ಪ್ರಮುಖ ಸುದ್ದಿ

ಐಟಿ ದಾಳಿ ಹಿಂದಿದೆ ಸಿಎಂ ‘ಕೈ’ವಾಡ!?

ಇಂದು ಸಚಿವ ಸ್ಥಾನಕ್ಕೆ ಡಿಕೆಶಿ ರಾಜೀನಾಮೆ?

ಡಿಕೆಶಿ ಅಮ್ಮ ಗೌರಮ್ಮ ಹೇಳಿದ್ದೇನು ಗೊತ್ತಾ?

‘ಆ ಸಿದ್ಧರಾಮಯ್ಯ ತಲೆಯಲ್ಲಿ ಏನಿಟ್ಟುಕೊಂಡಿದ್ದಾನೋ ಏನೋ ಗೊತ್ತಿಲ್ಲ. ಅಲ್ಲಲ್ಲೇ ಕತ್ತಿ ಮಸೀತಾನೆ. ನನ್ನ ಮಕ್ಕಳಿಂದಲೇ ಎಲ್ಲಾ ಕೆಲಸ ಮಾಡಿಸಿಕೊಳ್ಳುತ್ತಾನೆ. ನಂಬಿಸಿ, ನಂಬಿಸಿ ಕತ್ತು ಕೊಯ್ಯುತ್ತಾನೆ. ನನ್ನ ಮಕ್ಕಳಿಂದಲೇ ಮುಂದೆ ಬಂದಿದ್ದಾನೆ. ಆದರೆ, ನನ್ನ ಮಗ ಸಂಕಷ್ಟಕ್ಕೆ ಸಿಲುಕಿದಾಗ ಒಂದು ಮಾತಾಡಿಲ್ಲ. ಮುಖ್ಯಮಂತ್ರಿಯಾಗಿ ಐಟಿ ದಾಳಿ ಬಗ್ಗೆ ಪ್ರಶ್ನಿಸಿಲ್ಲ. ಐಟಿ ದಾಳಿ ಹಿಂದೆ ಸಿಎಂ ಕೈವಾಡವೂ ಇರಬಹುದು’ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರ ತಾಯಿ ಗೌರಮ್ಮ ಅವರು ಆರೋಪಿಸಿದ್ದಾರೆ.

ಖಾಸಗಿ ವಾಹಿನಿಯೊಂದಕ್ಕೆ ಪ್ರತಿಕ್ರಿಯಿಸಿರುವ ಅವರು ಸಿದ್ಧರಾಮಯ್ಯ ವಿರುದ್ಧ ಹರಿಹಾಯ್ದಿದ್ದಾರೆ. ಅಂತೆಯೇ ‘ಇನ್ನೇನು ಚುನಾವಣೆ ಬಂದಿದೆ. ನಾವೇನು ಮಾತಾಡೋದು ಉಳಿದಿಲ್ಲ. ಕಾದು ನೋಡಲಿ ಮುಂದಕ್ಕೆ ದೇವರೇನು ಮಾಡ್ತಾನೆ. ಸಿದ್ದರಾಮಯ್ಯನೂ ನೋಡಲಿ ಬಿಜೆಪಿಯವರೂ ನೋಡಲಿ ಮುಂದೆ ಗೊತ್ತಾಗಲಿದೆ’ ಎಂದು ಗೌರಮ್ಮ ಅವರು ಹೇಳಿದ್ದಾರೆ.

ಸಚಿವ ಡಿ.ಕೆ.ಶಿವಕುಮಾರ್ ಮನೆ ಮೇಲೆ ದಾಳಿ ನಡೆಯುವ ಮುನ್ನ ಮೂರು ದಿನಗಳ ಕಾಲ ಸಿಎಂ ಸ್ವಗೃಹದಿಂದ ಹೊರಬಂದಿರಲಿಲ್ಲ. ಅಲ್ಲದೆ ಈವರೆಗೆ ಐಟಿ ದಾಳಿ ಬಗ್ಗೆ ಜೋರಾಗಿ ಧ್ವನಿ ಎತ್ತಿಲ್ಲ ಎಂದು ಡಿಕೆಶಿ ಅಭಿಮಾನಿಗಳು ಅನುಮಾನದಿಂದ ಮಾತನಾಡಿಕೊಳ್ಳುತ್ತಿದ್ದಾರೆ. ಇದೇ ವೇಳೆ ಸಿಎಂ ಸಿದ್ಧರಾಮಯ್ಯ ಇಂದು ತುರ್ತಾಗಿ ಸಚಿವ ಸಂಪುಟ ಸಭೆ ಕರೆದಿದ್ದಾರೆ.

ಸಂಪುಟ ಸಭೆಯಲ್ಲಿ ಸಚಿವ ಡಿಕೆಶಿ ಅವರ ರಾಜೀನಾಮೆ ಪಡೆಯುವ ಬಗ್ಗೆಯೂ ಚರ್ಚೆ ನಡೆಯಲಿದೆ. ಸಿಎಂ ಸಿದ್ಧರಾಮಯ್ಯ ಅವರು ಡಿಕೆಶಿ ರಾಜೀನಾಮೆ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ. ಸಚಿವ ಡಿಕೆಶಿ ಬಂಧನ ಸಾಧ್ಯತೆ ಹಾಗೂ ಪಕ್ಷಕ್ಕೆ ಮುಜುಗರ ತಪ್ಪಿಸುವ ಹಿನ್ನೆಲೆಯಲ್ಲಿ ಸಚಿವ ಡಿಕೆಶಿ ರಾಜೀನಾಮೆ ಪಡೆಯುವ ನಿರ್ಧಾರ ಕೈಗೊಳ್ಳಬಹುದು ಎಂಬುದು ರಾಜಕೀಯ ಪಂಡಿತರ ಲೆಕ್ಕಾಚಾರವಾಗಿದೆ.

ಆದರೆ, ಸಿಎಂ ಸಿದ್ಧರಾಮಯ್ಯ ಅವರು ಸಚಿವ ಡಿಕೆಶಿ ರಾಜೀನಾಮೆ ಪಡೆಯಲಿದ್ದಾರೆಯೇ ಅಥವಾ ಡಿಕೆಶಿ ಬೆಂಬಲಕ್ಕೆ ನಿಂತು ಹೋರಾಟಕ್ಕೆ ಸಜ್ಜಾಗಲಿದ್ದಾರೆಯೇ ಎಂಬುದನ್ನು ಸಂಪುಟ ಸಭೆ ಮುಗಿಯುವವರೆಗೂ ಕಾದು ನೋಡಬೇಕಿದೆ.

Related Articles

2 Comments

Leave a Reply

Your email address will not be published. Required fields are marked *

Back to top button