ತ್ಯಾಗ, ಬಲಿದಾನ ನೀಡಿದ ಮಹಾತ್ಮರ ಸ್ಮರಣೆ ಅಗತ್ಯ-ದರ್ಶನಾಪುರ
ತಾಲೂಕಾ ಆಡಳಿತ 73ನೇಯ ಸ್ವಾತಂತ್ರ್ಯ ದಿನಾಚರಣೆ
ಯಾದಗಿರಿ,ಶಹಾಪುರಃ ಮಹಾತ್ಮಗಾಂಧೀಜಿ ಸೇರಿದಂತೆ ಹಲವಾರು ಮಹಾತ್ಮರ ನಾಯಕರ ನೇತೃತ್ವದಲ್ಲಿ ಹೋರಾಟ, ಅಹಿಂಸಾತ್ಮಕ ಚಳುವಳಿ ನಡೆಸುವ ಮೂಲಕ ಬ್ರಿಟಿಷರ ಕಪಿ ಮುಷ್ಟಿಯಲ್ಲಿದ್ದ ಭಾರತವನ್ನು ಸ್ವಾತಂತ್ರ್ಯಗೊಳಿಸುವಲ್ಲಿ ಯಶಸ್ವಿಯಾಯಿತು. ಸ್ವಾತಂತ್ರ್ಯಕ್ಕಾಗಿ ಹಲವಾರು ನಾಯಕರು ಬಲಿದಾನ ನೀಡಿದ್ದಾರೆ. ಅಂತವರ ಸ್ಮರಣೆ ಅಗತ್ಯವಿದೆ ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ತಿಳಿಸಿದರು.
ನಗರದ ಸಿಪಿಎಸ್ ಶಾಲಾ ಮೈದಾನದಲ್ಲಿ 73 ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ತಾಲೂಕಾ ಆಡಳಿತ ಆಯೋಜಿಸಿದ್ದ ಸ್ವಾತಂತ್ರ್ಯ ದಿನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಶ್ರಮಿಸಿದ ದೇಶದ ಮಹಾನ್ ನಾಯಕರ ಸ್ಮರಣೆ ಮಾಡುವದಲ್ಲದೆ, ಮಕ್ಕಳಿಗೆ ದಿನ ನಿತ್ಯ ಸ್ವಾತಂತ್ರ್ಯ ದೊರೆಯಲು ಹೋರಾಡಿದ ತಮ್ಮ ಜೀವನವನ್ನೆ ಮುಡಿಪಿಟ್ಟ ಮಹಾತ್ಮರ ಕುರಿತು ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು.
ವಿದ್ಯಾರ್ಥಿಗಳಲ್ಲಿ ದೇಶ ಪ್ರೇಮವನ್ನು ಬೆಳೆಸಬೇಕು. ದೇಶದ ಪ್ರಗತಿಗೆ ಪೂರಕ ವಾತಾವರಣ ನಿರ್ಮಾಣ ಮಾಡಬೇಕು. ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಮಕ್ಕಳನ್ನು ಶಿಕ್ಷಣದಿಂದ ವಂಚಿತರಾದಲ್ಲಿ, ಮುಂದೆ ಅವರ ಬದುಕು ದುಸ್ತರವಾದೀತು ಎಂದು ಎಚ್ಚರಿಸಿದರು.
ತಹಶೀಲ್ದಾರ ಸಂಗಮೇಶ ಜಿಡಗೆ ದ್ವಜಾರೋಹಣ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಗ ಗಳಿಸಿದ ತಾಲೂಕಿನ ಐದು ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪಟ್ಯಾಪ ನೀಡಿ ಸನ್ಮಾನಿಸಿದರು.
ಶಿರವಾಳ ಮುರಾರ್ಜಿ ವಸತಿ ಶಾಲಾ ವಿದ್ಯಾರ್ಥಿಗಳಿಂದ ಮಲ್ಲಕಂಭ ಯೋಗಾಸನ ಪ್ರದರ್ಶನ ಜರುಗಿತು.
