ಕಾಂಗ್ರೆಸ್ ಅಧ್ಯಕ್ಷರಿಗೆ ಜಾಮೀನು ಪಡೆಯುವ ಸ್ಥಿತಿ ಬಂದಿದ್ಯಾಕೆ – ಕಟೀಲು ವಾಗ್ಬಾಣ
ಬೆಂಗಳೂರಃ ಕಾಮಾಲೆ ಕಣ್ಣಿಗೆ ಜಗವೆಲ್ಲ ಹಳದಿ ಎನ್ನುವಂತೆ, ಕಾಂಗ್ರೆಸ್ ಕಣ್ಣಿಗೆ ಎಲ್ಲರೂ ಭ್ರಷ್ಟಚಾರಿಗಳಂತೆ ಕಾಣುತ್ತಾರೆ. ಅವರ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು, ಮಾಜಿ ಅಧ್ಯಕ್ಷರು ಮತ್ತು ರಾಜ್ಯಧ್ಯಕ್ಷರು ಜಾಮೀನು ಪಡೆದು ಹೊರಗಿದ್ದಾರೆ. ಇವರೆಲ್ಲ ಜಾಮೀನು ಯಾಕೆ ಪಡೆದಿದ್ದಾರೆ ಎಂಬುದನ್ನು ಸಿದ್ರಾಮಯ್ಯನವರು ಮೊದಲು ಹೇಳಲಿ ಎಂದು ಬಿಜೆಪಿ ರಾಜ್ಯಧ್ಯಕ್ಷ ನಳೀನಕುಮಾರ ಕಟೀಲ್ ಕಾಂಗ್ರೆಸ್ಸಿಗರಿಗೆ ಟ್ವಿಟರ್ ಮೂಲಕ ತಿರುಗೇಟು ನೀಡಿದರು.
ಕೋವಿಡ್ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ನಾಲ್ಕು ತಿಂಗಳಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆಸಿದೆ ಎಂದು ಆರೋಪಿಸುವ ಕಾಂಗ್ರೆಸ್, ವೈದ್ಯಕೀಯ ಸಲಕರಣೆಗಳ ಖರೀದಿಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಅನುಮಾನಗಳಿದ್ದಲ್ಲಿ ಬಗೆಹರಿಸುವುದಾಗಿ ಸಿಎಂ ಯಡಿಯೂರಪ್ಪನವರು ಹೇಳಿದ ಮೇಲೂ ಕಾಂಗ್ರೆಸ್ ನಾಯಕರು ಮತ್ತದೇ ಆರೋಪ ಮಾಡುವದು ಸರಿಯಲ್ಲ. ಅಲ್ಲದೆ ಕೊರೊನಾದಿಂದ ಜನ ಹಾದಿ ಬೀದಿಯಲ್ಲಿ ಸಾಯುತ್ತಿದ್ದಾರೆ ಎಂದು ಹಸಿ ಸುಳ್ಳು ಹೇಳುವ ಮೂಲಕ ಜನರಲ್ಲಿ ಭೀತಿ ಹುಟ್ಟಿಸುತ್ತಿರುವದು ಶೋಭೆ ತರುವದಲ್ಲ.
ಕೊರೊನಾ ಸಂದರ್ಭದಲ್ಲಿ ಜನರಲ್ಲಿ ಆತ್ಮಸ್ಥೈರ್ಯ ಮೂಡಿಸುವ ಕೆಲಸವನ್ನು ಕಾಂಗ್ರೆಸ್ ಸೇರಿದಂತೆ ಎಲ್ಲಾ ಜನಪ್ರತಿನಿಧಿಗಳು ಮಾಡಬೇಕು. ಅದು ಬಿಟ್ಟು ರಾಜಕಾರಣ ಮಾಡುವದು ಅದರಲ್ಲೂ ಹಸಿ ಸುಳ್ಳು ಸೃಷ್ಟಿ ಮಾಡುವದು ಸರಿಯಲ್ಲ. ಕೊರೊನಾ ವಿರುದ್ಧ ಒಗ್ಗಟ್ಟಿನಿಂದ ಹೋರಾಟ ನಡೆಸುವ ಮೂಲಕ ಜನರ ಆತಂಕ ದೂರ ಮಾಡಬೇಕಿದೆ ಎಂದು ಅವರು ಸಲಹೆ ನೀಡಿದ್ದಾರೆ.