ವಿನಯ ವಿಶೇಷ

ಬೆಳೆಗೆರೆ ಪತ್ರಿಕಾ ಲೋಕದ ಲೆಜೆಂಡ್ – ಸಾಹಿತಿ ಹೊನ್ಕಲ್

ಅಗಲಿದ ನಾಡಿನ ದೈತ್ಯ ಬರಹಗಾರನಿಗೆ
ಭಾವಪೂರ್ಣ ಅಂತಿಮ ನಮನ.
ಹುಬ್ಬಳ್ಳಿ ಯ ಕರ್ಮವೀರ ಕಾಲದಿಂದಲೂ ನಿನ್ನೆ ಮೊನ್ನೆಯವರಿಗೂ ಸುಮಾರು ಇಪ್ಪತ್ತು ವರ್ಷಗಳ ಆತ್ಮೀಯ ಒಡನಾಟ ಹೊಂದಿದ್ದ ನಾಡಿನ ದೈತ್ಯ ಬರಹಗಾರ ಆತ್ಮೀಯ ರವಿ ಬೆಳಗೆರೆ ಅವರ ಸಾವು ತುಂಬಾ ನೋವು ತಂದಿದೆ. ಅವರ ಆತ್ಮಕ್ಕೆ ಚಿರಶಾಂತಿ ಕೋರುವೆ.ನನ್ನ ನೂರಾರು ಹನಿಗವನ ,ಕವನ, ಗಜಲ್, ಕಥೆ,ಬರಹ ಪ್ರಕಟಿಸಿ ನನಗೆ ಒಂದು ಶಕ್ತಿಯಾಗಿದ್ದ ಈ ಓದುಗರ ದೊರೆ ನನಗೆ ಸ್ನೇಹಿತನಾಗಿದ್ದ ಎಂಬ ಹೆಮ್ಮೆ.ಈ ಕೊಂಡಿ ಇಷ್ಟು ಬೇಗ ಕಳಚಬಾರದಿತ್ತು.

ಹುಬ್ಬಳ್ಳಿ ಯ ಕಸ್ತೂರಿ, ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಕೆಲಸ ಮಾಡುವ ಕಾಲದಿಂದಲೂ ನನಗೆ ಅವರ ಒಡನಾಟ.ಆಗಿನಿಂದಲೇ ನನ್ನ ಕಥೆ ಕಾವ್ಯ ಪ್ರಕಟಿಸುತ್ತಾ ಬಂದ ಅವರೊಂದಿಗೆ ಆತ್ಮೀಯತೆ ಬೆಳೆಯುತ್ತಲೇ ಹೋಯಿತು.ಬದುಕಿನ ದಕಡಿ ಅವರನ್ನು ಹುಬ್ಬಳ್ಳಿಯಿಂದ ಬೆಂಗಳೂರಿಗೆ ತಂದಿತು.ಕರ್ಮವೀರಕ್ಕೆ ಮರು ಜೀವ ನೀಡಿದ ಅವರು ಪಾಪಿಗಳ ಲೋಕದಲ್ಲಿ ಅಂಕಣ ಬರೆಯುವ ಮೂಲಕ ಭೂಗತ ಲೋಕವನ್ನು ಪರಿಚಯಿಸಿದರು.

ಲಂಕೇಶ್, ಕನ್ನಡಪ್ರಭ ಹೀಗೆ ಅನೇಕ ಪತ್ರಿಕೆಗಳಲ್ಲಿ ಕೆಲಸ ಮಾಡುತ್ತಾ ಎಲ್ಲಿಯೂ ದಕ್ಕದೆ ಕಪ್ಪು ಸುಂದರಿ ಹಾಯ್ ಬೆಂಗಳೂರ್ ಆರಂಭಿಸಿ ಬದುಕಿಗೆ ತಿರುವು ಪಡೆದುಕೊಂಡರು.ಅದು ಅವರ ಕೈ ಹಿಡಿಯಿತು.ಅವರು ಮೊದಲ ಮಾರುತಿ ೮೦೦ ಕಾರುಕೊಂಡ ದಿನ ಅವರು ಜೊತೆ ಇದ್ದು ನಾನೇ ಸ್ವೀಟ್ ಕೊಟ್ಟಿದ್ದೆ.ಅಲ್ಲಿಂದ ಆರಂಭವಾದ ನಮ್ಮ ಬಾಂಧವ್ಯ ಬೆಳೆಯುತ್ತಲೇ ಹೋಯಿತು.ನಾನು ಪತ್ರಿಕೆಯ ಒಂದು ಭಾಗ ಅನ್ನುವಷ್ಟು ನಿರಂತರವಾಗಿ ನನ್ನ ಬರಹಗಳು ಪ್ರಕಟ ಆಗುತ್ತಲೇ ಹೋದವು.

