ಖಾಸಗಿ ವಾಹಿನಿಗಳೇಕೆ ಹೆಚ್.ಡಿ.ಕುಮಾರಸ್ವಾಮಿ ಅವರ ಸುದ್ದಿ ಬಿತ್ತರಿಸುತ್ತಿಲ್ಲ?
ಬಾಗಲಕೋಟೆ: ನಗರದ ಖಾಸಗಿ ಹೋಟೆಲ್ ನಲ್ಲಿ ತಂಗಿದ್ದ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯದ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರ ಸಂದರ್ಶನಕ್ಕೆಂದು ಖಾಸಗಿ ಸುದ್ದಿವಾಹಿನಿಯ ಪ್ರತಿನಿಧಿಗಳು ತೆರಳಿದ್ದರು. ಆದರೆ, ಹೆಚ್.ಡಿ.ಕುಮಾರಸ್ವಾಮಿ ಮಾತ್ರ ಮಾಧ್ಯಮದವರಿಗೆ ಕೈ ಮುಗಿಯುತ್ತೇನೆ ನನ್ನ ಸಂದರ್ಶನವೇ ಬೇಡ ಎಂದಿದ್ದಾರೆ. ಮಾಜಿ ಮುಖ್ಯಮಂತ್ರಿಯ ಮಾತು ಕೇಳಿ ಮಾಧ್ಯಮದ ಮಂದಿ ಶಾಕ್ ಆಗಿದ್ದಾರೆ.
ಇತ್ತೀಚೆಗೆ ಕಾಂಗ್ರೆಸ್ ಮತ್ತು ಬಿಜೆಪಿಯ ವರದಿಗಳನ್ನಷ್ಟೇ ಎಲೆಕ್ಟ್ರಾನಿಕ್ ಮಾಧ್ಯಮಗಳು ಪ್ರಚಾರ ಮಾಡುತ್ತಿವೆ. ಆದರೆ, ಜೆಡಿಎಸ್ ಬಗ್ಗೆ ಸುದ್ದಿ ಪ್ರಸಾರ ಮಾಡುತ್ತಿಲ್ಲ. ನನ್ನ ಬಗೆಗಿನ ಸುದ್ದಿಗಳನ್ನು ಡಸ್ಟ್ ಬಿನ್ ಗೆ ಬಿಸಾಡಲಾಗುತ್ತಿದೆ. ಈ ನಡುವೆ ನಾವು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುವುದೇ ತಪ್ಪಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ದಯಮಾಡಿ ನನಗೆ ಒತ್ತಾಯ ಮಾಡಬೇಡಿ ಎಂದಿರುವ ಹೆಚ್.ಡಿ.ಕುಮಾರಸ್ವಾಮಿ ನಾನು ಈಗಾಗಲೇ ಮಾಜಿ ಮುಖ್ಯಮಂತ್ರಿ ಆಗಿದ್ದೇನೆ. ಎಲ್ಲಾ ಚಾನಲ್ ಗಳ ನಡೆ ತೀವ್ರ ನೋವು ತಂದಿದೆ. ನಿಮಗೆ ಸುಖಾಸುಮ್ಮನೆ ಪ್ರತಿಕ್ರಿಯೆ ನೀಡಿ ನಾನೇಕೆ ಸಮಯ ವ್ಯರ್ಥ ಮಾಡಿಕೊಳ್ಳಲಿ ಎಂದು ಹೇಳುವ ಮೂಲಕ ಖಾಸಗಿ ವಾಹಿನಗಳ ಬಗ್ಗೆ ಸಾತ್ವಿಕ ಕೋಪ ವ್ಯಕ್ತಪಡಿಸಿದ್ದಾರೆ.