ಶಹಾಪುರಃ ಕಾಲುವೆಯಲ್ಲಿ ದೈತ್ಯ ಪ್ರಾಣಿ ಪ್ರತ್ಯಕ್ಷ.! ಅದ್ಯಾವ ಪ್ರಾಣಿ ಹೇಗೆ ಬಂತು.?
ಕಾಲುವೆಯಲ್ಲಿ ಹರಿದು ಬಂದ ದೈತ್ಯ ಪ್ರಾಣಿ, ಹೃದಯಾಘಾತದಿಂದ ಸಾವು
ಶಹಾಪುರಃ ಕಾಡುಕೋಣ ಪತ್ತೆ, ವಶಕ್ಕೆ ಪಡೆದ ಕ್ಷಣಾರ್ಧದಲ್ಲಿ ಹೃದಯಾಘಾತದಿಂದ ಸಾವು
ಕಾಲುವೆಯಲ್ಲಿ ಹರಿದು ಬಂದ ದೈತ್ಯ ಕಾಡುಕೋಣ, ಹೃದಯಾಘಾತದಿಂದ ಸಾವು
yadgiri, ಶಹಾಪುರಃ ಎಸ್ಬಿಸಿ ಕಾಲುವೆಯಲ್ಲಿ ದೈತ್ಯ ಕಾಡುಕೋಣವೊಂದು ಕಾಲುವೆ ನೀರಲ್ಲಿ ಪ್ರತ್ಯಕ್ಷವಾಗಿದ್ದು, ಹರಿದು ಸಾಗುತ್ತಿರುವದು ಕಂಡ ಗ್ರಾಮದ ಜನರು ಹಗ್ಗದಿಂದ ಅದನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದು, ಅರಣ್ಯ ಇಲಾಖೆ ಅಧಿಕಾರಿಗಳ ತಂಡದ ಸಹಾಯದಿಂದ ಕಾಡುಕೋಣ ಹೊರಗಡೆ ತೆಗೆಯಲಾಗಿತ್ತು. ಅದನ್ನು ಬಂಧಿಸಿ ವಾಹನವೊಂದರಲ್ಲಿ ಚಿಕಿತ್ಸೆಗೆಂದು ಪಶು ಆಸ್ಪತ್ರೆಗೆ ತರುವಾಗ ಮಾರ್ಗ ಮಧ್ಯ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ನಡೆದಿದೆ.
ತಾಲೂಕಿನ ವನದುರ್ಗ ದಿಂದ ಹೊಸಕೇರಾ ಮಧ್ಯದ ಎಸ್ಬಿಸಿ ಕಾಲುವೆಯಲ್ಲಿ ಕಾಡುಕೋಣ ಹರಿದು ಸಾಗುತ್ತಿರುವದು ಕಂಡು ಗಾಬರಿಗೊಂಡ ಗ್ರಾಮದ ಶಿವರಾಜ ವನದುರ್ಗ ಹಾಗೂ ಇತರರು ಅರಣ್ಯ ಇಲಾಖೆಗೆ ವಿಷಯ ತಿಳಿಸಿದ್ದಾರೆ.
ತಕ್ಷಣಕ್ಕೆ ಸ್ಥಳಕ್ಕೆ ಆಗಮಿಸಿದ ಸುರಪುರ ಪ್ರಾದೇಶಿಕ ಅರಣ್ಯ ಇಲಾಖೆಯ ವಲಯ ಅರಣ್ಯ ಅಧಿಕಾರಿ ಮೌಲಾಲಿಸಾಬ ನೇತೃತ್ವದ ತಂಡ ಗ್ರಾಮಸ್ಥರೊಂದಿಗೆ ಹರಸಾಹಸ ಪಟ್ಟು ಕಾಡುಕೋಣವನ್ನು ಸೆರೆ ಹಿಡಿದು ಚಿಕಿತ್ಸೆಗೆಂದು ಸಾಗಿಸುವ ಮಾರ್ಗ ಮಧ್ಯದಲ್ಲಿ ಸಾವನ್ನಪ್ಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಾಡುಕೋಣ ವಶಕ್ಕೆ ಪಡೆಯಲು ಉಪ ವಲಯ ಅರಣ್ಯಾಧಿಕಾರಿ ಕಾಶಪ್ಪ, ಸಿದ್ದಣ್ಣ ಗಸ್ತು ಪಾಲಕ ಹಾಗೂ ಅರಣ್ಯ ವೀಕ್ಷಕರಾದ ದುರ್ಗಣ್ಣ, ಭೀಮರಡ್ಡಿ ಹಾಗೂ ಗ್ರಾಮಸ್ಥರು ಇದ್ದರು.