ನನ್ನ ಹೆಗಲ ಮೇಲೆ
ಕಂಬಳಿ ಇತ್ತು
ಕೈಯಲ್ಲಿ ಇತ್ತು ಕೊಳಲು
ನಾನು ಎಲ್ಲೂ ಹೋಗಿರಲಿಲ್ಲ
ಮಲಗಿರಲೂ ಇಲ್ಲ
ನನ್ನ ಹೆಗಲ ಮೇಲೆ
ಹೆಣವನಿಟ್ಟವರಾರು
ಕೈಯಲ್ಲಿ ಬಂದುಕು
ಕೊಟ್ಟವರಾರು.

🙏ಕವಿ ಮಿಂದರ್
ಪಂಜಾಬ್

ನನ್ನ ಪಂಚನದಿಗಳ ನಾಡಿನಲ್ಲಿ ಪ್ರವಾಸ ಕಥನ ದ ಈ ಕವಿತೆ ಯುದ್ಧ ವರದಿಗೆ ಆಫ್ಘಾನಿಸ್ತಾನ ಹೋದಾಗ ಇದನ್ನು ಉಲ್ಲೇಖಿಸಿ ಅಲ್ಲಿಂದಲೇ ತಮ್ಮ ವರದಿ ತಮ್ಮ ಪತ್ರಿಕೆ ಬರೆದು ಅಫ್ಘಾನಿಸ್ತಾನದ ಪರಸ್ಥಿತಿ ಸಿದ್ಧರಾಮ ಹೊನ್ಕಲ್ ಅವರು ಅವರ ಕೃತಿಯಲ್ಲಿ ಉಲ್ಲೇಖಿಸಿದ ಕವಿತೆಯಂತಿದೆ ಎಂದು ಬರೆದು ನನಗೆ ಅಪಾರ ಹೆಸರು ತಂದಿದ್ದರು.
ಅವರಿಗೆ ಶಹಾಪುರ ಸಾಹಿತ್ಯ ಸಮ್ಮೇಳನಕ್ಕೆ ಸರ್ವಾಧ್ಯಕ್ಷತೆ ವಹಿಸಿದಾಗ ಅಹ್ವಾನಿಸಿದ್ದೆ.ಆದರೆ‌ ಆಗಲೇ ಅವರ ಆರೋಗ್ಯ ಕೈ ಕೊಡುತ್ತಾ ಬಂದಿದ್ದರಿಂದ ಬರಲು ಒಪ್ಪಲಿಲ್ಲ.ಆದರೆ ಬೆಂಗಳೂರು ಹೋದಾಗ ಮೂರು ನಾಲ್ಕು ದಿನ ಇದ್ದರೆ ಅದರಲ್ಲಿ ಒಂದು ದಿನ ಅವರ ಜೊತೆ ಭೇಟಿ ಮಾಡುವುದಿತ್ತು.

ಬೆಂಗಳೂರು ಇದ್ದಾಗ ಒಮ್ಮೆ ಫೋನು ಮಾಡಿ ಅಳಿಯ ಮಗಳು ಎಲ್ಲರೂ ಬನ್ನಿ ಅಂತ ಕರೆದಿದ್ದರು.ಎಲ್ಲರೂ ಹೋಗಿ ಬಂದಿದ್ದೇವು.ನಿಮ್ಮ ಮನೆಗೆ ರೊಟ್ಟಿ ಉಣ್ಣಲು ಬರುವೆ ಅಂತ ನನ್ನ ಹೆಣ್ಣು ಮಕ್ಕಳಿಗೆ ಅಳಿಯಂದಿರುಗಳಿಗೆ ಹೇಳಿದ್ದರು.ನನ್ನ ಮಗ ಬಸವಪ್ರಭು ಗೆ ಎಂ.ಎ.ಜರ್ನಾಲಿಸಂ ಮುಗಿಸಿ ಬಂದು ಭೇಟಿಯಾಗು.ನಿನಗೆ ಮಿಡಿಯಾದಲ್ಲಿ ಉದ್ಯೋಗ ಕೊಡಿಸುವೆ ಅಂತ ಅವನ ಹೆಗಲ ಮೇಲೆ ಕೈ ಹಾಕಿ ಹೇಳಿ ಧೈರ್ಯ ತುಂಬಿದ್ದರು.

