ಕೈ ತೋಟ, ತಾರಸಿ ತೋಟ ಅಭಿವೃದ್ಧಿಗೆ ತರಬೇತಿ ಪರಿಕರ ವಿತರಣೆ
ತೋಟಗಾರಿಕೆ ಯೋಜನೆಯ ಸೌಲಭ್ಯ ಬಳಸಿಕೊಳ್ಳಿಃ ಶಿರವಾಳ
ಯಾದಗಿರಿಃ ತೋಟಗಾರಿಕೆ ಇಲಾಖೆಯಲ್ಲಿ ದೊರೆಯುವ ಯೋಜನೆಗಳ ಸಮರ್ಪಕ ಸೌಲಭ್ಯ ಬಳಸಿಕೊಂಡು ಆರೋಗ್ಯಕರ ವಾತಾವರಣ ನಿರ್ಮಿಸುವ ಜತೆಗೆ ಸತ್ವಯುತ ತರಕಾರಿ ಬೆಳೆದು ಸೇವಿಸುವಲ್ಲಿ ಮನೆಯ ಸದಸ್ಯರ ಆರೋಗ್ಯವು ವೃದ್ಧಿಯಾಗಲಿದೆ ಎಂದು ಶಾಸಕ ಗುರು ಪಾಟೀಲ್ ತಿಳಿಸಿದರು.
ಜಿಲ್ಲೆಯ ಶಹಾಪುರ ನಗರದ ಹಳಿಸಗರ ಬಡಾವಣೆಯಲ್ಲಿ 2017-18 ನೇ ಸಾಲಿನ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ಕೈ ತೋಟ ಮತ್ತು ತಾರಸಿ ತೋಟಗಳ ಅಭಿವೃದ್ಧಿ ಕುರಿತು ಆಯೋಜಿಸಿದ್ದ ತರಬೇತಿ ಮತ್ತು ಪರಿಕರ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಆರೋಗ್ಯ ಸಾವಯವ ಮೂಲಕ ಮನೆಯ ಕೈತೋಟದಲ್ಲಿ ಬೆಳೆಯುವ ತರಕಾರಿ ಕುರಿತು ನೀಡುವ ತರಬೇತಿಯಲ್ಲಿ ಭಾಗವಹಿಸಿ, ಉತ್ತಮ ಸಲಹೆ ಪಡೆದುಕೊಂಡು ಅದರಂತೆ ಕೈ ತೋಟ ಅಭಿವೃದ್ಧಿ ಪಡಿಸಬೇಕು. ಅಲ್ಲದೆ ತೋಟಗಾರಿಕೆ ಇಲಾಖೆ ನೀಡುವ ಪರಿಕರಗಳನ್ನು ಬಳಸಿಕೊಂಡು ಉತ್ತಮ ಆರೋಗ್ಯ ವೃದ್ಧಿ ಪಡಿಸಿಕೊಳ್ಳಬಹುದು.
ಕೈ ತೋಟ ಅಭಿವೃದ್ಧಿಗೆ ಬೇಕಾದ ಸಹಕಾರ ಇಲಾಖೆ ನೀಡಲಿದೆ. ಪರಿಸರ ಕಾಳಜಿ ಜತೆಗೆ ಉತ್ತಮ ಆಹಾರ ಬೆಳೆಯಬಲ್ಲದು. ಇದರಿಂದ ಸರ್ವ ರೀತಿಯಲ್ಲಿ ಉಪಯೋಗವಿದೆ. ಮಹಿಳೆಯರು, ಮಕ್ಕಳು ಕೈ ತೋಟದಲ್ಲಿ ಹೆಚ್ಚಿನ ಆಸಕ್ತಿವಹಿಸಿದ್ದಲ್ಲಿ ಸರ್ವ ರೀತಿಯಿಂದಲೂ ಲಾಭದಾಯಕವಿದೆ ಎಂದರು.
ಯಾದಗಿರಿ ತೋಟಗಾರಿಕೆ ವಿಸ್ತರಣ ಘಟಕದ ಮುಖ್ಯಸ್ಥ ಡಾ.ರೇವಣಪ್ಪ ಮಾತನಾಡಿ, ಕೈ ತೋಟ ಮತ್ತು ತಾರಸಿ ತೋಟಗಳ ಬಗ್ಗೆ ಮಾಹಿತಿ ಮತ್ತು ತರಕಾರಿ ಬೆಳೆಗಳನ್ನು ಸ್ವತಃ ಸಾವಯುವ ಪದ್ದತಿಯಲ್ಲಿ ಉತ್ಪಾದಿಸಲು ಸಾವಯುವ ಉಳಿಕೆ ಪದಾರ್ಥಗಳನ್ನು ಬಳಸಿಕೊಂಡು ಎರೆಹುಳು ಗೊಬ್ಬರ, ಕಾಂಪೋಸ್ಟ್ ಇತ್ಯಾದಿಗಳನ್ನು ತಯಾರಿಸಿಕೊಂಡು ಮರು ಬಳಕೆ ಮಾಡುವ ಬಗ್ಗೆ ತಾಂತ್ರಿಕ ಮಾರ್ಗದರ್ಶನ ನೀಡಿದರು.
ತೋಟಗಾರಿಕೆ ಉಪ ನಿರ್ದೇಶಕ ಮಲ್ಲಿಕಾರ್ಜುನ ಬಾಬು, ಸಹಾಯಕ ನಿರ್ದೇಶಕ ನೀಲಪ್ಪ, ತೋಟಗಾರಿಕೆ ಯೋಜನೆಯ ಮಹತ್ವ ಮತ್ತು ಪರಿಕರಗಳ ಉಪಯೋಗದ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯೆ ಮರಳಮ್ಮ ಮಲ್ಲಣ್ಣ ಗುತ್ತೇದಾರ್, ಬಿಜೆಪಿ ನಗರ ಅಧ್ಯಕ್ಷ ಲಾಲನಸಾಬ ಖುರೇಶಿ, ಹಣಮಂತ ಯಕ್ಷಂತಿ, ರವಿಯಪ್ಪ ದಣಿ, ಮಲ್ಲು ದೇಸಾಯಿ, ಶಾಂತಪ್ಪ ಗುತ್ತೇದಾರ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಫಲಾನುಭವಿಗಳಿಗೆ ವಿವಿಧ ಪರಿಕರಗಳನ್ನು ವಿತರಣೆ ಮಾಡಲಾಯಿತು.
ತೋಟಗಾರಿಕೆ ಅಧಿಕಾರಿ ಶಶಿಕಾಂತ್ ಗುತ್ತೇದಾರ ನಿರೂಪಿಸಿದರು. ಭೀಮರಾವ್ ಸ್ವಾಗತಿಸಿ ವಂದಿಸಿದರು.




