ಅನುಭಾವದಿಂದ ಬದುಕೆಂಬ ಸುಧೀರ್ಘ ಜಾತ್ರೆಯನ್ನು ಮಾಡಬೇಕು. ಶರಣರ ಅನುಭಾವದಿಂದ ಬದುಕು ಪಾವನವಾಗುತ್ತದೆ ಎಂದು ಹೇಳಿದರು. ರಾಜ್ಯ ಹಾಗೂ ಹೊರ ರಾಜ್ಯದಿಂದ ಅಪಾರ ಸಂಖ್ಯೆಯ ಭಕ್ತಾದಿಗಳು ಜಾತ್ರೆಯಲ್ಲಿ ಭಾಗವಹಿಸಿ ಶ್ರೀ ದೇವರಿಗೆ ಹೂ, ಹಣ್ಣು, ಕಾಯಿ ಅರ್ಪಿಸಿ ಕೃತಾರ್ತರಾದರು.

Related Articles

Leave a Reply

Your email address will not be published. Required fields are marked *

Back to top button