ಕಥೆ ಕವನ ಗಜಲ್ ಕಾದಂಬರಿ ಪತ್ರಿಕಾ ಬರಹ ಖಾಸಬಾಥ್,ಹಸಿರು ಲಂಗದ ಹುಡುಗಿ, ಚಲನಚಿತ್ರ, ಕ್ರೈಮ್ ಡೈರಿ, ಟಿವಿ. ಹೀಗೆ ಏನೆಲ್ಲದರ ಜೊತೆ ಜೊತೆಗೆ ಪ್ರಾರ್ಥನಾ ಶಾಲೆ ಆರಂಭಿಸಿ ಬಹುದೊಡ್ಡ ಶಿಕ್ಷಣ ಸಂಸ್ಥೆ ಕಟ್ಟಿ ನಿಲ್ಲಿಸಿದ್ದಾರೆ.ಇಪ್ಪತ್ತು ಪೈಸೆಯ ಒಂದು ರಿಫೀಲ್ ಹಿಡಿದು ಬರೆದ ಬರಹಗಾರ ಐದುನೂರು ಕೋಟಿಯ ಅಸ್ಥಿ ಘೋಷಣೆ ಮಾಡಿಕೊಳ್ಳುವ ಮಟ್ಟಕ್ಕೆ ಬೆಳೆದಿದ್ದು ಕನ್ನಡ ಸಾಹಿತ್ಯ ಹಾಗೂ ಪತ್ರಿಕಾ ಲೋಕದಲ್ಲೆ ಒಂದು ಲೆಜೆಂಡ್ ಅಂದ್ರೆ ತಪ್ಪಿಲ್ಲ.

ಬಹುಮುಖ ಪ್ರತಿಭೆ.ಏನೂ ಬರೆದರೂ ಅದು ಓದಿಸಿಕೊಂಡು ಹೋಗುವಂತೆ,ಪ್ರೇಮದ ಹುಡಿ ಮೈಮನಗಳಿಗೆ ಅಂಟಿಕೊಳ್ಳುವಂತೆ ಬರೆಯುತ್ತಿದ್ದ ಅಕ್ಷರ ಮಾಂತ್ರಿಕ.ಆತ ನನಗೆ ಖಾಸಗಿ ಸ್ನೇಹಿತ ಅನ್ನೋ ಹೆಮ್ಮೆ ನನ್ನಂಥವರದು.ಓ..ಮನಸೇ ಆರಂಭವಾದಾಗ ಉದ್ಯೋಗ ಬಿಟ್ಟು ಬಂದುಬಿಡು ನಿನಗೆ ವಹಿಸುವೆ ಅಂದದುಂಟು.ಆದರೆ ನನಗೆ ನಾನಿರುವ ಪ್ರಪಂಚ ಬಿಟ್ಟು ಹೋಗುವ ಮನಸು ಇರಲಿಲ್ಲ.ಇಷ್ಟೆ ಸಾಕು ಎಂಬ ತೃಪ್ತಿ ನನ್ನದು.ಹಾಗಾಗಿ ನಾ ಎಂದು ಹೋಗಲಿಲ್ಲ.

ಅಂತಹ ರವಿ ಬೆಳಗೆರೆ ಗೆ ತುಂಬಾ ಜೀವನೋತ್ಸಾಹ ಇತ್ತು. ಸಾರ್ , ನೀವು ಖುಷ್ವಂತ್ ಸಿಂಗ್ ರಂತೆ ನೂರು ವರ್ಷಗಳ ಕಾಲ ಬರೀತಾ ಬದುಕುವೀರಿ, ಅಂದಾಗಲೆಲ್ಲ ತುಂಬಾ ಖುಷಿ ಪಡೋರು.ಹೌದೋ ಹೊನ್ಕಲ್, ನನಗೆ ಅದೇ ಆಸೆ ಇದೆ ಅನ್ನೋರು.ಆದರೆ ಸಾವು ಎಲ್ಲಿ ಹೊಂಚಿ ಕುಳಿತಿತ್ತೋ ಇಂದು ಧುತ್ತನೆ ಆವರಿಸಿಕೊಂಡು ಕರೆದೊಯ್ದಿದೆ. ಮನಸು ಈಗ ತುಂಬಾ ಭಾರ.ಒಂದು ಕೃತಿಗಾಗುವಷ್ಟು ನೆನಪುಗಳಿವೆ.ಆದರೆ ಬರೆಯಲು ನೋವು ಅಡ್ಡವಾಗುತ್ತಿವೆ.ಎಂದೂ ಮರೆಯದ ಹಾಡಿನಂತೆ ಈ ರವಿ ಬೆಳಗೆರೆಯವರು ನನಗೆ ಎಂದು ಮರೆಯದ ಹಾಡಿನಂತೆ ಕಾಡುವರು.

-ಸಿದ್ಧರಾಮ ಹೊನ್ಕಲ್

ವಿಳಾಸಃ ಕಾವ್ಯಾಲಯ,ಲಕ್ಷೀನಗರ, ಶಹಾಪುರ.ಯಾದಗೀರ ಜಿಲ್ಲೆ.೯೯೪೫೯೨೨೧೫೧.

Related Articles

Leave a Reply

Your email address will not be published. Required fields are marked *

Back to top button