ಹೆಲ್ಮೆಟ್ ಧರಿಸಿ ಜೀವ ರಕ್ಷಣೆಗೆ ಮುಂದಾಗಿ-ನ್ಯಾ. ಬಡಿಗೇರ ಕರೆ
ಕಾನೂನು ಅರಿವು-ನೆರವು ಕಾರ್ಯಕ್ರಮ
ಯಾದಗಿರಿಃ ಸರ್ಕಾರ ಕಾನೂನು ರೂಪಿಸುವುದು ಸಾರ್ವತ್ರಿಕ ರಕ್ಷಣೆಗಾಗಿ ಅವುಗಳನ್ನು ಪಾಲನೆ ಮಾಡಿದಲ್ಲಿ ಅಪಾಯಗಳಿಂದ ಪಾರಾಗಲು ಸಾಧ್ಯವಾಗುತ್ತದೆ ಎಂದು ಸ್ಥಳೀಯ ಹಿರಿಯ ಶ್ರೇಣಿ ನ್ಯಾಯಧೀಶ ಪ್ರಭು ಎನ್.ಬಡಿಗೇರ ಹೇಳಿದರು.
ಜಿಲ್ಲೆಯ ಶಹಾಪುರ ನಗರದ ಗ್ರಾಮಾಂತರ ವೃತ್ತ ಪೊಲೀಸ್ ನಿರೀಕ್ಷಕರ ಕಚೇರಿ ಆವರಣದಲ್ಲಿ ಕಾನೂನು ಅರಿವು ನೆರವು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅತಿವೇಗ ವಾಹನ ಚಾಲನೆ ಮಾಡುವದು, ಪರವಾನಿಗೆ ಇಲ್ಲದೆ ವಾಹನಗಳನ್ನು ಓಡಿಸುವದು ಮತ್ತು ರಸ್ತೆ ನಿಯಮಗಳನ್ನು ಪಾಲಿಸದೆ ಇರುವದು. ಅಜಾಗುರುಕತೆ ಸಂಕೇತಗಳಾಗಿವೆ. ಈ ಅವ್ಯವಸ್ಥೆಗಳಿಂದ ಜೀವಕ್ಕೆ ಅಪಾಯವಿದೆ. ಕಾರಣ ಸರ್ವರೂ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿಕೊಂಡು ದ್ವಿಚಕ್ರ ವಾಹನ ಚಾಲನೆ ಮಾಡಬೇಕು.
ಜೀವ ರಕ್ಷಣೆಗಳಿಗಾಗಿ ರೂಪಿಸಿಲಾದ ಕಾನೂನು ನಿಯಮಗಳನ್ನು ಪರಸ್ಪರ ಸಹಕಾರ ಮನೋಭಾವನೆಗಳಿಂದ ಪಾಲಿಸಬೇಕು. ಸಮರ್ಪಕವಾಗಿ ನಿಯಮ ಜಾರಿಗೊಳಿಸಲು ಕಠಿಣ ಕ್ರಮಕ್ಕೆ ಕೈಗೊಳ್ಳಲು ಸಾರ್ವಜನಿಕರು ಸಹಕರಿಸಬೇಕು ಎಂದು ತಿಳಿಸಿದರು. ಕಿರಿಯ ಶ್ರೇಣಿಯ ನ್ಯಾಯಧೀಶರಾದ ಎಚ್.ಎ.ಸಾತ್ವಿಕ ಮಾತನಾಡಿ, ಕಾನೂನು ನಿಯಮಗಳು ಜಾರಿಯಲ್ಲಿದ್ದು, ಅವುಗಳನ್ನು ಸಾರ್ವಜನಿಕರು ಸಮರ್ಪಕವಾಗಿ ಪಾಲನೆ ಮಾಡದ ಕಾರಣ ಅವ್ಯವಸ್ಥೆ ಉಂಟಾಗಿದೆ. ಜನರ ಅಸಹಕಾರದಿಂದಲೇ ಇಂದು ಅಪಘಾತಗಳು ಸಂಭವಿಸುತ್ತಿವೆ.
ದ್ವಿಚಕ್ರ ವಾಹನ ಸವಾರರು ಕಾಟಾಚಾರಕ್ಕಾಗಿ ಕಳಪೆ ಮಟ್ಟದ ಹೆಲ್ಮೆಟ್ ಧರಿಸುವುದು ಸರಿಯಲ್ಲ. ಐಎಸ್ಐ ಮಾರ್ಕ್ ಹೊಂದಿದ್ದ ಗುಣಮಟ್ಟದ ಹೆಲ್ಮೆಟ್ ಧರಿಸಿಕೊಳ್ಳಬೇಕು. ಅದರಿಂದ ನಿಮ್ಮ ಮತ್ತು ಕುಟುಬಂದ ರಕ್ಷಣೆ ಸಾಧ್ಯ ಎಂದರು. ವಕೀಲರಾದ ಎಂ.ಆರ್.ಬಕ್ಕಲ್ ಮಾತನಾಡಿ, ರಸ್ತೆ ಸುರಕ್ಷತಾ ನಿಯಮಗಳನ್ನು ಸಾರ್ವತ್ರಿಕವಾಗಿ ಪಾಲನೆ ಮಾಡಿದಲ್ಲಿ ದೇಶದಲ್ಲಿ ಜೀವ ಹಾನಿ ನಿಯಂತ್ರಣವಾಗಲು ಸಾಧ್ಯವಾಗುತ್ತದೆ. ಮನೆಯಿಂದ ಹೊರಡುವಾಗಲೇ ಹೆಲ್ಮೆಟ್ಗಳನ್ನು ಧರಿಸಿಕೊಂಡು ಹೋದಲ್ಲಿ ಅಪಾಯಗಳಿಂದ ಪಾರಾಗಲು ಸಾಧ್ಯವಾಗುತ್ತದೆ ಎಂದರು.
ಸರ್ಕಾರಿ ಸಹಾಯಕ ಅಭಿಯೋಜಕ ಗುರುಲಿಂಗಪ್ಪ ತೇಲಿ, ತಾಲೂಕಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಅಮರೇಶ ದೇಸಾಯಿ, ಹೇಮರಡ್ಡಿ ಕೊಂಗಂಡಿ ಉಪಸ್ಥಿತರಿದ್ದರು. ಸಿಪಿಐ ನಾಗರಾಜ ಜೆ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಿವನಗೌಡ ನಿರೂಪಿಸಿದರು. ಠಾಣಾ ಪಿ.ಎಸ್.ಐ ಜ್ಯೋತಿ ಹೊಡಲ್ ಸ್ವಾಗತಿಸಿ ವಂದಿಸಿದರು.