ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕೆ ಸರ್ವರ ಸಹಕಾರ ಅಗತ್ಯ-ನ್ಯಾ.ಓಕಾ
ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕೆ ಸರ್ವರ ಸಹಕಾರ ಅಗತ್ಯ-ನ್ಯಾ.ಓಕಾ
ಯಾದಗಿರಿ– ವಿಳಂಬವಾಗಿಯಾದರೂ ಸಹ ವಿಭಿನ್ನವಾಗಿ ವಿನೂತನವಾಗಿ ಜಿಲ್ಲಾ ನ್ಯಾಯಾಲಯ ಸಂಕೀರ್ಣ ತಲೆ ಎತ್ತಲಿದ್ದು, ರಾಜ್ಯಕ್ಕೆ ಮಾದರಿಯಾಗಿ ನಿಲ್ಲಲಿದೆ ಹಾಗೂ ನೀಲನಕ್ಷೆಯಂತೆ ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕೆ ನ್ಯಾಯಾಂಗ ಇಲಾಖೆ ಜತೆಗೆ ವಕೀಲರು ಸೇರದಿಂತೆ ಸರ್ವರ ಸಹಾಯ ಸಹಕಾರ ಅತ್ಯಗತ್ಯ ಎಂದು ಕರ್ನಾಟಕ ಉಚ್ಛ ನ್ಯಾಯಾಲಯ ಮುಖ್ಯ ನ್ಯಾಯಮೂರ್ತಿ ಅಭಯ ಶ್ರೀನಿವಾಸ ಓಕಾ ತಿಳಿಸಿದರು.
ನಗರದ ಜಿಲ್ಲಾ ನ್ಯಾಯಾಂಗ ಇಲಾಖೆ, ಲೋಕೋಪಯೋಗಿ ಇಲಾಖೆ, ಜಿಲ್ಲಾ ನ್ಯಾಯವಾದಿಗಳ ಸಂಘ ಸಂಯುಕ್ತಾಶ್ರಯದಲ್ಲಿ ನಗರದ ಜಿಲ್ಲಾಡಳಿತ ಭವನದ ಹಿಂಭಾಗದಲ್ಲಿ ಜಿಲ್ಲಾ ನ್ಯಾಯಾಲಯದ ಶಂಕುಸ್ಥಾಪನೆ ಸಮಾರಂಭವನ್ನು ಬೆಂಗಳೂರಿನಿಂದಲೇ ವರ್ಚುವಲ್ ಮೂಲಕ ಉದ್ಘಾಟಿಸಿ ಮಾತನಾಡಿದರು.
ಯಾದಗಿರಿ ಜಿಲ್ಲೆಯಲ್ಲಿ ಕಾರಣಾಂತರಗಳಿಂದಾಗಿ 10 ವರ್ಷಗಳಷ್ಟು ದೀರ್ಘ ಕಾಲದ ನಂತರ ಜಿಲ್ಲಾ ನ್ಯಾಯಾಲಯಕ್ಕೆ ಕಾಲ ಒದಗಿ ಬಂದಿದ್ದು, ಇನ್ನು ಮುಂದೆ ನ್ಯಾಯದಾನದಲ್ಲಿ ಯಾವುದೇ ವಿಳಂಬವಾಗಲಾರದು.
ನ್ಯಾಯಾಂಗ ಇಲಾಖೆ ಒಟ್ಟು 25 ಎಕರೆ ಜಾಗ ಅಗತ್ಯವಿದ್ದು, ಸಧ್ಯ ಸರ್ಕಾರ, ಜಿಲ್ಲಾಡಳಿತ 10 ಎಕರೆ ಜಾಗ ನೀಡಿದ್ದು ಇನ್ನುಳಿದ ಜಾಗ ಶೀಘ್ರವೇ ಲಭಿಸುವಂತಾಗಲಿ. ಇದೊಂದು ಪರಿಪೂರ್ಣ ಜಿಲ್ಲಾ ನ್ಯಾಯಾಲಯ ಸಂಕೀರ್ಣವಾಗಲಿ ಎಂದು ಆಶಯ ವ್ಯಕ್ತಪಡಿಸಿದರು.
ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶ ನಟರಾಜ ರಂಗಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯ ಹಿರಿಯ-ಕಿರಿಯ ನ್ಯಾಯವಾದಿಗಳು ಹಾಗೂ ಜನರ ಹೋರಾಟ ಮತ್ತು ಹಕ್ಕೊತ್ತಾಯದ ಪ್ರತಿಫಲವಾಗಿ ನ್ಯಾಯಾಲಯದ ಕಾರ್ಯ ಆರಂಭಗೊಂಡಿದೆ. ಇದನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ನಮ್ಮೆಲ್ಲರ ಜವಬ್ದಾರಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಪಿ.ಎಸ್.ದಿನೇಶ ಕುಮಾರ, ನ್ಯಾಯಮೂರ್ತಿ ಅಶೋಕ ಕಿಣಗಿ ಅಂತರ್ಜಾಲದ ಸಭೆಯ ಮುಖಾಂತರ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ವೇದಿಕೆ ಮೇಲೆ ಜಿಲ್ಲಾಧಿಕಾರಿಯಾದ ಡಾ. ರಾಗಪ್ರಿಯಾ ಆರ್, ಅವರು ಉಪಸ್ಥಿತರಿದ್ದರು.
ಪರಿಚಯ ಭಾಷಣವನ್ನು ಹಿರಿಯ ನ್ಯಾಯವಾದಿ ನರಸಿಂಗರಾವ ಕುಲಕರ್ಣಿ, ಪ್ರಧಾನ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಧೀಶ ಎಸ್.ಶ್ರೀಧರ ಸ್ವಾಗತಿಸಿದರೆ. ಪ್ರಧಾನ ಸಿವಿಲ್ ನ್ಯಾಯಾಧೀಶ ಮಲ್ಲಿಕಾರ್ಜುನ ಮಾಡ್ವಾಳ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಜಿಲ್ಲಾ ವಕೀಲರ ಸಂಘದ ವತಿಯಿಂದ ಆಡಳಿತಾತ್ಮಕ ನ್ಯಾಯಾಧೀಶರಿಗೆ ಸನ್ಮಾನಿಸಿ ಗೌರವಿಸಲಾಯಿತು.