ಪ್ರಮುಖ ಸುದ್ದಿ
ಘತ್ತರಿಗಿ ಸೇತುವೆ ಮುಳುಗಡೆ ಭಕ್ತರ ಪರದಾಟ
ಕಲಬುರ್ಗಿಃ ಜಿಲ್ಲೆಯ ಅಫಜಲಪುರ ತಾಲೂಕಿನ ಸುಕ್ಷೇತ್ರ ಘತ್ತರಿಗೆ ಭಾಗಮ್ಮ ದೇವಸ್ಥಾನಕ್ಕೆ ತೆರಳಲು ಭೀಮಾನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಸೇತುವೆಯೊಂದು ನೀರಿನಲ್ಲಿ ಮುಳುಗಡೆಯಾಗಿದೆ.
ನೆರೆ ಹಾವಳಿ ನೀರಿನಿಂದಾಗಿ ಸೇತುವೆ ಸಂಪೂರ್ಣ ಮುಳಿಗಿರುವದರಿಂದ ಸಂಚಾರ ಸ್ಥಗಿತಗೊಂಡಿದೆ. ವಿಜಯಪುರ, ಯಾದಗಿರಿ ಜಿಲ್ಲೆ, ಜೇವರ್ಗಿಯಿಂದ ಸಿಂದಗಿ-ವಿಜಯಪುರ ರಸ್ತೆ ಮಾರ್ಗವಾಗಿ ಈ ಭಾಗದಿಂದ ತೆರಳುವ ಭಕ್ತಾಧಿಗಳಿಗೆ ಸೇತುವೆ ಮುಳುಗಡೆಯಿಂದ ದೇವಿ ದರ್ಶನ ಪಡೆಯಲು ಕಲಬುರ್ಗಿ ಮೂಲಕ ಸುತ್ತುವರೆದು ಹೋಗುವ ಸ್ಥಿತಿ ನಿರ್ಮಾಣವಾಗಿದೆ.
ಇಂದು ಶುಭ ಶುಕ್ರವಾರ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಸುಕ್ಷೇತ್ರಕ್ಕೆ ತೆರಳಿ ದರ್ಶನ ಪಡೆಯುತ್ತಾರೆ. ಸಾವಿರಾರು ಸಂಖ್ಯೆಯಲ್ಲಿ ಇಂದು ಭಕ್ತರು ಆಗಮಿಸಲಿದ್ದರು. ಆದರೆ ಮಹಾರಾಷ್ಟ್ರದಲ್ಲಿ ಭಾರಿ ಮಳೆಯಾದ ಹಿನ್ನೆಲೆ ಭೀಮಾನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಬಿಡಲಾಗಿದೆ. ಹೀಗಾಗಿ ನೆರೆ ಹಾವಳಿಗೆ ಭೀಮಾ ತೀರದ ಜನ ತತ್ತರಿಸಿ ಹೋಗಿದ್ದಾರೆ.