ಕಾಡುಕೋಣ ಈ ಭಾಗದಲ್ಲಿ ಎಲ್ಲೂ ಕಂಡು ಬರುವದಿಲ್ಲ. ಅಂತಹ ಅರಣ್ಯವು ಇಲ್ಲಿಲ್ಲ. ಇದು ಎಲ್ಲೋ ಬೇರೆ ಕಡೆಯಿಂದ ಕಾಲುವೆಯಲ್ಲಿ ಬಿದ್ದಿದ್ದು, ಮೇಲೇರಲು ಆಗದೆ ಸುಮಾರು ಕೀ.ಮೀನಿಂದ ಹರಿದುಕೊಂಡು ಈಜುತ್ತಾ ಬಂದಿದೆ. ಬಹಳ ಸೂಕ್ಷ್ಮ ಪ್ರಾಣಿ ಇದಾಗಿದ್ದರಿಂದ ಜನರ ಗದ್ದಲಕ್ಕೆ ಗಾಬರಿಗೊಂಡಿದ್ದು, ಹೃದಯಾಘಾತವಾಗಿ ಮೃತಪಟ್ಟಿದೆ. ಮೃತ ಪ್ರಾಣಿ ದೇಹವನ್ನು ಅರಣ್ಯ ಇಲಾಖೆ ನಿಯಮದಂತೆ ಸುಡಲಾಗುತ್ತದೆ.
–ಕಾಶಪ್ಪ. ಉಪ ಅರಣ್ಯ ವಲಯಾಧಿಕಾರಿಗಳು. ಶಹಾಪುರ.
ಕಾಡುಕೋಣ ಸಾಕು ಪ್ರಾಣಿ ಅಲ್ಲ. ಅರಣ್ಯದಲ್ಲಿ ಜೀವಿಸುವಂತ ಪ್ರಾಣಿ. ಜನರ ಗದ್ದಲ ನಡುವೆ ಗಾಬರಿಗೊಂಡಿದೆ. ಮರಣೋತ್ತರ ಪರೀಕ್ಷೆ ನಡೆಸಲಾಗಿ ಹೃದಯಾಘಾತದಿಂದ ಮೃತಪಟ್ಟಿದೆ. ಕಾಲುವೆಗೆ ಬಿದ್ದು, ನೀರು ಕುಡಿದು ಮೇಲೆ ಬರಲಾಗದೆ ಪರದಾಡುತ್ತಾ, ಆಹಾರವಿಲ್ಲದೆ ಹರಿದು ಬಂದಿರಬಹುದು. ಕೊನೆಗೆ ಜನರು ನೋಡಿ ಗ್ರಾಮಸ್ಥರ ಸಹಾಯದಿಂದ ಅರಣ್ಯ ಇಲಾಖೆಯ ಅಧಿಕಾರಿಗಳ ತಂಡ ಇದನ್ನು ಹೊರ ತೆಗೆದಿದ್ದಾರೆ. ಆದರೆ ದುರಾದೃಷ್ಟವಶಾತ್ ಕಾಡುಕೋಣ ಮೃತಪಟ್ಟಿದೆ.
–ಡಾ.ರಾಜೂ ರಾಠೋಡ. ವೈದ್ಯಾಧಿಕಾರಿ ಪಶು ಆಸ್ಪತ್ರೆ. ಶಹಾಪುರ.