ಇದೇ ಸಂದರ್ಭದಲ್ಲಿ ಮಕ್ಕಳಿಂದ ಸಂತ್ರಸ್ತರಿಗಾಗಿ ಸಂಗ್ರಹಿಸಿದ ಪರಿಹಾರ ನಿಧಿಯನ್ನು ತಹಶೀಲ್ದಾರರಿಗೆ ಒಪ್ಪಿಸಲಾಯಿತು. ತಾಪಂ ಅಧ್ಯಕ್ಷ ಬಸವಂತ್ರರಡ್ಡಿ ಸಾಹು, ತಾಪಂ ಇಓ ಪಂಪಾಪತಿ ಹಿರೇಮಠ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ರಾಹುತಪ್ಪ ಹವಲ್ದಾರ, ಪೌರಾಯುಕ್ತ ಬಸವರಾಜ ಶಿವಪೂಜೆ, ಸಿಪಿಐ ಹಣಮಂತರಡ್ಡೆಪ್ಪ, ಕೃಷಿಕ ಸಮಾಜದ ಅಧ್ಯಕ್ಷ ಬಸನಗೌಡ ಮರಕಲ್, ಮಾಣಿಕರಡ್ಡಿ ಗೋಗಿ, ಚಂದ್ರಶೇಖರ ಲಿಂಗದಳ್ಳಿ, ಬಿಸಿಎಂ ಅಧಿಕಾರಿ ಸೋಮಶೇಖರ ಉಪಸ್ಥಿತರಿದ್ದರು.
ನೆರೆ ಸಂತ್ರಸ್ತರಿಗೆ ಸಾಂತ್ವಾನ 1 ಲಕ್ಷ ರೂ. ಚಕ್ ವಿತರಣೆ
ನೆರೆ ಹಾವಳಿಗೆ ತುತ್ತಾದ ನದಿ ತಟದ ಗ್ರಾಮದ ನಿರಾಶ್ರಿತರು ಕಳೆದ ಒಂದು ತಿಂಗಳಿಂದ ಕಾಳಜಿ ಕೇಂದ್ರಗಳಲ್ಲಿ ವಾಸ ಮಾಡುವ ಸ್ಥಿತಿ ನಿರ್ಮಾಣವಾದ್ದರಿಂದ, ಸಂತ್ರಸ್ತರ ಸಮ್ಮುಖದಲ್ಲಿ ರಾಷ್ಟ್ರೀಯ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುವ ಬದಲು ಸರಳತೆಯಿಂದ ಆಚರಿಸಬೇಕೆಂದು ನಿರ್ಧರಿಸಿರುವ ಕಾರಣ ಸ್ವಾತಂತ್ರ್ರ್ಯ ದಿನಾಚರಣೆ ಸಮಾರಂಭವನ್ನು ಸರಳತಯಿಂದ ಆಚರಿಸಲಾಗುತ್ತಿದೆ ಎಂದು ಶಾಸಕ ದರ್ಶನಾಪುರ ತಿಳಿಸಿದರು.
ಅಲ್ಲದೆ ಇದೇ ಸಂದರ್ಭದಲ್ಲಿ ಸಂತ್ರಸ್ತರ ಪರಿಹಾರ ನಿಧಿಗೆ ಮಹಾ ಸಾಧ್ವಿ ಮಾತೇ ಹೇಮರಡ್ಡಿ ಮಲ್ಲಮ್ಮ ಸೌಹಾರ್ಧ ಸಹಕಾರ ಬ್ಯಾಂಕ್ ವತಿಯಿಂದ 1 ಲಕ್ಷ ರೂ. ಚಕ್ ವಿತರಿಸಿದರು. ಅಲ್ಲದೆ ಸರ್ಕಾರ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಬೇಕು. ವಿವಿಧ ಸಂಘ ಸಂಸ್ಥೆಗಳು ಸಹಾಯ ಹಸ್ತ ಚಾಚುವ ಮೂಲಕ ಸಂತ್ರಸ್ತರು ಪುನಃ ಬದಕನ್ನು ಕಟ್ಟಿಕೊಳ್ಳಲು ಸಹಕರಿಸಬೇಕು ಎಂದು ಕರೆ ನೀಡಿದರು.